ಹಳಿ ತಪ್ಪಿದ ಬುಲೆಟ್ ರೈಲು ಯೋಜನೆ?: ಜಪಾನ್ ನಿರಾಸಕ್ತಿ, ಅತಿ ವೇಗದ ರೈಲು ಮತ್ತಷ್ಟು ವಿಳಂಬ
ನವದೆಹಲಿ, ಸೆಪ್ಟೆಂಬರ್ 5: ಡಿಸೆಂಬರ್ 2023ರ ಅಂತ್ಯದೊಳಗೆ ಭಾರತದ ಮೊದಲ ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೈನ್ ಓಡಾಡಲಿದೆ ಎಂದು ಹೇಳಲಾಗಿತ್ತು. ಆದರೆ ಟೆಂಡರ್ಗಳ ಆರಂಭ ಮತ್ತು ಭೂಸ್ವಾಧೀನ ಪ್ರಕ್ರಿಯೆಗಳಿಗೆ ಕೊರೊನಾ ವೈರಸ್ ಸಾಂಕ್ರಾಮಿಕ ವಿಘ್ನ ತಂದೊಡ್ಡಿದೆ. ಹೀಗಾಗಿ ನಿಗದಿತ ಗಡುವಿನ ಅವಧಿಯಲ್ಲಿ ಈ ಯೋಜನೆ ಸಾಕಾರಗೊಳ್ಳುವುದು ಕನಸಿನ ಮಾತಾಗಿದೆ.
Recommended Video
ಬಿಡ್ಡರ್ಗಳು ಅಧಿಕ ಮೊತ್ತದ ದರವನ್ನು ನೀಡುತ್ತಿರುವುದರಿಂದ ಜಪಾನ್ನ ಕಂಪೆನಿಗಳು ಟೆಂಡರ್ನಲ್ಲಿ ಪಾಲ್ಗೊಳ್ಳಲು ಆಸಕ್ತಿ ವಹಿಸುತ್ತಿಲ್ಲ. ಇದರಿಂದ ಅನೇಕ ಟೆಂಡರ್ಗಳು ರದ್ದುಗೊಂಡಿವೆ. ಹೀಗಾಗಿ ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಹಲವು ಅಡೆತಡೆಗಳು ಉಂಟಾಗಿದ್ದು, ಈ ಯೋಜನೆ ಇನ್ನೂ ಐದು ವರ್ಷ ವಿಳಂಬವಾಗುವ ಸಾಧ್ಯತೆ ಇದೆ.
ಮೋದಿ ಮಹಾತ್ವಾಕಾಂಕ್ಷೆಯ ಬುಲೆಟ್ ರೈಲಿಗೆ ರೈತರಿಂದ ಕೆಂಪು ಬಾವುಟ
2023ರ ಡಿಸೆಂಬರ್ ಬದಲು 2028ರ ಅಕ್ಟೋಬರ್ ವೇಳೆಗೆ ಬುಲಟ್ ರೈಲು ಯೋಜನೆ ಪೂರ್ಣಗೊಳ್ಳಬಹುದು ಎಂದು ರೈಲ್ವೆ ಇಲಾಖೆ ನಿರೀಕ್ಷಿಸಿದೆ. ಈ ಯೋಜನೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಜಪಾನ್ನ ತಂಡದೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ಪರಿಷ್ಕೃತ ಗಡುವನ್ನು ಅಂದಾಜಿಸಲಾಗಿದೆ. ಮುಂದೆ ಓದಿ.
ಶೇ 80ರಷ್ಟು ಜಪಾನ್ ಸಾಲ
508 ಕಿ.ಮೀ. ಉದ್ದದ ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್ಅನ್ನು ಜಪಾನ್ನ ಶೇ 0.1 ಬಡ್ಡಿ ಮತ್ತು 15 ವರ್ಷಗಳ ಹೆಚ್ಚುವರಿ ಮರುಪಾವತಿ ಅವಧಿಯ ಶೇ 80ರಷ್ಟು ಸಾಲದ ಹಣದಿಂದ ನಿರ್ಮಿಸಲಾಗುತ್ತಿದೆ. ಇದರಲ್ಲಿ ಬಹುತೇಕ ತಂತ್ರಜ್ಞಾನ ಜಪಾನ್ನದ್ದೇ ಆಗಿರಲಿದೆ. ಈ ಯೋಜನೆಯ ಒಂದು ಭಾಗವನ್ನಾದರೂ ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಆಗಸ್ಟ್ 2022ರ ವೇಳೆಗೆ ಆರಂಭಿಸಲು ಉದ್ದೇಶಿಸಲಾಗಿತ್ತು. ಈಗಲೂ ರೈಲ್ವೆ ಆ ಮೂಲ ಸಮಯ ಗಡುವಿನ ಯೋಜನೆಯನ್ನು ಉಳಿಸಿಕೊಂಡಿದೆ.
ಶೇ 63ರಷ್ಟು ಭೂಸ್ವಾಧೀನ
ರಾಷ್ಟ್ರೀಯ ಹೈ ಸ್ಪೀಡ್ ರೈಲು ನಿಗಮವು (ಎನ್ಎಚ್ಎಸ್ಆರ್ಸಿಎಲ್) ಯೋಜನೆಗಾಗಿ ಈಗಾಗಲೇ ಶೇ 63ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಗುಜರಾತ್ನಲ್ಲಿ ಸುಮಾರು ಶೇ 77ರಷ್ಟು ಭೂಮಿ, ದಾದರ್ ನಗರ್ ಹವೇಲಿಯಲ್ಲಿ ಶೇ 80 ಮತ್ತು ಮಹಾರಾಷ್ಟ್ರದಲ್ಲಿ ಶೇ 22ರಷ್ಟು ಭೂಸ್ವಾಧೀನ ನಡೆದಿದೆ. ಮಹಾರಾಷ್ಟ್ರದ ಪಾಲ್ಗರ್ ಮತ್ತು ಗುಜರಾತ್ನ ನವಸಾರಿಯಲ್ಲಿನ ಭೂಸ್ವಾಧೀನ ವಿವಾದದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು, ಚೆನ್ನೈ, ಮೈಸೂರು ಮಾರ್ಗದಲ್ಲಿ ಬುಲೆಟ್ ರೈಲು
ದರ ಹೆಚ್ಚಿಸಿದ ಕಂಪೆನಿಗಳು
ಸುಮಾರು 21 ಕಿ.ಮೀ. ಸುರಂಗ ಮಾರ್ಗ ಹಾಗೂ ಏಳು ಕಿ.ಮೀ. ಉದ್ದ ಸಮುದ್ರದಡಿಯ ಮಾರ್ಗದಂತಹ ಕೆಲವು ಅತ್ಯಂತ ನಿರ್ಣಾಯಕ ವಿಭಾಗಗಳ ಟೆಂಡರ್ಗೆ ಜಪಾನ್ ಕಂಪೆನಿಗಳ ನಿರಾಸಕ್ತಿ ಕಾಣಿಸುತ್ತಿದೆ. ಈ ವರ್ಷದ ಅರಂಭದಲ್ಲಿ ನಡೆದ ಪ್ರಯತ್ನದಲ್ಲಿ ಟೆಂಡರ್ಗಳನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಜಪಾನ್ ಕಂಪೆನಿಗಳು ನಡೆಸಬೇಕಾದ 11 ಟೆಂಡರ್ಗಳಿಗೆ ಅಂದಾಜಿಗಿಂತಲೂ ಶೇ 90 ಪಟ್ಟು ದರ ಹೆಚ್ಚಾಗಿದೆ. ಈ ದರ ಏರಿಕೆಗೆ ಭಾರತ ನಿರಾಕರಿಸಿದೆ ಎನ್ನಲಾಗಿದೆ.
ಸುರಂಗ ಮಾರ್ಗಕ್ಕೆ 5 ವರ್ಷ
21 ಕಿ.ಮೀ. ಸುರಂಗ ಮಾರ್ಗ ಒಂದಕ್ಕೇ ಅಧಿಕ ಸಮಯ ಬೇಕಾಗುತ್ತದೆ. ಇಲ್ಲಿ ಅತ್ಯಾಧುನಿಕ ಕೊರೆಯುವ ಯಂತ್ರಗಳನ್ನು ಬಳಸಿಕೊಳ್ಳಬೇಕಿದ್ದು, ಮಹಾರಾಷ್ಟ್ರದ ವನ್ಯಜೀವಿ ಸಂರಕ್ಷಣಾ ಅರಣ್ಯಕ್ಕೆ ಧಕ್ಕೆಯಾಗದಂತೆ ವಿಶೇಷ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ. ಅಂದಾಜಿನ ಪ್ರಕಾರ ಇಲ್ಲಿಯ ಕೆಲಸಕ್ಕೇ 60 ತಿಂಗಳು ಸಮಯ ಬೇಕಾಗಲಿದೆ.
ಶಿಂಜೋ ಅಬೆ ರಾಜೀನಾಮೆ ಪರಿಣಾಮ
ಇತರೆ ಸಾಮಗ್ರಿಗಳನ್ನು ಖರೀದಿಸುವ ವಿಚಾರವೂ ಸಮಸ್ಯೆ ಸೃಷ್ಟಿಸಿದೆ. ಜಪಾನಿಗರ ಪ್ರಕಾರ ಕವಾಸಕಿ ಮತ್ತು ಹಿಟಾಚಿ ಕಂಪೆನಿಗಳು ಮಾತ್ರವೇ ರೈಲುಗಳನ್ನು ಪೂರೈಸಲು ಅರ್ಹರಾಗಿದ್ದಾರೆ. ಆದರೆ ಈ ಎರಡೂ ಕಂಪೆನಿಗಳು ಜಂಟಿಯಾಗಿ ಕೇವಲ ಒಂದು ಬಿಡ್ ಸಲ್ಲಿಸಿವೆ. ಟೆಂಡರ್ಗೆ ಸಂಬಂಧಿಸಿದ ಅನೇಕ ಸಮಸ್ಯೆಗಳ ಬಗ್ಗೆ ಭಾರತ ಮತ್ತು ಜಪಾನ್ ಉನ್ನತ ಮಟ್ಟದ ಸಮಿತಿ ಸಭೆಗಳಲ್ಲಿ ಚರ್ಚೆ ನಡೆಯಬೇಕಿದೆ. ಆದರೆ ಕೊರೊನಾ ವೈರಸ್ ಪಿಡುಗಿನ ಕಾರಣ ಈ ವರ್ಷ ಇದುವರೆಗೂ ಸಭೆ ನಡೆದಿಲ್ಲ. ಅಲ್ಲದೆ, ಜಪಾನ್ ಪ್ರಧಾನಿ ಶಿಂಜೋ ಅಬೆ ಹುದ್ದೆಯಿಂದ ಕೆಳಕ್ಕಿಳಿಯುತ್ತಿರುವುದು ಕೂಡ ಈ ಯೋಜನೆಗೆ ಹಿನ್ನಡೆ ಉಂಟುಮಾಡಿದೆ.