ಇಶ್ರತ್ ಜಹಾನ್ ಎನ್ಕೌಂಟರ್: ಮೋದಿ ಟೀಕಾಕಾರರು ಬಾಯಿಬಿಡಿ ಈಗ..
ಮುಂಬೈ ಸೆಷನ್ ಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುತ್ತಿರುವ ವಿಚಾರಣೆಯ ವೇಳೆ, 26/11 ಮುಂಬೈ ಬಾಂಬ್ ದಾಳಿಯ ಪ್ರಧಾನ ಸೂತ್ರದಾರ ಡೇವಿಡ್ ಕೋಲ್ಮನ್ ಹೆಡ್ಲಿ ಹೊಸ ಹೊಸ ವಿಚಾರಗಳನ್ನು ಬಾಯಿಬಿಟ್ಟಿದ್ದಾನೆ.
ಮುಂಬೈ ದಾಳಿಗೂ ಮೊದಲು ಎಂಟು ಬಾರಿ ಭಾರತಕ್ಕೆ ಭೇಟಿ ನೀಡಿದ್ದು, ಅದರಲ್ಲಿ ಏಳು ಬಾರಿ ಪಾಕಿಸ್ತಾನದ ಮೂಲಕ ಮುಂಬೈಗೆ ಆಗಮಿಸಿದ್ದು ನಿಜ ಎಂದು ಬಾಯಿಬಿಟ್ಟಿರುವುದಲ್ಲದೇ ತಾನು ಲಷ್ಕರ್ ಇ-ತೊಯ್ಬಾ ಸಂಘಟನೆಯ ಹಿಂಬಾಲಕ ಎನ್ನುವುದು ಒಪ್ಪಿಕೊಂಡಿರುವುದು ವಾರದ ಹಿಂದಿನ ಹಳೇ ವಿಚಾರ. (ಡೇವಿಡ್ ಹೆಡ್ಲಿ ಬಾಯ್ಬಿಟ್ಟ ಸತ್ಯಗಳು)
ಸತತ ಆರು ದಿನಗಳಿಂದ ನಡೆಯುತ್ತಿದ್ದ ವಿಚಾರಣೆಯ ವೇಳೆ (ಫೆ 8 ರಿಂದ 13) ಹೆಡ್ಲಿ, ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದ ಕಾಲದಲ್ಲಿ ನಡೆದಿದ್ದ ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಶ್ರತ್ ಲಷ್ಕರ್ ಇ ತೋಯ್ಬಾ ರಕ್ತಪಿಪಾಸು ಉಗ್ರ ಸಂಘಟನೆಯ 'ಮಾನವ ಬಾಂಬರ್' ಎನ್ನುವ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದ.
ವಿಚಾರಣೆಯ ಸಂದರ್ಭದಲ್ಲಿ ಮತ್ತಷ್ಟು ವಿಷಯವನ್ನು ಬಹಿರಂಗ ಪಡಿಸಿರುವ ಹೆಡ್ಲಿ, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಮತ್ತು ಉಗ್ರ ರೆಹಮಾನ್ ಲಖ್ವಿ ವಿರುದ್ದ ಪಾಕಿಸ್ತಾನ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದಾನೆ. (ಉಗ್ರ ಹೆಡ್ಲಿ ತಪ್ಪೊಪ್ಪಿಗೆ, ರೋಚಕ ಸತ್ಯಗಳ ವಿವರ)
ಅಮೆರಿಕ ಜೈಲಿನಿಂದ ಮುಂಬೈ ಕೋರ್ಟಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡುತ್ತಿರುವ ಅಮೆರಿಕಾ ಮೂಲದ ಪಾಕ್ ಉಗ್ರ ಹೆಡ್ಲಿ, ಮುಂಬೈ ದಾಳಿಯ ನಂತರ ಕೂಡಾ ನಾನು ಎಲ್ಇಟಿ ಸಂಘಟನೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದೆ ಎಂದು ತಪ್ಪೊಪ್ಪಿಗೆ ನೀಡಿದ್ದಾನೆ.
ಇಶ್ರತ್ ಎನ್ಕೌಂಟರ್ ಸಂಬಂಧ, ಅಂದು ಮೋದಿ ಟೀಕಾಕಾರರು ನೀಡಿದ್ದ ಹೇಳಿಕೆಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.. (ಸ್ಲೈಡ್ ಮಾಹಿತಿ: ಇನ್ಸಿಸ್ಟ್ ಪೋಸ್ಟ್)
ಕಾಂಗ್ರೆಸ್, ರಾಷ್ಟ್ರೀಯ ವಾಹಿನಿಯ ಪ್ರಮುಖರು
ಇಶ್ರತ್ ಎನ್ಕೌಂಟರ್ ವಿಚಾರದಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ವರಿಷ್ಠ ಅಮಿತ್ ಶಾ ಅವರನ್ನು ಕಾಂಗ್ರೆಸ್, ಇತರ ರಾಜಕೀಯ ಮುಖಂಡರು ಮತ್ತು ಕೆಲವೊಂದು ರಾಷ್ಟ್ರೀಯ ವಾಹಿನಿಯ ಪತ್ರಕರ್ತರು ಮನಬಂದಂತೆ ಹೇಳಿಕೆ ನೀಡಿದ್ದರು, ನರಹಂತಕ ಎನ್ನುವ ಪದಪ್ರಯೋಗವೂ ನಡೆದಿತ್ತು.
ಮೋದಿ, ಶಾಗೆ ಕ್ಲೀನ್ ಚಿಟ್
ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಸಿಲುಕಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಿಬಿಐ ನ್ಯಾಯಾಲಯ ಡಿಸೆಂಬರ್ 30, 2014ರಂದು ಕ್ಲೀನ್ ಚಿಟ್ ನೀಡಿತ್ತು. ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿ ಕೇಸಿನಿಂದ ಖುಲಾಸೆಗೊಳಿಸುವಂತೆ ಶಾ ಅವರು ಅರ್ಜಿ ಹಾಕಿದ್ದರು.
ಅರವಿಂದ್ ಕೇಜ್ರಿವಾಲ್
ಗುಜರಾತ್ ನಲ್ಲಿ ನಕಲಿ ಎನ್ಕೌಂಟರ್ ವಿಚಾರದಲ್ಲಿ ಹಲವು ಮುಸ್ಲಿಮರು ಸಾವನ್ನಪ್ಪಿದ್ದಾರೆ. ಇಶ್ರತ್ ಜಹಾನ್ ಕೂಡಾ ಇದೇ ರೀತಿಯ ನಕಲಿ ಎನ್ಕೌಂಟರಿಗೆ ಬಲಿಯಾದ ಮುಗ್ದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದರು.
ಗುಲಾಂನಬಿ ಆಜಾದ್
ಮೋದಿ ಟೀಕಿಸಿರುವುದಲ್ಲಿ ಮಂಚೂಣಿಯಲ್ಲಿರುವ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂನಬಿ ಆಜಾದ್, ಇಶ್ರತ್ ಜಹಾನ್ ಮತ್ತು ಇತರ ಮೂವರು ನಕಲಿ ಎನ್ಕೌಂಟರ್ ನಲ್ಲಿ ಬಲಿಯಾಗಿದ್ದಾರೆ. ಮೋದಿ ಆಡಳಿತದಲ್ಲಿ ಇದೆಲ್ಲಾ ಮಾಮೂಲಿ ಎಂದು ಹೇಳಿಕೆ ನೀಡಿದ್ದರು.
ಕಪಿಲ್ ಸಿಬಲ್
ನಾನೊಬ್ಬ ವಕೀಲ, ಮೋದಿ ಮತ್ತು ಶಾ ಅವರನ್ನು ರಕ್ಷಿಸುತ್ತಿರುವವರು ಯಾರು? ಅವರ ವಿರುದ್ದ ರುಜುವಾಗುವಂತಹ ದಾಖಲೆಗಳು ಇರುವಾಗ ಅವರಿಬ್ಬರನ್ನು ಇಶ್ರತ್ ಕೇಸಿನಲ್ಲಿ ಬಂಧಿಸಬಹುದು ಎಂದು ವಕಾಲತ್ತು ಮಾಡಿದ್ದರು ಕಪಿಲ್ ಸಿಬಲ್.
ಮಧುಸೂಧನ್ ಮಿಸ್ತ್ರಿ
ಕಾಂಗ್ರೆಸ್ಸಿನ ಇನ್ನೊಬ್ಬ ಹಿರಿಯ ಮುಖಂಡ ಮಿಸ್ತ್ರಿ, ಗುಜರಾತ್ ನಾಗರೀಕರಿಗೆ ಇದೊಂದು ಫೇಕ್ ಎನ್ಕೌಂಟರ್ ಎನ್ನುವುದು ಅರಿತಿದೆ. ಇಶ್ರತ್ ಮುಗ್ದೆ ಎಂದು ಮಿಸ್ತ್ರಿ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಮನೀಶ್ ತಿವಾರಿ
ವಿವಾದಕಾರಿ ಹೇಳಿಕೆ ನೀಡುವಲ್ಲಿ ಎತ್ತಿದ 'ಕೈ' ಮುಖಂಡ ಮನೀಶ್ ತಿವಾರಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಾಡುಹಗಲೇ ಪೊಲೀಸರು ಎನ್ಕೌಂಟರ್ ನಡೆಸುವಂತಿಲ್ಲ ಎಂದು ಹೇಳಿದ್ದರು.
ನಿತೀಶ್ ಕುಮಾರ್
ಇಶ್ರತ್ ಬಿಹಾರದ ಹುಡುಗಿ, ಗುಜರಾತಿನಲ್ಲಿ ಸಾವನ್ನಪ್ಪುತ್ತಾಳೆ. ಆಕೆ ಮಾಡಿದ ತಪ್ಪಾದರೂ ಏನು? ಬಿಹಾರದಲ್ಲಿನ ಬಿಜೆಪಿ ಮುಖಂಡರು ಯಾಕೆ ಸುಮ್ಮನಾಗಿದ್ದಾರೆಂದು ಜೆಡೆಯು ಮುಖಂಡ ನಿತೀಶ್ ಕುಮಾರ್ ಪ್ರಶ್ನಿಸಿದ್ದರು.
ಮಾಜಿ ವಿತ್ತಸಚಿವ ಚಿದಂಬರಂ
ಗುಪ್ತಚರ ಇಲಾಖೆಯ ವರದಿ ಆಧರಿಸಿ ರಾಜ್ಯ ಸರಕಾರ ಕೆಲಸ ಮಾಡುತ್ತದೆ ಎಂದರೆ ಅಂತಹ ಸರಕಾರಕ್ಕೆ ನನ್ನ ಸಹಮತವಿಲ್ಲ. ಗುಪ್ತಚರ ಇಲಾಖೆಯ ವರದಿ ಆಧರಿಸಿ ಎನ್ಕೌಂಟರ್ ನಡೆಸಿ ಎಂದು ಯಾರೂ ಸಲಹೆ ನೀಡಿಲ್ಲ ಎಂದು ಚಿದಂಬರಂ ಹೇಳಿದ್ದರು.
ರಾಜದೀಪ್ ಸರ್ದೇಸಾಯಿ
ರಾಷ್ಟ್ರೀಯ ವಾಹಿನಿಯೊಂದರ ಸಂಪಾದಕ, ಜವಾಬ್ದಾರಿಯುತ ಪತ್ರಕರ್ತರೂ ಆಗಿರ ಬೇಕಾಗಿರುವ ರಾಜದೀಪ್, ಇಶ್ರತ್ ನಕಲಿ ಎನ್ಕೌಂಟರ್ ನಲ್ಲಿ ಬಲಿಯಾಗಿದ್ದಾಳೆ. ಪೊಲೀಸ್ ಮತ್ತು ನಮ್ಮ ವ್ಯವಸ್ಥೆಯಲ್ಲಿರುವ ಕೋಮುವಾದದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದರು.
ಬರ್ಖಾ ದತ್
ಮೋದಿ ಮತ್ತು ಮೋದಿ ಸರಕಾರದ ಆಡಳಿತದ ಲೋಪದೋಷಗಳನ್ನು ಮಾತ್ರ ಹದ್ದಿನ ಕಣ್ಣಿನಂತೆ ಕಾಯುವ ಬರ್ಖಾ ದತ್, ಇಶ್ರತ್ ಜಹಾನ್ ಕೇಸ್ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಾಕ್ಷಿ ಸಮರಕ್ಕೆ ನಾಂದಿಯಾಗಿದೆ ಮತ್ತು ಈವರೆಗೆ ಯಾವ ಪಕ್ಷ ಈ ವಿಚಾರದಲ್ಲಿ ಹಿಡಿತ ಸಾಧಿಸುತ್ತಿದೆ ಎಂದು ಹೇಳಿದ್ದರು.