ಕೊರೊನಾ ಸೋಂಕು:20 ಸಾವಿರ ಭಾರತೀಯರ ತಪಾಸಣೆ, 80 ಮಂದಿ ಮೇಲೆ ನಿಗಾ
ನವದೆಹಲಿ, ಜನವರಿ 25: ಚೀನಾದಲ್ಲಿ ಆತಂಕ ಮೂಡಿಸಿರುವ ಕೊರೊನಾ ಸೋಂಕು ಭಾರತದಲ್ಲಿ ಹರಡದಂತೆ ಮುನ್ನೆಚ್ಚರಿಕೆ ವಹಿಸಿರುವ ಸರ್ಕಾರ ಸುಮಾರು 20 ಸಾವಿರ ಪ್ರಯಾಣಿಕರ ತಪಾಸಣೆ ನಡೆಸಿದೆ.
ಇದಲ್ಲದೆ ಚೀನಾದಿಂದ ಭಾರತಕ್ಕೆ ವಾಪಸಾಗಿರುವ 80 ಪ್ರಯಾಣಿಕರ ಮೇಲೂ ತೀವ್ರ ನಿಗಾ ಇಡಲಾಗಿದೆ. ಇವರಲ್ಲಿ 11 ಜನರನ್ನು ಆಸ್ಪತ್ರೆಗೆ ದಾಖಲಿಸಿ ಅವರ ಆರೋಗ್ಯ ಸ್ಥಿತಿಯನ್ನು ವೈದ್ಯ ತಂಡ ಗಮನಿಸುತ್ತಿದೆ.
ಕೊಚ್ಚಿ, ಹೈದರಾಬಾದ್ ಹಾಗೂ ಮುಂಬೈ ಆಸ್ಪತ್ರೆಗಳಲ್ಲಿ 11 ಜನರನ್ನು ದಾಖಲಿಸಲಾಗಿದ್ದು, ಇವರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ.
ಈ 11 ಮಂದಿ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ವಹಿಸಲಾಗಿದೆ. ಇನ್ನುಳಿದಂತೆ ಕೇರಳದಲ್ಲಿನ 71 ಜನರ ಮೇಲೆ ಅವರ ನಿವಾಸದಲ್ಲಿಯೇ ವೈದ್ಯರ ತಂಡ ನಿಗಾವಹಿಸಿದೆ.
ನೇಪಾಳದಲ್ಲಿ ಕೊರೋನಾ ವೈರಸ್ ಪತ್ತೆ, ಭಾರತದಲ್ಲಿ ಕಟ್ಟೆಚ್ಚರ
ಚೀನಾದಲ್ಲಿ ಮಾರಣಾಂತಿಕ ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಜನವರಿ 24ರವರೆಗೆ ಒಟ್ಟು 96 ವಿಮಾನಗಳಲ್ಲಿನ 20844 ಪ್ರಯಾಣಿಕರನ್ನು ಪರಿಶೀಲಿಸಲಾಗಿದೆ.
ಇದಕ್ಕಾಗಿ ಬೆಂಗಳೂರು, ದೆಹಲಿ, ಮುಂಬೈ, ಕೊಲ್ಕತ್ತ , ಚೆನ್ನೈ, ಹೈದರಾಬಾದ್ ಹಾಗೂ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಇಲ್ಲಿಯವರೆಗೆ ಯಾವೊಬ್ಬ ಸೋಂಕಿತ ವ್ಯಕ್ತಿ ಪತ್ತೆಯಾಗಿಲ್ಲ. ಆದಾಗ್ಯೂ ಮುಂಬೈನ ಕಸ್ತೂರಬಾ ಆಸ್ಪತ್ರೆಯೊಂದರಲ್ಲಿ ಅದಕ್ಕಾಗಿಯೇ ಪ್ರತ್ಯೇಕ ವಾರ್ಡ್ ಒಂದನ್ನು ತೆರೆದು ಕಾಯ್ದಿರಿಸಲಾಗಿದೆ.
ಈ ಬಗ್ಗೆ ಕೇರಳ ಆರೋಗ್ಯ ಸಚಿವರು ಮಾತನಾಡಿದ್ದು, ತಿರುವನಂತಪುರಂ, ಕೊಚ್ಚಿ, ತ್ರಿಶೂರ್, ಕೊಳಿಕ್ಕೊಡ್, ಪಟ್ಟಣಂತಿಟ್ಟ, ಜಿಲ್ಲಾ ಆಸ್ಪತ್ರೆಗಳಲ್ಲಿ ಏಳು ಶಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಚೀನಾದಿಂದ ವಾಪಸಾಗಿರುವ ಇವರು ಕೆಮ್ಮು, ಜ್ವರ, ಶೀತದಿಂದ ಬಳಲುತ್ತಿದ್ದಾರೆ.
ಇದಲ್ಲದೆ ಚೀನಾದಿಂದ ವಾಪಸಾಗಿರುವವರು ಮುಂದಿನ 28 ದಿನಗಳ ಕಾಲ ಹೊರಬರಕೂಡದು ಎಂದು ನಿರ್ದೇಶನನೀಡಲಾಗಿದೆ.