'2024 ಚುನಾವಣೆಗೆ ಈಗಲೇ ವ್ಯವಸ್ಥಿತ ಯೋಜನೆ ರೂಪಿಸೋಣ': ವಿಪಕ್ಷ ಸಭೆಯಲ್ಲಿ ಸೋನಿಯಾ
ನವದೆಹಲಿ, ಆಗಸ್ಟ್ 20: ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಇಂದು ನಡೆದ ವಿರೋಧ ಪಕ್ಷದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. 2024 ರ ಚುನಾವಣೆಗೆ ವ್ಯವಸ್ಥಿತವಾಗಿ ಈಗಲೇ ಸಿದ್ದತೆ ನಡೆಸಬೇಕು ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಹಾಗೆಯೇ ಒಗ್ಗಟ್ಟಿನಲ್ಲಿ ಕೆಲಸ ಮಾಡುವುದರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಸೋನಿಯಾ ಬೇರೆ ಯಾವುದೇ ಆಯ್ಕೆ ಇಲ್ಲ ಎಂದು ಕೂಡಾ ಹೇಳಿದರು.
ನಾವು ಎಲ್ಲರೂ ನಮ್ಮದೇ ಆದ ಹಿತಾಸಕ್ತಿಯನ್ನು ಹೊಂದಿದ್ದೇವೆ. ಆದರೆ ದೇಶದ ಹಿತಾಸಕ್ತಿಯ ವಿಚಾರ ಬಂದಾಗ ನಾವೆಲ್ಲರೂ ಜೊತೆಯಾಗುತ್ತೇವೆ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ 19 ವಿರೋಧ ಪಕ್ಷಗಳು ಇದ್ದ ಸಭೆಯಲ್ಲಿ ಹೇಳಿದ್ದಾರೆ ಎಂದು ಹೇಳಲಾಗಿದೆ. ಹಾಗೆಯೇ 2024 ರ ಚುನಾವಣೆಯು ನಮ್ಮ ಅಂತಿಮ ಗುರಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಹೇಳಿದ್ದಾರೆ. "ಇದು ಒಂದು ಸವಾಲು, ಆದರೆ ಜೊತೆಯಾಗಿ ನಾವು ಈ ಸವಾಲನ್ನು ಎದುರಿಸಬಹುದು, ನಾವು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವ ಬಲು ಬೇರೆ ಯಾವುದೇ ದಾರಿ ನಮ್ಮ ಮುಂದಿಲ್ಲ," ಎಂದು ಸೋನಿಯಾ ಗಾಂಧಿ ಎಂದಿದ್ದಾರೆ.
ಸೋನಿಯಾ ಅಧ್ಯಕ್ಷತೆಯಲ್ಲಿ ವಿಪಕ್ಷಗಳ ಸಭೆ, ಕೇಜ್ರಿವಾಲ್ನ ಆಪ್ಗೆ ಇಲ್ಲ ಆಹ್ವಾನ!
ನಮ್ಮ ಸಂವಿಧಾನದ ತತ್ವಗಳು ಮತ್ತು ನಿಬಂಧನೆಗಳು ಹಾಗೂ ಸ್ವಾತಂತ್ಯ್ರದ ಮೌಲ್ಯಗಳನ್ನು ನಂಬುವಂತಹ ಸರ್ಕಾರ ರಚನೆಗಾಗಿ ಈಗಲೇ ಕಾರ್ಯ ನಿರ್ವಹಣೆ ಮಾಡುವಂತೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ. ಇನ್ನು ಸೋನಿಯಾ ಗಾಂಧಿಯವರ ಈ ಸಭೆಯು 2024 ಕ್ಕಿಂತ ಮುಂಚಿತವಾಗಿ ವಿರೋಧ ಪಕ್ಷವನ್ನು ಒಗ್ಗೂಡಿಸಲು ಮತ್ತು ಬಿಜೆಪಿ ವಿರುದ್ಧದ ಒಕ್ಕೂಟವನ್ನು ಮುನ್ನಡೆಸಲು ಕಾಂಗ್ರೆಸ್ ಸಿದ್ಧತೆಯನ್ನು ಸೂಚಿಸುತ್ತಿದೆ.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ನ ನಾಯಕಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಆರ್ಜೆಡಿ ಮುಕ್ಯಸ್ಥ ತೇಜಸ್ವಿ ಯಾದವ್ ಹಾಗೂ ಎಡಪಕ್ಷದ ಸೀತರಾಮ್ ಯೆಚ್ಯೂರಿ ಈ ವಿರೋಧ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದೆ.
ಆದರೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಈ ಸಭೆಗೆ ಗೈರು ಹಾಜರಾಗಿದ್ದರು ಹಾಗೂ ಬಹುಜನ ಸಮಾಜ ಪಕ್ಷದ ಮಾಯಾವತಿಯನ್ನು ಈ ಸಭೆಗೆ ಆಹ್ವಾನ ಮಾಡಿಲ್ಲ. ಮುಂದಿನ ಚುನಾವಣೆಯ ಮುಖ್ಯವಾದ ರಾಜ್ಯ ಉತ್ತರ ಪ್ರದೇಶವಾಗಿರುವಾಗ ಯುಪಿಯ ಪ್ರಮುಖ ಪಕ್ಷವಾದ ಬಹುಜನ ಸಮಾಜ ಪಕ್ಷಕ್ಕೆ ಆಹ್ವಾನ ನೀಡದಿರುವುದು ಈ ಒಕ್ಕೂಟಕ್ಕೆ ಹಿನ್ನಡೆಯಾಗಲಿದೆಯೇ ಎಂಬ ಅನುಮಾನ ಮೂಡಿಸಿದೆ. ಇನ್ನು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಇತ್ತೀಚೆಗೆ ಬಿಜೆಪಿಯ ಎನ್ಡಿಎ ಒಕ್ಕೂಟದಿಂದ ಹೊರ ಬಂದ ಅಕಾಳಿ ದಳವನ್ನು ಕೂಡಾ ಈ ವಿರೋಧ ಪಕ್ಷದ ಸಭೆಗೆ ಆಹ್ವಾನ ಮಾಡಿಲ್ಲ.
ಕಾಂಗ್ರೆಸ್ ಮಾಜಿ ಸಂಸದೆ ಟಿಎಂಸಿ ಸೇರ್ಪಡೆ: ಕೇಂದ್ರ ನಾಯಕತ್ವದ ವಿರುದ್ದ ಸಿಬಲ್ ವಾಕ್ ಪ್ರಹಾರ
"ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವು ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಸಂಕಲ್ಪವನ್ನು ಮತ್ತೊಮ್ಮೆ ದೃಢೀಕರಿಸಲು ಅತ್ಯಂತ ಸೂಕ್ತವಾದ ಸಂದರ್ಭವಾಗಿದೆ. ಅದರ ಭಾಗವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಹುಡುಕಬೇಕಾದ ಪಕ್ಷವಾಗುವುದಿಲ್ಲ ಎಂದು ನಾನು ಹೇಳುತ್ತೇನೆ," ಎಂದಿದ್ದಾರೆ.
ಇಂದಿನ ಸಭೆಯಲ್ಲಿ ಪೆಗಾಸಸ್ ಬೇಹುಗಾರಿಕೆ ಹಗರಣ, ರೈತ ವಿರೋಧಿ ಕಾಯ್ದೆ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಹಾಗೆಯೇ ಸಂಸತ್ತಿನಲ್ಲಿ ಹೊರಗಿನಿಂದ ಮಾರ್ಷಲ್ಗಳನ್ನು ಕರೆಸಿ ಮಹಿಳಾ ಸಂಸದರ ಮೇಲೆ ಹಲ್ಲೆ ನಡೆಸಿದೆ ಎಂಬ ಆರೋಪಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡಿದ ಸೋನಿಯಾ ಗಾಂಧಿ, ಸಂಸತ್ತಿನ ಉಭಯ ಸದನಗಳಲ್ಲಿ ಎಲ್ಲಾ ವಿರೋಧ ಪಕ್ಷಗಳು 20 ದಿನಗಳಿಗಿಂತ ಹೆಚ್ಚು ಕಾಲ "ನಿಶ್ಚಿತ ಒಗ್ಗಟ್ಟಿನಿಂದ" ಗುರಿತಿಸಿಕೊಂಡಿದೆ ಎಂದು ಹೇಳಿದ ಸೋನಿಯಾ ಗಾಂಧಿ, "ನಾವು ದಿನನಿತ್ಯದ ಚರ್ಚೆಯಲ್ಲಿ ಸರಿಯಾಗಿ ಭಾಗಿಯಾಗಿದ್ದೇವೆ. ಸಂಸತ್ತಿನ ಮುಂದಿನ ಅಧಿವೇಶನಗಳಲ್ಲೂ ಈ ಏಕತೆಯನ್ನು ಉಳಿಸಿಕೊಳ್ಳಲಾಗುವುದು ಎಂಬ ನನಗೆ ವಿಶ್ವಾಸವಿದೆ. ಆದರೆ ನಾವು ಸಂಸತ್ತಿನ ಹೊರಗೆ ದೊಡ್ಡ ರಾಜಕೀಯ ಹೋರಾಟ ಮಾಡಬೇಕಾಗಿದೆ," ಎಂದು ಉಲ್ಲೇಖ ಮಾಡಿದ್ದಾರೆ.
(ಒನ್ ಇಂಡಿಯಾ)