ಹಣ, ತೋಳ್ಬಲ ಬಹಿರಂಗವಾಗಿಯೇ ಬಳಕೆ: ಇರೋಮ್ ಶರ್ಮಿಳಾ
ಇಂಫಾಲ್, ಮಾರ್ಚ್ 11: ಚುನಾವಣೋತ್ತರ ಸಮೀಕ್ಷೆಗಳಿಂದ ನಾನೇನೂ ವಿಚಲಿತಳಾಗಿಲ್ಲ. ಒಂದು ವೇಳೆ ಈ ಬಾರಿ ಸೋತರೂ 2019ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುತ್ತೇನೆ ಎಂದು ಪೀಪಲ್ಸ್ ರಿಸರ್ಜೆನ್ಸ್ ಅಂಡ್ ಜಸ್ಟೀಸ್ ಅಲಯನ್ಸ್ (ಪ್ರಜಾ) ಮುಖ್ಯಸ್ಥೆ ಇರೋಮ್ ಚಾನು ಶರ್ಮಿಳಾ ಹೇಳಿದ್ದಾರೆ.
"ಜನರ ಮನಸ್ಥಿತಿ ಮೇಲೆ ಫಲಿತಾಂಶ ಅವಲಂಬಿಸಿದೆ. ಅವರು ಮನಸ್ಸು ಬದಲಿಸಬಹುದು. ಎಲ್ಲರಿಗೂ ಗೊತ್ತಿದೆ: ಪಕ್ಷಗಳು ಬಹಿರಂಗವಾಗಿಯೇ ಹಣಬಲ, ತೋಳ್ಬಲ ಬಳಸುತ್ತಿವೆ" ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. "ಅಧಿಕಾರ ಏಕೆ ಬೇಕೆಂದರೆ, ಬದಲಾವಣೆ ತರುವುದಕ್ಕಾಗಿ ಬೇಕು. ಕತ್ತಲೆಯಿಂದ ಬೆಳಕಿನ ಕಡೆಗೆ ನಡೆಸುವುದಕ್ಕೆ ಅಧಿಕಾರ ಬೇಕು" ಎಂದು ಅವರು ಹೇಳಿದ್ದಾರೆ.[LIVE: ಮಣಿಪುರದಲ್ಲಿ 15 ವರ್ಷದ ಕಾಂಗ್ರೆಸ್ ಆಡಳಿತ ವರ್ಸಸ್ ಮೋದಿ ಭರವಸೆ]
ಮಾರ್ಚ್ 4 ಹಾಗೂ 8ರಂದು ಎರಡು ಹಂತದಲ್ಲಿ ಮಣಿಪುರದಲ್ಲಿ ಚುನಾವಣೆ ನಡೆದಿತ್ತು. ಒಟ್ಟು 60 ಸಂಖ್ಯಾ ಬಲದ ವಿಧಾನಸಭೆಯಲ್ಲಿ ಮೊದಲ ಹಂತದಲ್ಲಿ 38 ಹಾಗೂ ಎರಡನೇ ಹಂತದಲ್ಲಿ 22 ಸ್ಥಾನಗಳಿಗೆ ಮತದಾನ ನಡೆದಿತ್ತು. ಮಾರ್ಚ್ 11ರ ವಿಧಾನಸಭೆ ಚುನಾವಣೆ ಮತ ಎಣಿಕೆಗೆ ಮಣಿಪುರದಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ. ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗುತ್ತದೆ.