ಪ್ರಧಾನಿ ನರೇಂದ್ರ ಮೋದಿಗೆ ಹೆದರದ ನಾಯಕ ಬೇಕು: ಬಿಜೆಪಿ ಹಿರಿಯ ಮುಖಂಡ
ನವದೆಹಲಿ, ಸೆಪ್ಟೆಂಬರ್ 4: ಕೇಂದ್ರದಲ್ಲಿನ ಬಿಜೆಪಿ ಸರ್ಕಾರಕ್ಕೆ ಆಗಾಗ ಕಿವಿ ಹಿಂದುವ ಮೂಲಕ ಹಾದಿತಪ್ಪದಂತೆ ಎಚ್ಚರಿಸುವ ಹಿರಿಯರ ಸ್ಥಾನದಲ್ಲಿರುವ ಮಾಜಿ ಸಚಿವ ಮುರಳಿ ಮನೋಹರ್ ಜೋಶಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಇತರೆ ಕೆಲವು ಪ್ರಮುಖ ನಾಯಕರು ಪ್ರಶ್ನಾತೀತರಾಗುತ್ತಿದ್ದಾರೆ. ಪಕ್ಷ ಮತ್ತು ಸರ್ಕಾರದೊಳಗೆ ಕೂಡ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತೆ ಮುರಳಿ ಮನೋಹರ್ ಜೋಶಿ ಅವರು ಹೇಳಿಕೆ ನೀಡಿದ್ದಾರೆ.
ಯಾವುದೇ ದೇಶದ ಆಂತರಿಕ ವಿಚಾರದಲ್ಲಿ ಬಾಹ್ಯ ಪ್ರಭಾವ ನಾವು ಸಹಿಸಲ್ಲ: ಮೋದಿ, ಪುಟಿನ್
ತತ್ವಗಳ ಆಧಾರದಲ್ಲಿ ಪ್ರಧಾನಿ ಜತೆ ನಿರ್ಭೀತಿಯಿಂದ ವಾದಿಸಬಲ್ಲ ನಾಯಕತ್ವದ ಅಗತ್ಯ ಭಾರತಕ್ಕೆ ಇದೆ ಎಂದು ಮುರಳಿ ಮನೋಹರ ಜೋಶಿ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ. ಹೈದರಾಬಾದ್ನಲ್ಲಿ ಜುಲೈ 28ರಂದು ಮೃತಪಟ್ಟ ಕಾಂಗ್ರೆಸ್ನ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಎಸ್ ಜೈಪಾಲ್ ರೆಡ್ಡಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜಿಯಾಗದ ಜೈಪಾಲ್ ರೆಡ್ಡಿ
1990ರ ದಶಕದಲ್ಲಿ ಜೈಪಾಲ್ ರೆಡ್ಡಿ ಅವರೊಂದಿಗಿನ ತಮ್ಮ ಒಡನಾಟವನ್ನು ನೆನೆದ ಜೋಶಿ, ಬೌದ್ಧಿಕ ಆಸ್ತಿ ಹಕ್ಕು ಕುರಿತಾದ ಸಂಸದೀಯ ಸಮಿತಿಯೊಂದರ ಸದಸ್ಯರಾಗಿದ್ದ ದಿನಗಳನ್ನು ಸ್ಮರಿಸಿಕೊಂಡರು. ''ಈ ವಿಚಾರವಾಗಿ ಅವರು ತಮ್ಮ ಅಭಿಪ್ರಾಯಗಳನ್ನು ಕೊನೆಯವರೆಗೂ, ಪ್ರತಿ ಘಟ್ಟದಲ್ಲಿಯೂ ಎಲ್ಲರೊಂದಿಗೂ ಹಂಚಿಕೊಳ್ಳುತ್ತಿದ್ದರು. ಅವರು ವೇದಿಕೆಯ ಸದಸ್ಯರಾಗಿರಲಿ, ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷದ ಸದಸ್ಯರಾಗಿರಲಿ. ಅವರು ಈ ವಿಚಾರಗಳಲ್ಲಿ ಯಾರೊಂದಿಗೂ ರಾಜಿಯಾಗುತ್ತಿರಲಿಲ್ಲ'' ಎಂದು ಹೇಳಿದರು.
ಪ್ರಧಾನಿ ಜತೆ ವಾದಿಸುವವರು ಬೇಕು
''ಇಂದು ಅಂತಹ ನಾಯಕತ್ವದ ಅಗತ್ಯವಿದೆ. ಯಾವುದೇ ಭಯವಿಲ್ಲದೆ ಪ್ರಧಾನ ಮಂತ್ರಿಯವರು (ನರೇಂದ್ರ ಮೋದಿ) ಸಹಮತ ವ್ಯಕ್ತಪಡಿಸುತ್ತಾರೆಯೇ ಅಥವಾ ಸಿಟ್ಟಿಗೇಳುತ್ತಾರೆಯೇ ಮತ್ತು ತಮ್ಮೊಂದಿಗೆ ವಾದ ಮಂಡಿಸುತ್ತಾರೆಯೇ ಎಂಬ ಸಂಗತಿಗಳ ಬಗ್ಗೆ ಯಾವುದೇ ಅಂಜಿಕೆಯಿಲ್ಲದೆಯೇ ತತ್ವಗಳ ಆಧಾರದ ಮೇಲೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವವರು ಬೇಕಿದ್ದಾರೆ'' ಎಂದರು.
ಮೋದಿ ಕನಸಿನ ಮುದ್ರಾ ಯೋಜನೆ ವೈಫಲ್ಯ ಸರ್ಕಾರಿ ಸಮೀಕ್ಷಾ ವರದಿ
ಪಕ್ಷಾತೀತ ಚರ್ಚೆಗಳ ವೇದಿಕೆಗಳೇ ನಾಶ
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಪಕ್ಷಗಳ ಗಡಿಯಾಚೆಗೆ ರಾಜಕಾರಣಿಗಳು ಒಟ್ಟಾಗಿ ಚರ್ಚಿಸುವ ವೇದಿಕೆಗಳು ಸಾಕಷ್ಟಿದ್ದವು. ಇಂದು ಅಂತಹ ವೇದಿಕೆಗಳು 'ಬಹುತೇಕ ಮುಗಿದುಹೋಗಿವೆ' ಎಂದು ಹೇಳಿದರು.
''ವಿಭಿನ್ನ ಪಕ್ಷಗಳ ನಾಯಕರು ಈ ವೇದಿಕೆಯಲ್ಲಿರುತ್ತಿದ್ದರು. ಅಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಇಂದು ಅಂತಹ ಪ್ರಯತ್ನಗಳು ತೀರಾ ಕಡಿಮೆಯಾಗಿವೆ. ಅವುಗಳು ಬಹುತೇಕ ಮುಗಿದುಹೋಗಿವೆ. ಅಂತಹ ಅಭ್ಯಾಸಗಳಿಗೆ ಮರುಜೀವ ಕೊಡುವ ಅಗತ್ಯವಿದೆ'' ಎಂದು ಅಭಿಪ್ರಾಯಪಟ್ಟರು.
ದೇಶ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪಕ್ಷಗಳಾಚೆ ಚರ್ಚೆಗಳನ್ನು ನಡೆಸುವುದು, ಅದೇ ಸಮಯದಲ್ಲಿ ಪಕ್ಷದೊಂದಿಗಿನ ಸಂಬಂಧವನ್ನು ಬದಿಗಿಸಿರುವುದು ರೆಡ್ಡಿ ಅವರಿಗೆ ನೀಡುವ ನಿಜವಾದ ಗೌರವವಾಗುತ್ತದೆ ಎಂದರು.
ಜೋಶಿ ಅವರೇ ಧೈರ್ಯ ತಂದುಕೊಳ್ಳಲಿ
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೈಜ ಸಮಸ್ಯೆಗಳ ಕುರಿತು 'ನಿರ್ಭೀತ' ವಾದ ಮಂಡನೆ ಮಾಡುವಂತೆ ಜೋಶಿ ಅವರಿಗೇ ಮನವಿ ಮಾಡುವ ಮೂಲಕ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರ ಕಾಲೆಳೆದಿದ್ದಾರೆ.
''ಜೋಶಿ ಅವರು ಬಿಜೆಪಿಯ ಅಧ್ಯಕ್ಷರಾಗಿದ್ದರು. ಅವರು ಧೈರ್ಯವಂತರಾಗಿರಬೇಕು ಮತ್ತು ವಾಸ್ತವ ಸಮಸ್ಯೆಗಳ ಕುರಿತು ಮೋದಿ ಅವರನ್ನು ಪ್ರಶ್ನಿಸಬೇಕು'' ಎಂದು ತಿವಾರಿ ಹೇಳಿದ್ದಾರೆ.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದು ಬಿಜೆಪಿ 2.0 ಅಥವಾ ಆರೆಸ್ಸೆಸ್?