ಸುನಂದಾ ಪುಷ್ಕರ್ ಸಾವು: ಮೌನ ಮುರಿದ ತರೂರ್
ನವದೆಹಲಿ, ಅ 11: ಪತ್ನಿ ಸುನಂದಾ ಪುಷ್ಕರ್ ಅವರ ಅನುಮಾನಾಸ್ಪದ ಸಾವು ವಿಷ ಸೇವಿಸಿದ್ದರಿಂದ ಎಂದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮೊದಲ ಬಾರಿಗೆ ಪತಿ ಮತ್ತು ಹಾಲೀ ತಿರುವನಂತಪುರಂ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ.
ಟೈಮ್ಸ್ ನೌ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ತರೂರ್, ಪೊಲೀಸರು ಈ ಬಗ್ಗೆ ನನಗೆ ಏನೂ ಮಾಹಿತಿ ನೀಡಿರಲಿಲ್ಲ. ಪೋಸ್ಟ್ ಮಾರ್ಟಂ ವರದಿಯ ಪ್ರತಿಯನ್ನು ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದೇನೆಂದು ಹೇಳಿದ್ದಾರೆ.
ಸುನಂದಾ ಪುಷ್ಕರ್ ಸಾವನ್ನಪ್ಪಿದ್ದು ವಿಷ ಸೇವನೆಯಿಂದ ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರು ಹೊಸದಾಗಿ ಮರಣೋತ್ತರ ಪರೀಕ್ಷೆ ವರದಿ ಸಲ್ಲಿಸಿದ್ದರು. ಇದಕ್ಕೆ ಶಶಿ ತರೂರ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಮೌನ ಮುರಿದಿರುವ ತರೂರ್, ವರದಿಯ ಪ್ರತಿ ಕೈಸೇರಿದ ನಂತರ ಈ ಸಂಬಂಧ ಹೇಳಿಕೆ ನೀಡುತ್ತೇನೆಂದು ಹೇಳಿದ್ದಾರೆ.
ಈ ಮಧ್ಯೆ, ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಮತ್ತು ಸಚಿವ ವೆಂಕಯ್ಯ ನಾಯ್ಡು ಸುನಂದಾ ಪುಷ್ಕರ್ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಇತ್ತ, ಸುನಂದಾ ಅವರದ್ದು ಸಹಜ ಸಾವಲ್ಲ, ಅದೊಂದು ಪೂರ್ವ ನಿಯೋಜಿತ ಕೊಲೆ ಎಂದು ಸುನಂದಾ ಕುಟುಂಬದವರು ಆರೋಪಿಸಿದ್ದಾರೆ. ಶಶಿ ತರೂರ್ ಅವರೇ ಈ ಕೊಲೆಯ ಸಂಚುಕೋರರು, ಪಾಕಿಸ್ತಾನದ ಪತ್ರಕರ್ತೆ ಮೆಹರ್ ತರಾರ್ ಜೊತೆಗೆ ಶಶಿಗೆ ಅನೈತಿಕ ಸಂಬಂಧ ಇದ್ದದ್ದು ಸುನಂದಾ ಕೊಲೆಗೆ ಕಾರಣವಾಯಿತು ಎಂದು ಸುನಂದಾ ಕುಟುಂಬದವರು ಆರೋಪಿಸಿದ್ದಾರೆ.
ಜನವರಿ 17, 2014ರಂದು ಸುನಂದಾ ನವದೆಹಲಿಯ ಪಂಚತಾರಾ ಹೋಟೇಲಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಈ ದುರಂತ ನಡೆದ ಎರಡು ದಿನದ ಹಿಂದೆ ಶಶಿ ಮತ್ತು ಪಾಕಿಸ್ತಾನದ ಪತ್ರಕರ್ತೆ ಮೆಹರ್ ಜೊತೆಗಿನ ಒಡನಾಟದ ಸುದ್ದಿಗಳು ಟ್ಚಿಟರ್ ನಲ್ಲಿ ಬಹಿರಂಗಗೊಂಡಿದ್ದವು.