ಅತ್ಯಾಚಾರ ಪ್ರಕರಣ: ಅಪ್ಪ ಆಯ್ತು, ಈಗ ಮಗನಿಗೂ ಜೈಲು ಶಿಕ್ಷೆ
ನವದೆಹಲಿ, ಏಪ್ರಿಲ್ 26: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುವಿನ ಮಗನನ್ನು ಕೂಡ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಪಡಿಸಲಾಗಿದೆ.
ಮಹಿಳೆಯೊಬ್ಬರ ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಬಾಪು ಮಗ ನಾರಾಯಣ್ ಸಾಯಿಗೆ ಸೂರತ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್ 30ರಂದು ಪ್ರಕಟಿಸಲಾಗುವುದು.
ಅತ್ಯಾಚಾರ ಪ್ರಕರಣ: ಅಸಾರಾಂ ಬಾಪು ಮಧ್ಯಂತರ ಜಾಮೀನು ಅರ್ಜಿ ವಜಾ
2013ರಲ್ಲಿ ಸೂರತ್ ಮೂಲದ ಸಹೋದರಿಯರು ತಮ್ಮ ಮೇಲೆ ನಿರಂತರ ಅತ್ಯಾಚಾರ ನಡೆದಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಅಸಾರಾಂ ಬಾಪು ಮತ್ತು ಆತನ ಮಗ ನಾರಾಯಣ ಸಾಯಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಿದ್ದರು.
ಸಹೋದರಿಯರಲ್ಲಿ ಒಬ್ಬರು ತಾವು ಆಶ್ರಮದಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲಿ ನಾರಾಯಣ್ ಸಾಯಿ 2002ರಿಂದ 2005ರವರೆಗೆ ನಿರಂತರ ಅತ್ಯಾಚಾರ ಎಸಗಿದ್ದ ಎಂದು ದೂರು ನೀಡಿದ್ದರು. ತೀವ್ರ ಕಾರ್ಯಾಚರಣೆ ನಡೆಸಿದ ಬಳಿಕ 2013ರಲ್ಲಿ ನಾರಾಯಣ್ನನ್ನು ಬಂಧಿಸಲಾಗಿತ್ತು.
ಕ್ಷಮಾದಾನಕ್ಕಾಗಿ ಅರ್ಜಿ ಹಾಕಿದ 'ದೇವ ಮಾನವ' ಅಸಾರಾಮ್ ಬಾಪು
ಆತನ ತಂದೆ ಅಸಾರಾಂ ಬಾಪುನನ್ನು ಜೋಧಪುರದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗಿದೆ.
ಅಸಾರಾಂಗೆ ಜೀವಾವಧಿ
2013ರ ಅತ್ಯಾಚಾರ ಪ್ರಕರಣದಲ್ಲಿ ಏಪ್ರಿಲ್ 25, 2018ರಂದು ಜೋಧಪುರದ ಎಸ್ ಸಿ ಎಸ್ ಟಿ ನ್ಯಾಯಾಲಯ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ನೀಡಲಾಗಿತ್ತು. ಉಳಿದ ಇಬ್ಬರು ಆರೋಪಿಗಳಿಗೆ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಆಶ್ರಮದಲ್ಲಿ ಅತ್ಯಾಚಾರ
16 ವರ್ಷ ವಯಸ್ಸಿನ ಯುವತಿಯನ್ನು 2013ರ ಆಗಸ್ಟ್ 15 ರಂದು ಜೋಧಪುರದ ಮಾಣಾಯಿ ಆಶ್ರಮಕ್ಕೆ ಅಸಾರಾಮ್ ಬಾಪು ಕರೆಸಿಕೊಂಡು ಅತ್ಯಾಚಾರ ಎಸಗಿದ್ದ. ಆಗಸ್ಟ್ 20ರಂದು ಸಂತ್ರಸ್ತ ಯುವತಿಯ ಪೋಷಕರು ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಆಗಸ್ಟ್ 31ರಂದು ಜೋಧಪುರ ಪೊಲೀಸರು ಅಸಾರಾಮ್ ಬಾಪುನನ್ನು ಬಂಧಿಸಿದ್ದರು.
ಒಳ್ಳೇ ದಿನಗಳು ಬರುತ್ತವೆ: ವೈರಲ್ ಆದ ಅಸಾರಾಮ್ ಫೋನ್ ಇನ್ ಸಂಭಾಷಣೆ
ಅಪ್ಪ-ಮಗನ ವಿರುದ್ಧ ದೂರು
2002-05ರಲ್ಲಿ ಆಶ್ರಮದಲ್ಲಿದ್ದ ತಮ್ಮ ಮೇಲೆ ಅಸಾರಾಂ ಹಾಗೂ ಮಗ ನಾರಾಯಣ್ ಸಾಯಿ ಅತ್ಯಾಚಾರ ಎಸಗಿದ್ದರು ಎಂದು ಅಹ್ಮದಾಬಾದ್ ನಿವಾಸಿಗಳಾಗಿರುವ ಸಹೋದರಿಯರಿಬ್ಬರು ಕೇಸು ದಾಖಲಿಸಿದ್ದರು. ನಾರಾಯಣ್ ಸಾಯಿ ವಿರುದ್ಧ ಸೂರತ್ ನ ಜೆಹಾಂಗೀರ್ ಪುರ್ ನಲ್ಲಿ ಕೇಸು ದಾಖಲಿಸಲಾಗಿತ್ತು.
|
1,011 ಪುಟಗಳ ಆರೋಪಪಟ್ಟಿ
ಅಸಾರಾಂ ಹಾಗೂ ನಾರಾಯಣ ಸಾಯಿ ವಿರುದ್ಧ ಸುಮಾರು 1,011 ಪುಟಗಳಷ್ಟು ಆರೋಪಪಟ್ಟಿಯನ್ನು ಜೋಧಪುರದ ಕೋರ್ಟಿಗೆ ಸಲ್ಲಿಸಲಾಗಿತ್ತು. 121 ದಾಖಲೆ ಪತ್ರ, ಹೇಳಿಕೆಗಳು ಹಾಗೂ 58 ಸಾಕ್ಷಿಗಳ ಹೆಸರನ್ನು ಇದರಲ್ಲಿ ನಮೂದಿಸಲಾಗಿದೆ. ಅಸಾರಾಂ ಹಾಗೂ ಇತರೆ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 342,376(ಎಫ್), 376 (ಡಿ), 354(ಎ), 506 ಹಾಗೂ 109 ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ನಾಪತ್ತೆಯಾಗಿದ್ದ ನಾರಾಯಣ ಸಾಯಿಯನ್ನು ತೀವ್ರ ಕಾರ್ಯಾಚರಣೆ ಬಳಿಕ 2013ರ ಡಿಸೆಂಬರ್ 4ರಂದು ಬಂಧಿಸಲಾಗಿತ್ತು.