ಕೇಂದ್ರ ಸಚಿವ ನಕ್ವಿಗೆ ಜೈಲು, ನಂತರ ಸಿಕ್ತು ಬೇಲು
ರಾಮಪುರ, ಜ. 14: ಚುನಾವಣೆ ಆಯೋಗ ಎಂದರೆ ಸುಮ್ಮನೆ ಅಲ್ಲ. ಚುನಾವಣೆ ನೀತಿ ಸಂಹಿತೆ ಎಂದರೆ ಕೇವಲ ಬೆದರು ಬೊಂಬೆಯೂ ಅಲ್ಲ ಎಂಬುದು ಸಾಬೀತಾಗಿದೆ.
ಲೋಕಸಭೆ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೇಂದ್ರ ಅಲ್ಪಸಂಖ್ಯಾತ ಇಲಾಖೆ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರಿಗೆ ಉತ್ತರ ಪ್ರದೇಶದ ರಾಮಪುರ ಸೆಶನ್ಸ್ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ, 4,000 ರು. ದಂಡವನ್ನೂ ವಿಧಿಸಿದೆ.
ವಿಶೇಷ ಎಂದರೆ ಈ ಪ್ರಕರಣ ದಾಖಲಾಗಿದ್ದು ಕಳೆದ ಲೋಕಸಭೆ ಚುನಾವಣೆಯಲ್ಲಿ ಅಲ್ಲ. ಬದಲಾಗಿದೆ 2009ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ. ರಾಮಪುರದಲ್ಲಿ ಪ್ರಚಾರ ನಡೆಸುತ್ತಿದ್ದ ನಕ್ವಿ ಮೇಲೆ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣ ದಾಖಲಾಗಿತ್ತು. ಈ ಆರೋಪವೀಗ ಸಾಬೀತಾಗಿದೆ.
ಆದರೆ, ಅವರಿಗೆ ಶಿಕ್ಷೆ ವಿಧಿಸಿರುವುದು ಕೇವಲ ಒಂದು ವರ್ಷ. ಆದ್ದರಿಂದ ನಕ್ವಿ ತಮ್ಮ ಸಂಸದ ಸ್ಥಾನ ಕಳೆದುಕೊಳ್ಳುವುದಿಲ್ಲ. ಶಿಕ್ಷೆಗೆ ಗುರಿಯಾದರೂ ತಕ್ಷಣ ಜಾಮೀನು ನೀಡಿರುವ ಕಾರಣ ಮುಕ್ತಾರ್ ಅಬ್ಬಾಸ್ ನಕ್ವಿ ಜೈಲು ಪಾಲಾಗುವುದರಿಂದ ತಪ್ಪಿಸಿಕೊಂಡಿದ್ದಾರೆ.