'ಮಿಸ್ಟರ್ ಅಮಿತ್ ಶಾ, ಜಮ್ಮುಕಾಶ್ಮೀರದಲ್ಲಿ ಈ ಹೊಸ ಯುಗ ನಿಮ್ಮಿಂದಾಗಿ': ಮಾನವ ಹಕ್ಕು ಆಯೋಗ ಅಧ್ಯಕ್ಷ
ನವದೆಹಲಿ, ಅಕ್ಟೋಬರ್ 12: "ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಯುಗಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರಣ, ಅಮಿತ್ ಶಾ, ಜಮ್ಮುಕಾಶ್ಮೀರದಲ್ಲಿ ಈ ಹೊಸ ಯುಗ ನಿಮ್ಮಿಂದಾಗಿ," ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಅರುಣ್ ಮಿಶ್ರಾ ಮಂಗಳವಾರ ಹೇಳಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಎಚ್ಆರ್ಸಿ) 28 ವರ್ಷಗಳ ಸಂಭ್ರಮಾಚರಣೆಯ ಆರಂಭದಲ್ಲಿ ಮಾತನಾಡಿದ ಅರುಣ್ ಮಿಶ್ರಾ "ಇದು ನಿಮಗೆ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಹೊಸ ಯುಗ ಆರಂಭವಾಗಿದೆ," ಎಂದರು.
ಜಮ್ಮು-ಕಾಶ್ಮೀರ ಗುಂಡಿನ ದಾಳಿಯಲ್ಲಿ ಐವರು ಯೋಧರು ಹುತಾತ್ಮ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಬ್ಬರೂ ಇದ್ದ ಕಾರ್ಯಕ್ರಮದಲ್ಲಿ ನ್ಯಾಯಧೀಶ ಅರುಣ್ ಮಿಶ್ರಾ ಮಾತನಾಡಿದರು. "ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆಯಾದರೆ, ಅದು ಅಂತಾರಾಷ್ಟ್ರೀಯ ಶಕ್ತಿಗಳಿಂದ ಪ್ರಚೋದಿತ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಆರೋಪ ಮಾಡುವುದು ರೂಢಿಯಾಗಿದೆ," ಎಂದು ತಿಳಿಸಿದ್ದಾರೆ.
ಅರುಣ್ ಮಿಶ್ರಾ ಅವರ ಈ ಮಾತುಗಳ ಬಳಿಕ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾನವ ಹಕ್ಕುಗಳ "ಆಯ್ದ" ವಿಧಾನದ ಬಗ್ಗೆ ಬಲವಾದ ಟೀಕೆಗಳನ್ನು ಮಾಡಿದರು. "ರಾಜಕೀಯ ಲಾಭ ಮತ್ತು ನಷ್ಟಗನ್ನು ಗುರಿಯಾಗಿಸಿಕೊಂಡು ಮಾನವ ಹಕ್ಕುಗಳನ್ನು ನೋಡುವ ಕೆಲವರು ಇದ್ದಾರೆ," ಎಂದು ಆ ಕೆಲವರ ವಿರುದ್ಧ ವಾಗ್ದಾಳಿ ನಡೆಸಿದರು.
"ಕೆಲವು ಜನರು ಕೆಲವು ಪ್ರಕರಣದಲ್ಲಿ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಗುರುತು ಮಾಡುತ್ತಾರೆ. ಆದರೆ ಅದೇ ರೀತಿಯ ಬೇರೆ ಘಟನೆಗಳು ನಡೆದಾಗ ಆ ಮಾನವ ಹಕ್ಕುಗಳನ್ನು ಬೊಟ್ಟು ಮಾಡಿ ತೋರಿಸುವುದಿಲ್ಲ. ಘಟನೆಯನ್ನು ರಾಜಕೀಯ ದೃಷ್ಟಿಯಿಂದ ನೋಡಿದಾಗ ಅಲ್ಲಿ ಮಾನವ ಹಕ್ಕುಗಳು ಉಲ್ಲಂಘನೆ ಆಗಿದೆ ಎಂದೇ ಕಾಣಿಸುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆ ಇದುವೇ ಎಂದು ಕೆಲವು ನಡವಳಿಕೆಯನ್ನು ಆಯ್ದುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಹಾನಿಕಾರಕ," ಎಂದು ಪ್ರಧಾನ ಮಂತ್ರ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.
ನ್ಯಾಯಮೂರ್ತಿ ಅರುಣ್ ಮಿಶ್ರಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನೂತನ ಅಧ್ಯಕ್ಷರಾಗುವ ಸಾಧ್ಯತೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಯುಗಕ್ಕೆ ನಿಮ್ಮಿಂದಾಗಿ ಎಂದು ಅಮಿತ್ ಶಾರನ್ನು ಉದ್ಧೇಶಿಸಿ ಅರುಣ್ ಮಿಶ್ರಾ ಹೇಳಿದ ಸಂದರ್ಭದಲ್ಲಿ, 2019 ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ರದ್ದು ಮಾಡಿ, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿದ್ದನ್ನು ಉಲ್ಲೇಖ ಮಾಡಿದ್ದಾರೆ.
ನ್ಯಾಯಾಧೀಶ ಅರುಣ್ ಮಿಶ್ರಾ ಈ ವರ್ಷದ ಜೂನ್ನಲ್ಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್ನಿಂದ ಭಾರೀ ವಿರೋಧ ವ್ಯಕ್ತವಾಗಿದ್ದು ಈ ನಡುವೆಯೂ ಅರುಣ್ ಮಿಶ್ರಾರನ್ನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಮುಖ್ಯನ್ಯಾಯಾಧೀಶರಲ್ಲದ ವ್ಯಕ್ತಿಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ತಾನು ನ್ಯಾಯಾಧೀಶರಾಗಿ ಇರುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಬಹುಮುಖ ಪ್ರತಿಭೆ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು.
ನ್ಯಾಯಮೂರ್ತಿ ಅರುಣ್ ಮಿಶ್ರಾ ಮಧ್ಯಪ್ರದೇಶದ ಹೈಕೋರ್ಟ್ನ ನ್ಯಾಯಾಧೀಶರಾಗಿ 1999 ರ ಅಕ್ಟೋಬರ್ 25 ರಂದು ನೇಮಕಗೊಂಡಿದ್ದರು. ಬಳಿಕ ಅವರನ್ನು 2010 ರ ನವೆಂಬರ್ನಲ್ಲಿ ರಾಜಸ್ಥಾನ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ. ನಂತರ 2012 ರ ಡಿಸೆಂಬರ್ನಲ್ಲಿ ಕೋಲ್ಕತ್ತಾ ಹೈಕೋರ್ಟ್ಗೆ ಮುಖ್ಯನ್ಯಾಯಮೂರ್ತಿಯಾಗಿ ವರ್ಗಾಯಿಸಲಾಗಿದೆ. 2014 ರ ಜೂನ್ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಅರುಣ್ ಮಿಶ್ರಾ, ತನ್ನ ನಿವೃತ್ತಿಯ ಐದು ವರ್ಷಗಳಲ್ಲಿ ರಾಜಕೀಯವಾಗಿ ಸೂಕ್ಷ್ಮ ಮತ್ತು ಉನ್ನತ ಮಟ್ಟದ ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ. ಪ್ರಶಾಂತ್ ಭೂಷಣ್ ಪ್ರಕರಣ ಮತ್ತು ಭೂಸ್ವಾಧೀನ ಪ್ರಕರಣದ ವಿಚಾರಣೆಯನ್ನು ಮಿಶ್ರಾ ನಡೆಸಿದ್ದರು.
(ಒನ್ಇಂಡಿಯಾ ಸುದ್ದಿ)