ಕೇದಾರನಾಥ ಮತ್ತೆ ಬೆಳಗುತ್ತದೆ ಎಂದು ನನ್ನ ಒಳ ಧ್ವನಿ ಹೇಳುತ್ತಿದೆ: ಪ್ರಧಾನಿ ಮೋದಿ
ಡೆಹ್ರಾಡೂನ್, ನವೆಂಬರ್ 05: ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರಾಖಂಡದಲ್ಲಿ ಕೇದಾರನಾಥದಲ್ಲಿ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಿದ್ದಾರೆ. ಆ ಬಳಿಕ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ "ಕೇದಾರನಾಥ ಮತ್ತೆ ಬೆಳಗುತ್ತದೆ ಎಂದು ನನ್ನ ಒಳ ಧ್ವನಿ ಹೇಳುತ್ತಿದೆ," ಎಂದು ಹೇಳಿದ್ದಾರೆ.
2013ರಲ್ಲಿ ಉತ್ತರಾಖಂಡದಲ್ಲಿ ಭಾರೀ ಪ್ರವಾಹ ಉಂಟಾದ ಸಂದರ್ಭದಲ್ಲಿ ಕೇದಾರನಾಥದಲ್ಲಿ ಭಾರೀ ಹಾನಿ ಉಂಟಾಗಿದೆ ಈ ಸಂದರ್ಭದಲ್ಲಿ ಕೇದಾರನಾಥದಲ್ಲಿ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆಯು ನಾಶವಾಗಿತ್ತು. ಈ ಹಿನ್ನೆಲೆಯಿಂದಾಗಿ ಕೇಂದ್ರ ಸರ್ಕಾರವು ಉತ್ತರಾಖಂಡದ ಕೇದಾರನಾಥದಲ್ಲಿ ಹಲವು ಯೋಜನೆಗಳನ್ನು ರೂಪಿಸಿಕೊಂಡು ಕಾಮಗಾರಿ ನಡೆಸುತ್ತಿದೆ. ಕೇಂದ್ರ ಸರ್ಕಾರವು ಆದಿ ಗುರು ಶಂಕರಾಚಾರ್ಯರ ಪ್ರತಿಮೆಯನ್ನು ನಿರ್ಮಾಣ ಮಾಡಲು ಸೂಚನೆ ನೀಡಿದ್ದು ಅದರಂತೆ ಈ ಪ್ರತಿಮೆ ನಿರ್ಮಾಣ ಮಾಡಲಾಗಿದೆ.
ಕೇದಾರನಾಥದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ
ಈ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆ ಹಾಗೂ ಸಮಾದಿಯನ್ನು ಅನಾವರಣ ಮಾಡಿದ ಬಳಿಕ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಶ್ರೀ ಆದಿಶಂಕರಾಚಾರ್ಯರ ಸಮಾದಿಯನ್ನು ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ನೀವೆಲ್ಲರೂ ಇಲ್ಲಿ ಇದ್ದೀರಿ. ಈ ಸಂದರ್ಭದಲ್ಲಿ ಭಕ್ತರು ಬಹಳ ಉತ್ಸಾಹಿತರಾಗಿದ್ದಾರೆ. ಇಂದು ನಮ್ಮ ದೇಶದ ಎಲ್ಲಾ ಮಠಗಳು ಮತ್ತು ಜ್ಯೋತಿರ್ಲಿಂಗಗಳು ಈ ಕಾರ್ಯದಲ್ಲಿ ಜೊತೆಯಾಗಿದೆ," ಎಂದು ಪ್ರಧಾನಿ ತಿಳಿಸಿದ್ದಾರೆ.
2013 ರ ವಿನಾಶಕಾರಿ ಪ್ರವಾಹದ ನಂತರ ಕೇದಾರಪುರಿದಲ್ಲಿ ಪುನರ್ನಿರ್ಮಾಣ ಕಾರ್ಯಕ್ಕಾಗಿ ಕೇದಾರ ಬಾಬಾ ಕಾರಣ ಎಂದು ಪ್ರಧಾನ ಮಂತ್ರಿ ಮನ್ನಣೆ ನೀಡಿದ್ದಾರೆ. "2013 ರ ವಿನಾಶಕಾರಿ ಪ್ರವಾಹದ ಬಳಿಕ ಕೇದಾರನಾಥ ಮತ್ತೆ ಅಭಿವೃದ್ಧಿ ಹೊಂದಲು ಸಾಧ್ಯವೇ ಎಂದು ಜನರು ಚಿಂತಿಸುತ್ತಿದ್ದರು. ಆದರೆ ನನ್ನ ಒಳ ಧ್ವನಿಯು ಯಾವಾಗಲೂ ಕೇದಾರನಾಥ ಮತ್ತೆ ಅಭಿವೃದ್ಧಿ ಆಗುತ್ತದೆ ಎಂದು ಹೇಳುತ್ತಿದೆ," ಎಂದರು. ಇನ್ನು ಈ ಸಂದರ್ಭದಲ್ಲೇ ಕೇದಾರನಾಥದಲ್ಲಿ ಶ್ರೀ ಆದಿಶಂಕರಾಚಾರ್ಯರ ಸಮಾದಿಯ ಮುಂದೆ ಕುಳಿತು ನನಗೆ ಆಗುವ ಅನುಭವವನ್ನು ಹೇಳಲು ಸಾಧ್ಯವಿಲ್ಲ ಎಂದು ಕೂಡಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಡ್ರೋನ್ ಫೂಟೇಜ್ ಮೂಲಕ ಅವಲೋಕನ ಮಾಡುತ್ತಿದ್ದ ಮೋದಿ
"ನಾನು ನಿರಂತರವಾಗಿ ಕೇದಾರನಾಥದ ಅಭಿವೃದ್ದಿ ಕಾರ್ಯಗಳನ್ನು ಪರಿಶೀಲನೆ ಮಾಡುತ್ತಿದ್ದೇನೆ. ನಾನು ಡ್ರೋನ್ ಫೂಟೇಜ್ ಮೂಲಕ ನಾವು ದೆಹಲಿಯಲ್ಲಿ ಕುಳಿತು ಕೇದಾರನಾಥದ ಅಭಿವೃದ್ದಿ ಕಾರ್ಯವನ್ನು ಅವಲೋಕನ ಮಾಡುತ್ತಿದ್ದೆವು. ಇಲ್ಲಿ ಈ ಕಾರ್ಯಕ್ಕಾಗಿ ಸಲಹೆ, ಸಹಕಾರ ನೀಡಿದ ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ," ಎಂದು ಪ್ರಧಾನಿ ತಿಳಿಸಿದರು.
ಕೇದಾರನಾಥದಲ್ಲಿ 180 ಕೋಟಿ ರೂ ಮೌಲ್ಯ ಹಲವು ಯೋಜನೆಗಳಿಗೆ ಮೋದಿ ಚಾಲನೆ
"ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ದೀಪೋತ್ಸವವನ್ನು ಆಚರಣೆ ಮಾಡಲಾಗಿದೆ. ವಾರಣಾಸಿಯಲ್ಲಿ ಕಾಶಿ ವಿಶ್ವನಾಥ್ ಕಾರಿಡಾರ್ ನಿರ್ಮಾಣ ಕಾರ್ಯವನ್ನು ಕ್ಷಿಪ್ರವಾಗಿ ನಡೆಯುತ್ತಲಿದೆ. ಈ ಎಲ್ಲಾ ಗುರಿಯನ್ನು ಮುಟ್ಟುವ ನಿಟ್ಟಿನಲ್ಲಿ ದೇಶವು ಕಾರ್ಯ ನಿರ್ವಹಣೆ ಮಾಡುತ್ತಿದೆ," ಎಂದು ಕೂಡಾ ಪ್ರಧಾನಿ ಮೋದಿ ಉಲ್ಲೇಖ ಮಾಡಿದ್ದಾರೆ.
ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡುವ ಮುನ್ನ ಎಎನ್ಐ ಜೊತೆ ಮಾತನಾಡಿದ ದೇವಾಲಯದ ಪುರೋಹಿತರಾದ ಬಾಘಿಶ್ ಲಿಂಗ, "ನಾವೆಲ್ಲರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತ ಮಾಡುತ್ತೇವೆ. ಇಂದು ಪ್ರಧಾನಿ ಇಲ್ಲಿಗೆ ಆಗಮಿಸಲಿದ್ದಾರೆ. ಇಲ್ಲಿ ಪ್ರಧಾನಿ ಮೋದಿ ಮಹಾ ರುದ್ರ ಅಭಿಷೇಕವನ್ನು ಮಾಡಲಿದ್ದಾರೆ. ದೇಶದ ಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಕೇದಾರನಾಥ ದೇವಾಲವನ್ನು ಸಂಪೂರ್ಣವಾಗಿ ಹೂವುಗಳಿಂದ ಅಲಂಕಾರ ಮಾಡಲಾಗಿದೆ," ಎಂದು ವಿವರಿಸಿದ್ದಾರೆ.
ಇಂದು ಉತ್ತರಾಖಂಡಕ್ಕೆ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ 180 ಕೋಟಿ ರೂಪಾಯಿ ಮೌಲ್ಯದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಚಾಲನೆ ನೀಡಲಿದ್ದಾರೆ. ಸಂಗಮ್ ಘಾಟ್ ಪುನರ್ ಅಭಿವೃದ್ಧಿ, ಪ್ರಾಥಮಿಕ ಚಿಕಿತ್ಸೆ ಮತ್ತು ಪ್ರವಾಸಿ ಸೌಲಭ್ಯ ಕೇಂದ್ರ, ಆಡಳಿತ ಕಚೇರಿ ಮತ್ತು ಆಸ್ಪತ್ರೆ, ಎರಡು ಅತಿಥಿ ಗೃಹ, ವಿಚಾರಣೆ ಕೇಂದ್ರ, ಮಂದಾಕಿನಿ ಅಷ್ಟಪಥ ಸಾಲು ನಿರ್ವಹಣೆ, ಮಳೆ ನಿರಾಶ್ರಿತರ ಕೇಂದ್ರ, ಸರಸ್ವತಿ ನಾಗರಿಕ ಸೌಕರ್ಯ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
Recommended Video
(ಒನ್ಇಂಡಿಯಾ ಸುದ್ದಿ)