ರಾಷ್ಟ್ರಪತಿ ಪದಗ್ರಹಣ ಸಮಾರಂಭದಲ್ಲಿ ಖರ್ಗೆಗೆ ಅಪಮಾನವಾಗಿಲ್ಲ: ಜೋಶಿ
ನವದೆಹಲಿ, ಜುಲೈ 25: ''ರಾಷ್ಟ್ರಪತಿ ಪದಗ್ರಹಣ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಅಪಮಾನ ಮಾಡಿ, ಅಗೌರವ ತೋರಲಾಗಿದೆ'' ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇಂದು ತಿರುಗೇಟು ನೀಡಿದ್ದಾರೆ.
''ನೂತನ ರಾಷ್ಟ್ರಪತಿ ಮುರ್ಮು ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ, ಕಾಂಗ್ರೆಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ'' ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಇಂದು ನಡೆದ ರಾಷ್ಟ್ರಪತಿ ಪದಗ್ರಹಣದ ಕಾರ್ಯಕ್ರಮದಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಸರಿಯಾದ ಆಸನ ವ್ಯವಸ್ಥೆ ಮಾಡಿರಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಬಗ್ಗೆ ರಾಜ್ಯಸಭಾ ಸಭಾಪತಿ ಅವರಿಗೆ ಕಾಂಗ್ರೆಸ್ ಸಂಸದರು ಪತ್ರ ಬರೆದಿದ್ದರು.
ಬೀಳ್ಕೊಡುಗೆ ಸಮಾರಂಭ; ರಾಷ್ಟ್ರಪತಿ ಕೋವಿಂದ್ ಕಡೆಗೆ ನೋಡದ ಪ್ರಧಾನಿ?
''ಇಂದು ಗೌರವಾನ್ವಿತ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹೊಂದಿರುವ ಸ್ಥಾನಕ್ಕೆ ಹೊಂದಿಕೆಯಾಗದ ಆಸನದಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿದೆ. ಶಿಷ್ಟಾಚಾರವನ್ನು ಉಲ್ಲಂಘಿಸಿ ಅತ್ಯಂತ ಹಿರಿಯ ನಾಯಕನಿಗೆ ತೋರಿದ ಈ ಉದ್ದೇಶಪೂರ್ವಕ ಅಗೌರವದಿಂದ ನಮಗೆ ಆಘಾತವುಂಟಾಗಿದೆ. ಈ ಕುರಿತು ಪ್ರತಿಭಟನೆಯನ್ನು ವ್ಯಕ್ತಪಡಿಸಲು ನಾವು ಪತ್ರ ಬರೆಯುತ್ತಿದ್ದೇವೆ'' ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದೆ. ಈ ಘಟನೆ ಕುರಿತಂತೆ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಸೇರಿದಂತೆ ಹಲವಾರು ನಾಯಕರು ಪ್ರಶ್ನೆ ಎತ್ತಿದ್ದರು.
Respecting the position and seniority of @kharge ji, he was offered to be seated in the first row during today's oath ceremony despite the order of precedence. Making issue out of this is very unfortunate and I pity Congress for this. pic.twitter.com/HXmqt6azoO
— Pralhad Joshi (@JoshiPralhad) July 25, 2022
ಈ ವಿಚಾರವಾಗಿ ಇಂದು ಸ್ಪಷ್ಟನೆ ನೀಡಿರುವ ಪ್ರಲ್ಹಾದ್ ಜೋಶಿ ರಾಜ್ಯಸಭೆ ವಿಪಕ್ಷ ನಾಯಕ ಖರ್ಗೆ ಅವರಿಗೆ ಶಿಷ್ಟಾಚಾರದ ಪ್ರಕಾರ ಅಪಮಾನ ಆಗಿಲ್ಲ ಎಂದಿದ್ದಾರೆ. ಕೇಂದ್ರ ಗೃಹ ಇಲಾಖೆ ನಿಯಮದ ಪ್ರಕಾರ ಕೇಂದ್ರ ಸರ್ಕಾರದ ಎಲ್ಲ ಕ್ಯಾಬಿನೆಟ್ ಸಚಿವರ ಆಸನದ ಬಳಿಕ ವಿರೋಧ ಪಕ್ಷದ ನಾಯಕರಿಗೆ ಆಸನ ಕಲ್ಪಿಸಬೇಕು ಅಂತಿದೆ. ಆ ಪ್ರಕಾರ ಆಸನ ಕಲ್ಪಿಸುವುದಾದರೆ ಖರ್ಗೆ ಅವರಿಗೆ ಮೂರನೇ ಸಾಲಿನಲ್ಲಿ ಆಸನ ದೊರೆಯುತ್ತಿತ್ತು, ಆದರೆ ಖರ್ಗೆ ಅವರ ಹಿರಿತನ ಮತ್ತು ಅವರ ಸ್ಥಾನವನ್ನ ಪರಿಗಣಿಸಿ ಮೊದಲನೇ ಸಾಲಿನಲ್ಲಿಯೇ ಆಸನದ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು.
''ಮೊದಲನೇ ಸಾಲಿನಲ್ಲಿಯೂ ಕಾರ್ನರ್ನಲ್ಲಿದೆ'' ಎಂದು ಆಕ್ಷೇಪ ವ್ಯಕ್ತಪಡಿಸಿದರು, ತಕ್ಷಣ ನಮ್ಮ ಅಧಿಕಾರಿಗಳು ಮೊದಲನೇ ಸಾಲಿನ ಸೆಂಟರ್ ನಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು, ಆದರೆ ಖರ್ಗೆ ಅವರು ಅಧಿಕಾರಿಗಳ ಮನವಿಯನ್ನು ನಿರಾಕರಿಸಿದ್ದರು.
ಇನ್ನು ಕಳೆದ ಶನಿವಾರ ಲೋಕಸಭೆ ಹಾಗು ರಾಜ್ಯಸಭೆ ವತಿಯಿಂದ ಸೆರ್ಮನಿಯಲ್ಲಿ ಖರ್ಗೆ ಅವರಿಗೆ ಪ್ರಧಾನಿ ಅವರ ಪಕ್ಕದಲ್ಲಿಯೇ ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಬೇರೆಯಾಗಿರುತ್ತೆ, ಏಕೆಂದರೆ ಈ ಕಾರ್ಯಕ್ರಮವನ್ನ ಸಂಸದೀಯ ಇಲಾಖೆ ನಡೆಸುವುದರಿಂದ ಆಸನದ ವ್ಯವಸ್ಥೆ ಕಲ್ಪಿಸುವುದು ನಮ್ಮ ಇಲಾಖೆಗೆ ಬಿಟ್ಟಿದ್ದಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಪಕ್ಕದಲ್ಲಿಯೇ ಆಸನ ಕಲ್ಪಿಸಿದ್ದರು ಖರ್ಗೆ ಅವರು ಅಂದು ಗೈರುಹಾಜರಾಗಿದ್ದರು ಎಂದು ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಇನ್ನು ರಾಷ್ಟ್ರಪತಿ ಹುದ್ದೆಗೆ ಏರಿದ ಜಾರ್ಖಂಡ್ ಮೂಲದ ಮೊದಲ ಮಹಿಳೆ, ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಹೆಗ್ಗಳಿಕೆಗೆ ದ್ರೌಪದಿ ಮುರ್ಮು ಪಾತ್ರರಾಗಿದ್ದಾರೆ ಜೊತೆಗೆ ರಾಷ್ಟ್ರಪತಿ ಹುದ್ದೆಗೇರಿದ ಎರಡನೇ ಮಹಿಳೆಯಾಗಿದ್ದಾರೆ.
"ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಆಗಿರುವುದು ನನ್ನ ವೈಯಕ್ತಿಕ ಸಾಧನೆಯಲ್ಲ, ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ನನ್ನ ನಾಮನಿರ್ದೇಶನವು ಭಾರತದಲ್ಲಿನ ಬಡವರು ಕನಸುಗಳನ್ನು ಮಾತ್ರವಲ್ಲದೇ ಆ ಕನಸುಗಳನ್ನು ನನಸಾಗಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ" ಎಂದು ರಾಷ್ಟ್ರಪತಿ ಮುರ್ಮು ಸಂಸತ್ತಿನಲ್ಲಿ ಇಂದು ತಮ್ಮ ಮೊದಲ ಭಾಷಣದಲ್ಲಿ ಹೇಳಿದರು.