ಮಾನವೀಯತೆ ಮೆರೆದ ಎಚ್ಡಿಕೆ: ಶಿಮ್ಲಾದಿಂದ ತವರಿನತ್ತ ಮೈಸೂರಿನ ಪದ್ಮಾ
ಶಿಮ್ಲಾ, ಆಗಸ್ಟ್ 02: ಮಾನವೀಯತೆ ಮೆರೆದು, ಸಕಾಲಕ್ಕೆ ನೆರವಾದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಂದಾಗಿ ಶಿಮ್ಲಾದಲ್ಲಿದ್ದ ಮೈಸೂರಿನ ಪದ್ಮಾ ಎಂಬುವವರು ಇಂದು ತವರಿಗೆ ವಾಪಸ್ಸಾಗುತ್ತಿದ್ದಾರೆ!
ಭಾಷೆಯ ಸಮಸ್ಯೆಯಿಂದ ಬಳಲುತ್ತಿದ್ದ ಪದ್ಮಾ ಅವರಿಗೆ ಕನ್ನಡವಲ್ಲದೆ ಬೇರೆ ಭಾಷೆ ಬರುತ್ತಿರಲಿಲ್ಲ. ಇದರಿಂದಾಗಿ ಅವರಿಗೆ ಸಂವಹನ ಮಾಡುವುದಕ್ಕೆ ಸಾಧ್ಯವಾಗದೆ, ಶಿಮ್ಲಾದಲ್ಲಿರುವ ಹಿಮಾಚಲ ಹಾಸ್ಪಿಟಲ್ ಆಫ್ ಮೆಂಟರ್ ಹೆಲ್ತ್ ಅಂಡ್ ರಿಹೆಬಿಲಿಟೇಶನ್ ನಲ್ಲಿ ಕಳೆದ ಎರಡು ವರ್ಷಗಳಿಂದ ತಂಗಿದ್ದರು.
ಶಿಮ್ಲಾ ಆಸ್ಪತ್ರೆಯಲ್ಲಿರುವ ಮೈಸೂರು ಮಹಿಳೆಯ ನೆರವಿಗೆ ನಿಂತ ಎಚ್ಡಿಕೆ
ಈ ಕುರಿತು ಮಾಧ್ಯಮಗಳ ವರದಿಯನ್ನು ಕಂಡ ಎಚ್ ಡಿ ಕುಮಾರಸ್ವಾಮಿ ಅವರು, ಅಗತ್ಯ ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರಿಗೆ ಸೂಚಿಸಿದ್ದರು. ಅವರನ್ನು ವಾಪಸ್ ಮೈಸೂರಿಗೆ ಕರೆದುಕೊಂಡುಬರುವುದಕ್ಕೆ ವ್ಯವಸ್ಥೆ ಮಾಡುವಂತೆ ಆದೇಶಿಸಿದ್ದರು. ಇದೀಗ ಕಾಲ ಕೂಡಿ ಬಂದಿದ್ದು, ಕರ್ನಾಟಕದ ಅಧಿಕಾರಿಗಳಲು, ಪದ್ಮಾ ಅವರ ಸಂಬಂಧಿಗಳು ಶಿಮ್ಲಾಕ್ಕೆ ತೆರಳಿ ಪದ್ಮಾ ಅವರನ್ನು ಮೈಸೂರಿಗೆ ಕರೆತರುತ್ತಿದ್ದಾರೆ.
ಏನಿದು ಘಟನೆ?
ಮೈಸೂರಿನ ಪದ್ಮಾ ಎಂಬುವವರು ಎರಡು ವರ್ಷಗಳಿಂದ ಶಿಮ್ಲಾದಲ್ಲಿ ವಾಸವಿದ್ದರು. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಹಿಮಾಚಲ ಹಾಸ್ಪಿಟಲ್ ಆಫ್ ಮೆಂಟರ್ ಹೆಲ್ತ್ ಅಂಡ್ ರಿಹೆಬಿಲಿಟೇಶನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಶಿಮ್ಲಾಕ್ಕೆ ಹೋಗಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬಹುಶಃ ಯಾವುದೋ ಯಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಅವರು ಕಾಣೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಕರ್ನಾಟಕ ಸರ್ಕಾರದ ಗಮನಕ್ಕೆ ತಂದ ಹಿಮಾಚಲ ಪ್ರದೇಶ ಸರ್ಕಾರ
ಘಟನೆ ಕುರಿತು ಕರ್ನಾಟಕ ಸರ್ಕಾರದ ಗಮನವನ್ನು ಸೆಳೆದ ಹಿಮಾಚಲ ಪ್ರದೇಶ ಸರ್ಕಾರ ಅವರಿಗೆ ಭಾಷೆ ಗೊತ್ತಿಲ್ಲದ ಕಾರಣ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಅವರು ಮೂಲತಃ ಕರ್ನಾಟಕದವರು. ಅವರ ಮಾನಸಿಕ ಸಮಸ್ಯೆಯಗಳು ಗುಣಮುಖವಾಗಿದೆ. ಅವರನ್ನು ವಾಪಸ್ ಅವರ ಕುಟುಂಬಕ್ಕೆ ಸೇರಿಸುವ ಬಗ್ಗೆ ಕ್ರಮ ಕೈಗೊಳ್ಳಿ. ಅದಕ್ಕೆ ಹಿಮಾಚಲ ಸರ್ಕಾರದ ಸಹಕಾರವಿದೆ ಎಂದು ಅಲ್ಲಿನ ಸರ್ಕಾರದ ಉನ್ನತಾಧಿಕಾರಿಗಳು ಕರ್ನಾಟಕ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದರು.
|
ಸಕಾಲದಲ್ಲಿ ನೆರವಾದ ಕುಮಾರಸ್ವಾಮಿ
ಪದ್ಮಾ ಅವರ ಕುರಿತು ಮಾಧ್ಯಮಗಳಲ್ಲಿ ಓದಿದ್ದ ಎಚ್ ಡಿ ಕುಮಾರಸ್ವಾಮಿ, ಅವರ ನೆರವಿಗೆ ನಿಂತರು. ಅಷ್ಟರಲ್ಲಿ ಹಿಮಾಚಲ ಸರ್ಕಾರದ ಮನವಿಯೂ ಬಂದಿತ್ತು. ಈ ಕುರಿತು ಕೂಡಲೆ ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಇವರೆಲ್ಲರ ಪ್ರಯತ್ನದಿಂದಾಗಿ ಕೊನೆಗೂ ಪದ್ಮಾ ಅವರು ಸಂಬಂಧಿಗಳನ್ನು ಕೂಡಿಕೊಂಡಿದ್ದು, ತವರಿಗೆ ವಾಪಸ್ಸಾಗುತ್ತಾರೆ.
ಮನೆಯಲ್ಲಿ ಹಣಕಾಸಿನ ಸಮಸ್ಯೆ
ಮೈಸೂರಿನಲ್ಲಿರುವ ಪದ್ಮಾ ಅವರ ಕುಟುಂಬ ಆರ್ಥಿಕ ಸಮಸ್ಯೆಯಿಮದ ಬಳಲುತ್ತಿರುವ ಕಾರಣ ಆರು ತಿಂಗಳ ಕಾಲ ಪದ್ಮಾ ಅವರ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ನಿರ್ಗತಿಕ ಮಹಿಳೆಯರ ಕೇಂದ್ರ ವಹಿಸಲಿದೆ. ಪದ್ಮಾ ಅವರ ತಂದೆ ತೀರಿಕೊಂಡಿದ್ದು, ಪತಿ ಅವರನ್ನು ತೊರೆದಿದ್ದಾನೆ. ಆದ್ದರಿಂದ ಅಮ್ಮನೊಂದಿಗೆ ಪದ್ಮಾ ವಾಸಿಸಬೇಕಿದೆ. ಆದರೆ ಕಡುಬಡ ಕುಟುಂಬವಾಗಿರುವುದರಿಂದ ಪದ್ಮಾ ಅವರನ್ನು ಕೆಲದಿನಗಳ ಕಾಲ ನೋಡಿಕೊಳ್ಳುವಂತೆ ಸರ್ಕಾರಕ್ಕೆ ಈ ಕುಟುಂಬ ಮನವಿ ಮಾಡಿದೆ.