ಎಲ್ಲ ನಾಗರಿಕರಿಗೂ ಏಕರೂಪದ ವಿಚ್ಚೇದನ ಕಾನೂನು: ಮುಸ್ಲಿಂ ಕಾನೂನು ಮಂಡಳಿ ವಿರೋಧ
ನವದೆಹಲಿ, ಫೆಬ್ರವರಿ 13: ದೇಶದ ಎಲ್ಲ ನಾಗರಿಕರಿಗೂ ಏಕರೂಪದ ವಿಚ್ಚೇದನಾ ಪದ್ಧತಿ ಜಾರಿಗೆ ತರುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಸಂವಿಧಾನದ ಉದ್ದೇಶಗಳು ಮತ್ತು ಅಂತಾರಾಷ್ಟ್ರೀಯ ಸಮಾವೇಶಗಳ ತೀರ್ಮಾನಗಳನ್ನು ಮುಂದಿಟ್ಟುಕೊಂಡು ಈ ಆಕ್ಷೇಪ ವ್ಯಕ್ತಪಡಿಸಿದೆ.
ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಂವಿಧಾನದ 14, 15, 21 ಮತ್ತು 44ರ ವಿಧಿಗಳ ಪ್ರಕಾರ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ವಿಚ್ಚೇದನವನ್ನು ಪರಿಗಣಿಸಬಾರದು. ಹೀಗಾಗಿ ವಿಚ್ಚೇದನಕ್ಕೆ ಏಕರೂಪದ ನೆಲೆ ಇರಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಹಿಂದೂಗಳಲ್ಲಿನ ಮದುವೆಗಳು ಮತ್ತು ವಿಚ್ಚೇದನಕ್ಕೆ ಸಂಬಂಧಿಸಿದ ಕಾನೂನುಗಳಲ್ಲಿಯೇ ಏಕರೂಪತೆ ಇಲ್ಲ. ಆದರೆ ಈ ಸಂಪ್ರದಾಯ ಮತ್ತು ರೂಢಿಗಳನ್ನು ಸ್ವತಃ ಕಾನೂನು ರಕ್ಷಿಸಿದೆ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತನ್ನ ಅರ್ಜಿಯಲ್ಲಿ ವಾದಿಸಿದೆ.
ಉಪಾಧ್ಯಾಯ್ ಅವರು ಸಲ್ಲಿಸಿದ ಅರ್ಜಿ ಆಧಾರದಲ್ಲಿ ಕೇಂದ್ರ ಸರ್ಕಾರಕ್ಕೆ ಕಳೆದ ವರ್ಷದ ಡಿ. 16ರಂದು ಸುಪ್ರೀಂಕೋರ್ಟ್ ನೋಟಿಸ್ ನೀಡಿತ್ತು. ವಿಚ್ಚೇದನ ಕಾನೂನಿನಲ್ಲಿರುವ ವೈಪರೀತ್ಯಗಳನ್ನು ತೆಗೆದುಹಾಕಬೇಕು ಮತ್ತು ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳಗಳ ಆಧಾರದಲ್ಲಿ ಯಾವುದೇ ಪೂರ್ವಗ್ರಹಗಳಿಲ್ಲದೆ ಎಲ್ಲ ನಾಗರಿಕರಿಗೂ ಏಕರೂಪದ ಕಾನೂನು ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆದೇಶಿಸುವಂತೆ ಅವರು ಕೋರಿದ್ದರು.