'ಪ್ರಣಯ್ ನನಗೆ ನೀಡಿದ ಅತ್ಯಮೂಲ್ಯ ಉಡುಗೊರೆ ನನ್ನ ಗರ್ಭದಲ್ಲಿದೆ'
ನಲ್ಗೊಂಡ(ತೆಲಂಗಾಣ), ಸೆಪ್ಟೆಂಬರ್ 18: 'ನನ್ನ ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ಪ್ರಣಯ್ ನಲ್ಲಿ ಒಂದು ಕನಸಿತ್ತು. ಆ ಮಗುವನ್ನು ಯಾವ ಜಾತಿಯ ಪೂರ್ವಗ್ರಹದ ಕರಿನೆರಳೂ ಇಲ್ಲದೆ ಬೆಳೆಸಬೇಕು ಅಂತ' ಎಂದು ಗದ್ಗದಿತರಾಗುತ್ತಾರೆ ಅಮೃತಾ.
ತೆಲಂಗಾಣದ ಮಿರ್ಯಾಲಗುಡದಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಸಾವಿಗೀಡಾದ ಪ್ರಣಯ್ ಪತ್ನಿ ಅಮೃತಾ ತಮ್ಮ ಮುಗ್ಧ ಪ್ರೇಮದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
'ಗರ್ಭಪಾತಕ್ಕೆ ಅಪ್ಪ ಒತ್ತಾಯಿಸಿದ್ದು ಯಾಕೆ ಅಂತ ಈಗ ತಿಳಿಯುತ್ತಿದೆ!'
'ನಮ್ಮ ಅತ್ಯಂತ ಸುಂದರ ಬದುಕನ್ನು ಈ ಜಾತಿಯ ಹುಚ್ಚು ಕಿತ್ತುಕೊಂಡಿದೆ. ಪ್ರಣಯ್ ಇನ್ನೆಂದೂ ವಾಪಸ್ ಬರಲಾರರು. ಆದರೆ ಅವರು ನನಗೆ ನೀಡಿದ ಅತ್ಯಮೂಲ್ಯ ಉಡುಗೊರೆಯಾಗಿ ಈ ಮಗು ನನ್ನೊಂದಿಗೆ ಬದುಕಿನ ಪೂರ್ತಿ ಇರುತ್ತದೆ. ನನಗಷ್ಟು ಸಾಕು.' ಇದು ಅಮೃತಾ ಅವರ ಭಾವುಕ ಮಾತು.
ಪ್ರೀತಿಸುವುದನ್ನು ಬಿಟ್ಟು ನಮಗೇನೂ ಗೊತ್ತಿರಲಿಲ್ಲ!
'ಪ್ರಣಯ್ ಗೆ 24 ವರ್ಷ ವಯಸ್ಸು, ನನಗೆ 21. ಬದುಕಿನ ಯಾವ ಸಂಕೀರ್ಣತೆಯ ಬಗ್ಗೆಯೂ ನಮಗೆ ಅರಿವಿರಲಿಲ್ಲ. ದ್ವೇಷ, ಅಸೂಯೆಯ ಪರಿಚಯವೂ ಇರಲಿಲ್ಲ. ನಮಗೆ ಗೊತ್ತಿದ್ದಿದ್ದು ಪ್ರೀತಿಸುವುದು ಅಷ್ಟೆ! ನಾವಿಬ್ಬರೂ ಪರಸ್ಪರ ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದೆವು...ಆದರೆ ನಮ್ಮ ಈ ಸುಂದರ ಬದುಕನ್ನು ಕ್ರೂರ ಜಗತ್ತು ಕಿತ್ತುಕೊಂಡಿತು' ಎನ್ನುವಾಗ ಅರಿವಿಲ್ಲದೆ ಅಮೃತಾ ಕಣ್ಣಲ್ಲಿ ನೀರು ಹರಿಯುತ್ತದೆ.
ಈ ಮಗು ಪ್ರಣಯ್ ನನಗೆ ನೀಡಿದ ಉಡುಗೊರೆ
"ಪ್ರಣಯ್ ನನಗೆ ನೀಡಿದ ಅತ್ಯಮೂಲ್ಯ ಉಡುಗೊರೆ ಎಂದರೆ ನನ್ನ ಹೊಟ್ಟೆಯಲ್ಲಿರುವ ಮಗು. ಈ ಮಗು ಸಮಾಜದ ಎಲ್ಲ ಅಡೆತಡೆಗಳನ್ನು ಮೀರಿ ಬೆಳೆಯುವಂತೆ ಬೆಳೆಸುತ್ತೇನೆ. ನನಗೆ ನನ್ನ ತಂದೆ-ತಾಯಿಯ ಬಳಿ ಹೋಗುವುದಕ್ಕೆ ಭಯ. ಪ್ರಣಯ್ ಅವರ ತಂದೆ-ತಾಯಿ ಅವರೊಂದಿಗೆ ನಾನು ಇರುತ್ತೇನೆ. ನನ್ನ ಮಗುವೂ ಇಲ್ಲೇ ಬೇಳೆಯುತ್ತದೆ" ಎನ್ನುತ್ತಾರೆ ಅಮೃತಾ
ಸುಪಾರಿ ಕಿಲ್ಲರ್ ಗಳಿಂದ ಪ್ರಣಯ್ ಹತ್ಯೆಗೆ ಸಂಚು ನಡೆದಿದ್ದು ಹೇಗೆ?
ಜಾತಿಯ ಸೋಂಕಿಲ್ಲದ ಮಗುವನ್ನು ಬೆಳೆಸಬೇಕು
'ಈ ಜಾತಿ ಜಾತಿ ಎಂಬ ಹುಚ್ಚಿಗೆ ನನ್ನ ಪ್ರಣಯ್ ಬಲಿಯಾಗಿದ್ದಾರೆ. ನಮ್ಮ ಮಗುವನ್ನು ಜಾತಿಯ ಪೂರ್ವಗ್ರಹದ ಸೋಂಕಿಲ್ಲದೆ ಬೆಳೆಸಬೇಕು ಎಂಬುದು ಪ್ರಣಯ್ ಕನಸಾಗಿತ್ತು. ಈಗ ಪ್ರಣಯ್ ಇಲ್ಲ. ಆದರೆ ಅವರ ಕನಸನ್ನು ನಾನು ಬದುಕಿಸುತ್ತೇನೆ. ನನ್ನ ಮಗುವನ್ನು ಜಾತಿಯ ಕರಿನೆರಳಿಲ್ಲದೆ ಬೆಳೆಸುತ್ತೇನೆ' ಎಂದು ಆಕ್ರೋಶ ತುಂಬಿದ ಧ್ವನಿಯಲ್ಲಿ ಹೇಳುತ್ತಾರೆ ಅಮೃತಾ.
ಅಮೃತಾ ತಂದೆ ಸೇರಿದಂತೆ ಆರು ಜನರ ಬಂಧನ
ಸೆ.14 ರಂದು ಶುಕ್ರವಾರ ತೆಲಂಗಾಣದ ಮಿರ್ಯಾಲಗುಡ್ ಜ್ಯೋತಿ ಆಸ್ಪತ್ರೆ ಬಳಿ ಪ್ರಣಯ್ ನನ್ನು ಹಾಡುಹಗಲಲ್ಲೇ ಕೆಲ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಕುಟುಂಬದ ವಿರೋಧದ ನಡುವೆಯೂ ಮದುವೆಯಾಗಿದ್ದ ದಂಪತಿ ಮೇಲೆ ಅಮೃತಾ ಕುಟುಂಬದ ಕಡೆಯಿಂದ ಸಾಕಷ್ಟು ಒತ್ತಡವಿತ್ತು, ಆಗಾಗ ಬೆದರಿಕೆಯನ್ನೂ ಹಾಕಲಾಗುತ್ತಿತ್ತು. ಆದ್ದರಿಂದ ಪ್ರಣಯ್ ಅನ್ನು ತನ್ನ ತಂದೆಯೇ ಕೊಂದಿದ್ದು ಎಂದು ಅಮೃತಾ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂದಿದ್ದ ಪೊಲೀಸರು, ಅಮೃತಾ ಅವರ ತಂದೆ ಮಾರುತಿ ರಾವ್ ಸೇರಿದಂತೆ ಆರು ಜನರನ್ನು ಮಂಗಳವಾರ ಬಂಧಿಸಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, 'ಪ್ರಣಯ್ ಗೆ ನ್ಯಾಯ ದೊರಕಿಸಿ' ಎಂದು ಫೇಸ್ ಬುಕ್ ನಲ್ಲಿ ಬೃಹತ್ ಅಭಿಯಾನ ಸಹ ನಡೆಯುತ್ತಿದೆ.