ಮೋದಿಯ ಬುಲೆಟ್ ಟ್ರೇನ್ಗೆ ಕೆಂಪು ಬಾವುಟ ತೋರಿಸಿದ ರೈತರು
ನವದೆಹಲಿ, ಸೆಪ್ಟೆಂಬರ್ 20: ಕೇಂದ್ರ ಬಿಜೆಪಿ ಸರ್ಕಾರದ ಬಹು ನಿರೀಕ್ಷಿತ ಬುಲೆಟ್ ಟ್ರೇನ್ಗೆ ರೈತರು ಅಡ್ಡಗಾಲು ಹಾಕಿದ್ದಾರೆ. ಸಾವಿರಕ್ಕೂ ಹೆಚ್ಚು ರೈತರು ಬುಲೆಟ್ ಟ್ರೈನ್ ಯೋಜನೆ ವಿರುದ್ಧ ಗುಜರಾತ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ಉದ್ದೇಶಿತ ಬುಲೆಟ್ ಟ್ರೇನ್ ಯೋಜನೆಗೆ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯದ 1400 ಹೆಕ್ಟೇರ್ ಭೂಮಿ ಅವಶ್ಯಕತೆ ಇದ್ದು, ಇದರಲ್ಲಿ 1200 ಹೆಕ್ಟೇರ್ ಜಮೀನು ಖಾಸಗಿಯದ್ದೇ ಆಗಿದೆ. ಸುಮಾರು 6000 ರೈತರು ಯೋಜನೆಗಾಗಿ ಭೂಮಿ ಬಿಟ್ಟುಕೊಡಬೇಕಾಗಿದೆ. ಇದಕ್ಕೆ ರೈತರು ತಕರಾರು ತೆಗೆದಿದ್ದಾರೆ.
ಬುಲೆಟ್ ರೈಲು ಯಾಕೆ ಬೇಕು? ರೈಲ್ವೆ ಸಚಿವರ ಉತ್ತರ
ಬುಲೆಟ್ ರೈಲು ಯೋಜನೆಗೆ ಭೂಮಿ ನೀಡಲು ಒಪ್ಪದ ಸಾವಿರಕ್ಕೂ ಹೆಚ್ಚು ರೈತರು ಗುಜರಾತ್ ಹೈಕೋರ್ಟ್ಗೆ ಅಪೀಲು ಸಲ್ಲಿಸಿದ್ದು, ಹೈಕೋರ್ಟ್ ಈಗಾಗಲೇ ವಿಚಾರಣೆ ಮಾಡಲು ಒಪ್ಪಿಗೆ ಸೂಚಿಸಿದೆ. ತಮ್ಮ ಆಸರೆಯ ಭೂಮಿ ನುಂಗುವ ಬುಲೆಟ್ ರೈಲು ಯೋಜನೆಗೆ ತಡೆ ನೀಡಬೇಕು ಎಂಬುದು ರೈತರ ಆಗ್ರಹ.
1000 ಕ್ಕೂ ಹೆಚ್ಚು ರೈತರಿಗೆ ಆಕ್ಷೇಪ
ಪ್ರಸ್ತುತ ಸೂರತ್ನ ಐದು ಜನ ರೈತರು ಹಾಕಿರುವ ಪಿಟಿಶನ್ ಅನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 1000 ಕ್ಕೂ ಹೆಚ್ಚು ರೈತರು ಬುಲೆಟ್ ರೈಲಿನ ಯೋಜನೆಗೆ ಭೂಮಿ ನೀಡುವುದಿಲ್ಲ ಎಂದು ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಇದು ಕೇಂದ್ರ ಹಾಗೂ ಭೂಮಿ ಒತ್ತುವರಿ ಮಾಡಿಕೊಡಬೇಕಿದ್ದ ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿದೆ.
ನಿಯಮ ಗಾಳಿಗೆ ತೂರಿದೆ ಗುಜರಾತ್ ಬಿಜೆಪಿ ಸರ್ಕಾರ
ಗುಜರಾತ್ ರಾಜ್ಯ ಬಿಜೆಪಿ ಸರ್ಕಾರವು ನಿಯಮಾವಳಿಗಳನ್ನು ಗಾಳಿಗೆ ತೂರಿ ಜಮೀನು ವಶಪಡಿಸಿಕೊಳ್ಳುತ್ತಿದೆ. ಅದು ಜೆಐಸಿಎ (ಜಪಾನ್ ಇಂಟರ್ನ್ಯಾಷನಲ್ ಕೋಪರೇಶನ್ ಏಜನ್ಸಿ) ನಿಯಮಾವಳಿಯಂತೆ ಭೂಮಿ ವಶಕ್ಕೆ ಮಾಡಿಕೊಳ್ಳುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಬುಲೆಟ್ ರೈಲು ಟೀಕಿಸಿದವರಿಗೆ ಮೋದಿ ಕೊಟ್ಟ ಉತ್ತರ
ಭೂ ಒತ್ತುವರಿ ನಿಯಮಗಳನ್ನು ತಿದ್ದಿರುವ ಆರೋಪ
ರೈತರು ಪ್ರಮುಖವಾಗಿ ಮೂರು ವಿಷಯಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಭೂಮಿ ಕಳೆದುಕೊಳ್ಳುವ ರೈತರ ಜೀವನದ ಮೇಲೆ ಆಗುವ ಪರಿಣಾಮದ ಲೆಕ್ಕಾಚಾರವನ್ನು ನಿರ್ಲಕ್ಷಿಸಲಾಗಿದೆ. ಭೂಮಿ ಒತ್ತುವರಿ ನಿಯಮಗಳನ್ನು ಅನುಕೂಲಕ್ಕೆ ತಕ್ಕಂತೆ ತಿದ್ದಲಾಗಿದೆ, ಕಡಿಮೆ ಪರಿಹಾರ ಮೊತ್ತ ನೀಡಿ ರೈತರಿಂದ ಭೂಮಿ ವಶಪಡಿಸಿಕೊಳ್ಳಲಾಗುತ್ತಿದೆ.
ಮರಿಣಾಮದ ಪರಿಶೀಲನೆಗೆ ಸಮಿತಿಯನ್ನೇ ಮಾಡಿಲ್ಲ
ಜೆಐಸಿಎಯು ಪರಿಣಾಮದ ಅಂದಾಜಿಗೆ ಕಮಿಟಿ ಮಾಡಲು ಸೂಚಿಸಿತ್ತು. ಆದರೆ ಸರ್ಕಾರವು ಆ ರೀತಿಯ ಯಾವುದೇ ಸಮಿತಿಯನ್ನೇ ರಚಿಸಿಲ್ಲ ಎಂದು ಹೇಳಿದ್ದಾರೆ. ಜೆಐಸಿಎಯು ಮತ್ತೊಮ್ಮೆ ಯೋಜನೆಯಿಂದ ಇಲ್ಲಿ ಬದುಕುತ್ತಿರುವ ರೈತರ ಜವನದ ಮೇಲೆ ಆಗುವ ಪರಿಣಾಮದ ಬಗ್ಗೆ ವರದಿಯನ್ನು ತಯಾರು ಮಾಡಬೇಕು ಎಂದು ರೈತರು ಪತ್ರ ಬರೆದಿದ್ದಾರೆ.
ಬುಲೆಟ್ ಟ್ರೈನ್ ಯೋಜನೆ: ತಿಳಿಯಬೇಕಾದ 10 ಸಂಗತಿ
ನಿಯಮಾವಳಿಗಳ ಬದಲಾವಣೆಗೆ ವಿರೋಧ
ಸರ್ಕಾರಿ ಯೋಜನೆಗಳಿಗೆ ಭೂಮಿ ವಶಪಡಿಸಿಕೊಳ್ಳುವ ನಿಯಮಾವಳಿಗಳನ್ನು ಬದಲಾಯಿಸಿರುವುದಕ್ಕೂ ರೈತರೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯೋಜನೆಗೆ ಭೂಮಿ ವಶಪಡಿಸಿಕೊಳ್ಳುವ ಕಾರ್ಯದಲ್ಲಿ ಕೇಂದ್ರ ಮಧ್ಯ ಪ್ರವೇಶಿಸಬೇಕು. ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಭೂಮಿ ಒತ್ತುವರಿ ಆಗಬೇಕು ಎಂಬುದು ರೈತರ ಆಗ್ರಹ.
ಬುಲೆಟ್ ಟ್ರೈನ್ ಯೋಜನೆಯ ಮಾಹಿತಿ
ಬುಲೆಟ್ ಟ್ರೈನ್ ಯೋಜನೆಗೆ 2017ರಲ್ಲಿ ಜಪಾನ್ ಅಧ್ಯಕ್ಷ ಶಿಂಜೋ ಅಬೆ ಹಾಗೂ ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಿದ್ದರು. 1.08 ಕೋಟಿ ಯ ಯೋಜನೆ ಇದಾಗಿದ್ದು, ಗುಜರಾತ್ನ ಅಹ್ಮದಾಬಾದ್ ನಿಂದ ಮುಂಬೈಗೆ ಬುಲೆಟ್ ಟ್ರೈನು ಸಂಪರ್ಕ ನೀಡಲಾಗುತ್ತದೆ. ಯೋಜನೆಗೆ ತಗುಲುವ ವೆಚ್ಚದ ಶೇ 80 ರಷ್ಟು ಹಣವನ್ನು ಜಪಾನ್ ಸರ್ಕಾರವು ದೀರ್ಘಾವದಿ ಸಾಲದ ರೂಪದಲ್ಲಿ ನೀಡುತ್ತಿದೆ. ಜೊತೆಗೆ ತಂತ್ರಜ್ಞಾನದ ನೆರವನ್ನೂ ನೀಡುತ್ತಿದೆ. 2022-2023 ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.