ಚುನಾವಣೆಗೂ ಮುನ್ನ ರಾಜಸ್ಥಾನ ಬಿಜೆಪಿಗೆ ಹೊಸ 'ರಜಪೂತ' ಸಾರಥಿ
ಜೈಪುರ, ಜೂನ್ 29: ರಾಜಸ್ಥಾನದ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಜಾತಿ ರಾಜಕಾರಣ ಮತ್ತಷ್ಟು ಸ್ಪಷ್ಟವಾಗಿದೆ. ಈ ವರ್ಷದ ಅಂತ್ಯಕ್ಕೆ ಇಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನ ರಾಜಸ್ಥಾನ ಬಿಜೆಪಿ ಅಧ್ಯಕ್ಷರಾಗಿ ಮದನ್ ಲಾಲ್ ಸೈನಿ ಆಯ್ಕೆಯಾಗಿದ್ದಾರೆ.
ರಜಪೂತ ಸಮುದಾಯಕ್ಕೆ ಸೇರಿದ ರಾಜ್ಯಸಭಾ ಸದಸ್ಯ, ಹಿರಿಯ ಬಿಜೆಪಿ ನಾಯಕ ಸೈನಿ ಚುನಾವಣೆಗೂ ಮೊದಲು ರಾಜಸ್ಥಾನ ಬಿಜೆಪಿಯ ಚುಕ್ಕಾಣಿ ಹಿಡಿದಿದ್ದಾರೆ. ಕಾಂಗ್ರೆಸ್ ರಜಪೂತ ಸಮುದಾಯದ ಪ್ರಬಲ ನಾಯಕ ಅಶೋಕ್ ಗೆಹ್ಲೋಟ್ ಅವರನ್ನು ನೆಚ್ಚಿಕೊಂಡಿದ್ದರೆ, ಸರಿಯಾಗಿ ತಿರುಗೇಟು ನೀಡಿರುವ ಬಿಜೆಪಿ ತಾನೂ ಕೂಡ ರಜಪೂತ ಸಮುದಾಯಕ್ಕೆ ಮಣೆ ಹಾಕಿದೆ.
ಏಪ್ರಿಲ್ 18ರಂದು ಇಲ್ಲಿ ಉಪಚುನಾವಣೆಗಳನ್ನು ಸೋತ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಅಶೋಕ್ ಪರ್ನಾಮಿ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಅಮಿತ್ ಶಾ ಕೇಂದ್ರ ಸಚಿವ ಗಜೇಂದ್ರ ಶೇಖಾವತ್ ಅವರನ್ನು ತರಲು ಹೊರಟಿದ್ದರು. ಆದರೆ ಮುಖ್ಯಮಂತ್ರಿ ವಸುಂಧರಾ ರಾಜೇ ರಾಜ್ಯ ಸಚಿವ ಶ್ರೀಚಂದ್ ಕೃಪಲಾನಿ ಬಗ್ಗೆ ಒಲವು ಹೊಂದಿದ್ದರು.
ಇವರಿಬ್ಬರ ಶೀತಲ ಸಮರದಿಂದಾಗಿ ರಾಜ್ಯಾಧ್ಯಕ್ಷರ ಆಯ್ಕೆ ಕಗ್ಗಂಟಾಗಿತ್ತು. ಇದೀಗ ಜಾಣ ನಡೆ ಇಟ್ಟಿರುವ ಬಿಜೆಪಿ ಇಬ್ಬರನ್ನೂ ಬಿಟ್ಟು ದೊಡ್ಡ ಸಂಖ್ಯೆಯಲ್ಲಿರುವ ರಜಪೂತ ಮತಗಳ ಮೇಲೆ ಕಣ್ಣಿಟ್ಟು ಮದನ್ ಲಾಲ್ ಸೈನಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕರೆ ತಂದಿದೆ.
ಈ ಹಿಂದೆ ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥರಾಗಿರುವ ಸಚಿನ್ ಪೈಲಟ್ ರಜಪೂತ ಮತ್ತು ಗುಜ್ಜರ್ ಮತಗಳನ್ನು ಒಟ್ಟುಗೂಡಿಸಲು ಯೋಜನೆ ರೂಪಿಸಿದ್ದರು. ರಜಪೂತರಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನೂ ನಿರಂತರವಾಗಿ ಸಂಘಟಿಸುತ್ತಾ ಬಂದಿದ್ದರು. ಇನ್ನು ಕೈ ಬಿಟ್ಟರೆ ರಜಪೂತರು ಬಿಜೆಪಿಯಿಂದ ದೂರ ಸರಿಯುತ್ತಾರೆ ಎಂದರಿತ ಅಮಿತ್ ಶಾ ಅದೇ ಸಮುದಾಯದವರಿಗೆ ಮನೆ ಹಾಕಿದ್ದಾರೆ.
ಅಮಿತ್ ಶಾ ಅವರ ಈ ತಂತ್ರ ಫಲಿಸಲಿದೆಯಾ ಎಂಬುದಕ್ಕೆ ಚುನಾವಣೆಯ ಫಲಿತಾಂಶವೇ ಉತ್ತರ ನೀಡಲಿದೆ. ಅದಕ್ಕಾಗಿ ಡಿಸೆಂಬರ್ ವರೆಗೆ ಕಾಯಲೇಬೇಕು.