ಕುಡುಕರು, ರೌಡಿಗಳು ಸಚಿವರು: ಮಗನ ಆಡಳಿತಕ್ಕೆ ಮುಲಾಯಂ ಗರಂ
ಈ ಪಕ್ಷ ಕಟ್ಟುವುದಕ್ಕೆ ತುಂಬಾ ಶ್ರಮ ಹಾಕಿದ್ದೇವೆ. ಯುವಜನಕ್ಕೆ ಪ್ರಾಶಸ್ತ್ಯ ನೀಡಿದ್ದೇವೆ. ಕೆಲ ಮಂತ್ರಿಗಳು ಸೈಕೋಪಾತ್ ಗಳಂತೆ ವರ್ತಿಸುತ್ತಿದ್ದಾರೆ. ದೊಡ್ಡದಾಗಿ ಯೋಚನೆ ಕೂಡ ಮಾಡಲಾರದವರು ಸಚಿವರಾಗಿದ್ದಾರೆ: ಮುಲಾಯಂ
ಉತ್ತರ ಪ್ರದೇಶ, ಅಕ್ಟೋಬರ್ 24: ಉತ್ತರ ಪ್ರದೇಶ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆ ಕಾಣಿಸುತ್ತಿದ್ದು, ಸೋಮವಾರ ತಾರಕಕ್ಕೇರಿದೆ. ಭಾವನಾತ್ಮಕ ಸನ್ನಿವೇಶ, ಕಣ್ಣೀರು, ಕೂಗಾಟಕ್ಕೆ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಮಗ, ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಾಕ್ಷಿಯಾಗಿದ್ದಾರೆ.
ತಮ್ಮ ಮಗ ಅಖಿಲೇಶ್ ಹಾಗೂ ಸೋದರ ಶಿವಪಾಲ್ ಮಧ್ಯೆ ಸಂಧಾನಕ್ಕಾಗಿ ಮುಲಾಯಂ ಯತ್ನಿಸಿದ್ದಾರೆ. ಆಗ ಶಿವಪಾಲ್, ಅಮರ್ ಸಿಂಗ್ ಪಕ್ಷದಲ್ಲೇ ಉಳಿಯಲಿದ್ದಾರೆ ಎಂದಿದ್ದಾರೆ. ಅಗ ಅಖಿಲೇಶ್, ಅವರನ್ನು ಪಕ್ಷವು ಒಪ್ಪಲು ಸಾಧ್ಯವಿಲ್ಲ ಎಂದು ಖಡಾಖಡಿಯಾಗಿ ಹೇಳಿದ್ದರಿಂದ ಮುಲಾಯಂ ಸಭೆಯಿಂದಲೇ ಹೊರನಡೆದಿದ್ದಾರೆ.[ಅಪ್ಪ ಬಯಸಿದರೆ ರಾಜೀನಾಮೆ ನೀಡುವೆ, ಹೊಸ ಪಕ್ಷ ಇಲ್ಲ: ಅಖಿಲೇಶ್]
ಈ ಭಿನ್ನಾಭಿಪ್ರಾಯದಿಂದ ಯಾರಿಗೂ ಪ್ರಯೋಜನವಿಲ್ಲ ಎಂದಿರುವ ಮುಲಾಯಂ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಏನೂ ಮಾತನಾಡಿಲ್ಲ. ಸಭೆಯ ನಂತರ ಸಮಾಜವಾದಿ ಪಕ್ಷದ ಕಾರ್ಯಕರ್ತರು ಲಖನೌನ ವಿಕ್ರಮಾದಿತ್ಯ ರಸ್ತೆಯಲ್ಲಿ ಜಮೆಯಾಗಿದ್ದಾರೆ. ಪರಿಸ್ಥಿತಿ ಉದ್ವಿಗ್ನವಾಗಿದೆ ಎಂಬುದನ್ನು ಸೂಚಿಸುವಂತೆ ಸ್ಥಳದಲ್ಲಿ ಪೊಲೀಸರ ಸಂಖ್ಯೆಯೂ ಹೆಚ್ಚಿತ್ತು.
ಮುಲಾಯಂ ಹಾಗೂ ಅಖಿಲೇಶ್ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬಂತೆ ಇಬ್ಬರು ಪರಸ್ಪರ ಕೂಗಾಡಿಕೊಂಡಿದ್ದಾರೆ, ನಿಮ್ಮ ಮುಖ್ಯಮಂತ್ರಿ ಸುಳ್ಳು ಹೇಳುತ್ತಿದ್ದಾರೆ ಎಂದು ಪಕ್ಷದ ಕಾರ್ಯಕರ್ತರಿಗೆ ಮುಲಾಯಂ ಹೇಳಿದ್ದಾರೆ. ನಾವು ಬಲಹೀನತೆಗಳ ವಿರುದ್ಧ ಬಡಿದಾಡಬೇಕೆ ವಿನಾ ನಮ್ಮ ಮಧ್ಯವೇ ಅಲ್ಲ ಅಂತ ಸೇರಿಸಿದ್ದಾರೆ.[ಸಮಾಜವಾದಿ ಪಕ್ಷ ಕುಟುಂಬವಿದ್ದಂತೆ, ಎಂದಿಗೂ ಒಡೆಯುವುದಿಲ್ಲ: ಮುಲಾಯಂ]
ಈ ಪಕ್ಷ ಕಟ್ಟುವುದಕ್ಕೆ ತುಂಬಾ ಶ್ರಮ ಹಾಕಿದ್ದೇವೆ. ಯುವಜನಕ್ಕೆ ಪ್ರಾಶಸ್ತ್ಯ ನೀಡಿದ್ದೇವೆ. ಕೆಲ ಮಂತ್ರಿಗಳು ಸೈಕೋಪಾತ್ ಗಳಂತೆ ವರ್ತಿಸುತ್ತಿದ್ದಾರೆ. ದೊಡ್ಡದಾಗಿ ಯೋಚನೆ ಕೂಡ ಮಾಡಲಾರದವರು ಸಚಿವರಾಗಿದ್ದಾರೆ ಎಂದಿರುವ ಮುಲಾಯಂ ಸಿಂಗ್, ಟೀಕೆಯನ್ನು ಸಹಿಸಲಾರದವರು ನಾಯಕನಾಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಅಖಿಲೇಶ್ ಗೆ ತಿವಿದಿದ್ದಾರೆ.
ನಾನು ಬಲಹೀನನಾಗಿದ್ದೇನೆ ಅಂದುಕೊಳ್ಳಬೇಡಿ. ಯುವಜನ ನನ್ನೊಂದಿಗಿಲ್ಲ ಎಂಬ ಭ್ರಮೆ ಬೇಡ. ಪಕ್ಷದಲ್ಲಿರುವ ಯುವ ಜನ ತಮ್ಮನ್ನು ತಾವೇ ರೌಡಿ ಅಂದುಕೊಂಡಿದ್ದಾರೆ. ನಾನು ಅವರೆಲ್ಲರಿಗಿಂತ ದೊಡ್ಡ ರೌಡಿ ಎಂದು ಕೂಡ ಮುಲಾಯಂ ಹೇಳಿದ್ದಾರೆ.[ಮುಲಾಯಂ ಕೆಣಕಿದ್ದಕ್ಕೆ ಐಪಿಎಸ್ ಅಮಿತಾಬ್ ಅಮಾನತು]
ನನ್ನ ತಮ್ಮ ಮಾಡಿದ ಸಹಾಯ ಮರೆಯಲು ಸಾಧ್ಯವಿಲ್ಲ. ಕುಡುಕರು-ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಕೆಲವರಿಗೆ ಅಧಿಕಾರವೂ ಸಿಕ್ಕಿ, ಅದರ ಮದ ತಲೆಗೇರಿದೆ. ಅದರೆ ಶಿವಪಾಲ್ ಜನ ನಾಯಕ. ಅಮರ್ ಸಿಂಗ್ ಕೂಡ ನನ್ನ ಸಹೋದರ ಇದ್ದಂತೆ. ಕಷ್ಟದ ಸಮಯದಲ್ಲಿ ಜತೆಗೆ ನಿಂತಿದ್ದಾರೆ. ಪ್ರಧಾನಿ ಮೋದಿ ಆ ಹಂತಕ್ಕೆ ತಲುಪಿರುವುದರ ಹಿಂದಿನ ಶ್ರಮ ಗಮನಿಸಿ ಎಂದು ಪಕ್ಷದ ಕಾರ್ಯಕರ್ತರಿಗೆ ಮುಲಾಯಂ ಹೇಳಿದ್ದಾರೆ.