ಭಾರತದಿಂದ ಪಾಕಿಸ್ತಾನಕ್ಕೆ ಪಂಚ್, ಚೀನಾಗೆ ಯಾಕೆ ಚೌಚೌ ಬಾತ್?
ದೆಹಲಿ, ಡಿಸೆಂಬರ್.04: ಪಾಕಿಸ್ತಾನ ಎಂಬ ವಿಷಯ ಬಂದಾಗ ಭಾರತದ ನಿಲುವುಗಳು ಸಖತ್ ಪವರ್ ಫುಲ್ ಆಗಿರುತ್ತವೆ. ಗಡಿ ವಿಷಯದಲ್ಲಿ ಕ್ಯಾತೆ ತೆಗೆಯುವ ನೆರೆರಾಷ್ಟ್ರಕ್ಕೆ ಭಾರತೀಯ ಯೋಧರು ಮುಟ್ಟಿ ನೋಡಿಕೊಳ್ಳುವಂತೆ ಬಿಸಿ ಮುಟ್ಟಿಸುತ್ತಾರೆ.
ಕೇಂದ್ರ ಸರ್ಕಾರವೂ ಕೂಡಾ ಪಾಕಿಸ್ತಾನದ ವಿರುದ್ಧ ಜಾಗತಿಕ ಮಟ್ಟದಲ್ಲಿ ಧ್ವನಿ ಎತ್ತುತ್ತದೆ. ಭಯೋತ್ಪಾದನೆ ಮುಖವಾಡ ತೊಟ್ಟು ಮಾಡುತ್ತಿರುವ ಕೃತ್ಯಗಳ ಬಗ್ಗೆ ವಿಶ್ವಕ್ಕೆ ಸಾಕಷ್ಟು ಬಾರಿ ಭಾರತವೇ ಸಾರಿ ಸಾರಿ ಹೇಳುತ್ತಾ ಬಂದಿದೆ. ಆದರೆ, ಚೀನಾ ವಿಷಯ ಬಂದಾಗ ಮಾತ್ರ ಕೇಂದ್ರ ಸರ್ಕಾರ ಮೌನಕ್ಕೆ ಜಾರಿ ಬಿಡುತ್ತದೆ.
ಶಂಕಾಸ್ಪದ ಚೀನಾ ಹಡಗನ್ನು ಓಡಿಸಿದ ಭಾರತೀಯ ಸೇನೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ಇಂಥದೊಂದು ಗಂಭೀರ ಆರೋಪ ಕೇಳಿ ಬಂದಿದೆ. ದೇಶದ ಗಡಿಯನ್ನೇ ನುಗ್ಗುತ್ತಿದ್ದರೂ ಕೇಂದ್ರ ಸರ್ಕಾರ ಸುಮ್ಮನೆ ಕೈಕಟ್ಟಿ ಕುಳಿತಿದ್ದೇಕೆ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಪ್ರಶ್ನೆ ಎತ್ತಿದ್ದಾರೆ.
ಚೀನಾ ಕೈಯಲ್ಲಿ ಪಾಕಿಸ್ತಾನವೇ ಗುರಾಣಿ
ಭಾರತದ ಜೊತೆ ಕಾಲ್ಕೆರೆದು ಜಗಳಕ್ಕೆ ನಿಲ್ಲುವ ಪಾಕಿಸ್ತಾನ, ತನ್ನ ಬೇಳೆ ಬೇಯಿಸಿಕೊಳ್ಳಲು ಭಯೋತ್ಪಾದನೆ ಎಂಬ ಅಸ್ತ್ರವನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ. ಭಯೋತ್ಪಾದನೆ ಮೂಲಕ ದೇಶದಲ್ಲಿ ಶಾಂತಿ ಕದಡುವ ಕೆಲಸವನ್ನು ಆಗಾಗ ಮಾಡುತ್ತಲೇ ಬಂದಿದೆ. ಆದರೆ, ಪಾಕಿಸ್ತಾನಕ್ಕಿಂತಲೂ ಚೀನಾ ಒಂದು ಕೈ ಮೇಲೆ ಇದೆ. ಪಾಕಿಸ್ತಾನಕ್ಕೆ ಭಯೋತ್ಪಾದನೆ ಅಸ್ತ್ರವಾದರೆ, ಚೀನಾಗೆ ಪಾಕಿಸ್ತಾನ ಎಂಬ ದೇಶವೇ ಅಸ್ತ್ರವಾಗಿ ಬಿಟ್ಟಿದೆ ಎಂದು ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ.
ಚೀನಾ ಬೇಳೆ ಬೇಯಿಸಿಕೊಳ್ಳಲು ಪಾಕಿಸ್ತಾನದ ಮಾರ್ಗ
ಭಾರತದ ಜೊತೆ ಜಗಳಕ್ಕೆ ನಿಲ್ಲುವ ಪಾಕಿಸ್ತಾನಕ್ಕೆ ಚೀನಾ ಬೆಂಬಲವಾಗಿ ನಿಲ್ಲುತ್ತಿದೆ. ಚೀನಾದ ಕುಮ್ಮಕ್ಕಿನಿಂದಲೇ ಪಾಕಿಸ್ತಾನವೂ ಭಾರತದ ಎದುರಿಗೆ ನಿಲ್ಲುವ ಧೈರ್ಯ ಮಾಡುತ್ತಿದೆ. ಇತ್ತೀಚಿಗೆ ಚೀನಾ ಮೂಲದ ಸಂಶೋಧನಾ ಹಡಗು ಶಿಯಾನ್-1, ಅಂಡಮಾನ್ ಮತ್ತು ನಿಕೋಬಾರ್ ಗಡಿ ಪ್ರದೇಶವನ್ನು ಪ್ರವೇಶಿಸಿತ್ತು. ಹೀಗಿದ್ದರೂ ಭಾರತ ಸರ್ಕಾರ ಚೀನಾ ವಿಷಯದಲ್ಲಿ ಮೃದು ಧೋರಣೆ ತೋರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಪ್ರಶ್ನೆ ಮಾಡಿದ್ದಾರೆ.
ಗಡಿ ವಿಚಾರದಲ್ಲಿ ರಾಜಿಯಿಲ್ಲ ಎಂದ ರಾಜನಾಥ್ ಸಿಂಗ್
ಇನ್ನು, ಕಾಂಗ್ರೆಸ್ ಮುಖಂಡರ ಪ್ರಶ್ನೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರ ನೀಡಿದ್ದಾರೆ. ಪಾಕಿಸ್ತಾನದಂತೆ ಚೀನಾ ಜೊತೆಗೆ ಗಡಿ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಲೈನ್ ಆಫ್ ಕಂಟ್ರೋಲ್ ಬಗ್ಗೆ ಸ್ಪಷ್ಟವಾದ ಉಲ್ಲೇಖವಿದೆ. ಚೀನಾ ಜೊತೆಗೆ ಗಡಿ ವಿಚಾರದಲ್ಲಿ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಈ ನಡುವೆ ಕೆಲವು ಬಾರಿ ಚೀನಾ ಯೋಧರು ನಮ್ಮ ಗಡಿಪ್ರದೇಶವನ್ನು ಪ್ರವೇಶಿಸಿದ್ದಾರೆ. ಇನ್ನು, ಕೆಲವು ಬಾರಿ ನಮ್ಮ ಯೋಧರು ಚೀನಾ ಗಡಿ ಪ್ರದೇಶವನ್ನು ಪ್ರವೇಶಿಸಿದ್ದಾರೆ. ಹೀಗಾಗಿ ಅಷ್ಟು ಗಂಭೀರವಾಗಿ ಪರಿಗಣಿಗಸುವ ಅಗತ್ಯವಿರಲಿಲ್ಲ ಎಂದು ರಾಜನಾಥ್ ಸಿಂಗ್ ಉತ್ತರಿಸಿದ್ದಾರೆ.
ಎರಡು ದೇಶಗಳ ನಡುವಿನಲ್ಲಿ ಅಭಿವೃದ್ಧಿ ಕಾರ್ಯ
ಭಾರತದ ಸಾರ್ವಭೌಮತ್ವವನ್ನು ಚೀನಾ ಒಪ್ಪಿಕೊಂಡಿದ್ದು, ಎರಡು ದೇಶಗಳ ಗಡಿ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ದೇಶದ ಗಡಿಯಲ್ಲಿನ ರಸ್ತೆ, ಸುರಂಗ, ರೈಲ್ವೆ ಹಳಿಗಳ ನಿರ್ಮಾಣ ಮಾಡಲಾಗುತ್ತಿದೆ. ಎರಡು ರಾಷ್ಟ್ರಗಳ ನಡುವೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹಾಗೆಂದ ಮಾತ್ರಕ್ಕೆ ಗಡಿ ವಿಚಾರ ಬಂದಾಗ ಯಾವುದೇ ದೇಶವಾದರೂ ಸರಿ, ಭಾರತದ ನಿಲುವು ಕಠಿಣವಾಗಿ ಇರುತ್ತದೆ. ಎಂಥದ್ದೇ ದೇಶವಾದರೂ ಅದನ್ನು ಎದುರಿಸುವ ಧೈರ್ಯ ನಮ್ಮ ಸೇನೆಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತದ ಗಡಿ ಪ್ರವೇಶಿಸಿದ್ದ ಚೀನಾದ ಶಿಯಾನ್-1
ಇಂದು ರಾಜ್ಯಸಭೆಯಲ್ಲಿ ಚೀನಾ ಬಗ್ಗೆ ಚರ್ಚೆಯಾಗಲು ಕಾರಣವೇ ಡಿಸೆಂಬರ್.04ರಂದು ನಡೆದ ಘಟನೆ. ಮಂಗಳವಾರವಷ್ಟೇ ಚೀನಾದ ಸಂಶೋಧನಾ ಹಡಗು ಶಿಯಾನ್-1 ಭಾರತದ ಗಡಿ ಪ್ರದೇಶವನ್ನು ಪ್ರವೇಶಿಸಿತ್ತು. ಪೋರ್ಟ್ ಬ್ಲೇರ್ ಪ್ರದೇಶದಲ್ಲಿ ಸಂಶಯಾಸ್ಪದ ಹಡಗು ತಿರುಗಾಡುತ್ತಿದ್ದನ್ನು ಗಮನಿಸಿದ ಭಾರತೀಯ ಕಡಲ್ಗಾವಲು ವಿಮಾನ ಭಾರತೀಯ ನೌಕಾಪಡೆಗೆ ಮಾಹಿತಿ ನೀಡಿತ್ತು. ತಕ್ಷಣ ಎಚ್ಚೆತ್ತುಕೊಂಡ ನೌಕಾಪಡೆ, ಚೀನಾದ ಹಡಗನ್ನು ವಾಪಸ್ ಕಳುಹಿಸಿತು.