ಓಬಿಸಿಗೆ ಇನ್ನಷ್ಟು ಮೀಸಲಾತಿ: ಗೃಹ ಸಚಿವ ಅಮಿತ್ ಶಾ ಭರವಸೆ
ರಾಂಚಿ, ನವೆಂಬರ್ 29: ಜಾರ್ಖಂಡ್ನ ಮೊದಲ ಹಂತದ ವಿಧಾನಸಭೆ ಚುನಾವಣೆಯ ಪ್ರಚಾರ ಗುರುವಾರ ಅಂತ್ಯಗೊಂಡಿದ್ದು, ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ವಿರುದ್ಧ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದರು.
ಗುರುವಾರ ಗರ್ವಾದಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಪ್ರತ್ಯೇಕ ಜಾರ್ಖಂಡ್ ರಾಜ್ಯ ರಚನೆಯ ವಿಚಾರದಲ್ಲಿ ಗದ್ದಲಗಳನ್ನು ಸೃಷ್ಟಿಸಿದ್ದೇ ಕಾಂಗ್ರೆಸ್ ಎಂದು ಆರೋಪಿಸಿದರು. ಪ್ರತ್ಯೇಕ ಜಾರ್ಖಂಡ್ ರಚನೆ ಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ, ನರೇಂದ್ರ ಮೋದಿ ಅದನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಮತದಾರರಿಗೆ ನೆನಪಿಸುತ್ತಿರುವುದಾಗಿ ಹೇಳಿದರು.
ಮಹಾರಾಷ್ಟ್ರ ಮುಖಭಂಗ: ರಾಜ್ಯ ಬಿಜೆಪಿಗೆ ಅಮಿತ್ ಶಾ ಖಡಕ್ ಸೂಚನೆ
ಜಾರ್ಖಂಡ್ ವಿಧಾನಸಭೆಯ ಚುನಾವಣಾ ಪ್ರಚಾರ ಸಭೆಗಳಲ್ಲಿ ಅಮಿತ್ ಶಾ ಈ ವಾರದಲ್ಲಿ ಭಾಗವಹಿಸಿರುವುದು ಇದು ಎರಡನೆಯ ಬಾರಿ. ಈ ವೇಳೆ ಅವರು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎನ್ನುವ ಮೂಲಕ ಓಬಿಸಿ ಮತದಾರರ ಮನಸು ಬಿಜೆಪಿಯತ್ತ ಇರಬೇಕು ಎಂದು ಸಲಹೆ ನೀಡಿದರು.
ಪ್ರತ್ಯೇಕ ರಾಜ್ಯದ ನಿಲುವು ಹೇಳಿ
'ಜಾರ್ಖಂಡ್ಅನ್ನು ಪ್ರತ್ಯೇಕ ರಾಜ್ಯವನ್ನಾಗಿ ರಚಿಸುವ ಮೂಲಕ ಅದನ್ನು ಉನ್ನತೀಕರಿಸಬೇಕೆಂದು ಇಲ್ಲಿನ ಯುವಜನರು ಒತ್ತಾಯಿಸುತ್ತಿದ್ದಾಗ ಅದಕ್ಕೆ ಕಾಂಗ್ರೆಸ್ನ ನಿಲುವು ಏನಾಗಿತ್ತು ಎಂಬುದನ್ನು ಸೋರೆನ್ ಬಾಬು (ಜೆಎಂಎಂನ ಕಾರ್ಯಾಧ್ಯಕ್ಷ) ವಿವರಿಸುವಂತೆ ಕೇಳುತ್ತೇನೆ' ಎಂದು ಸವಾಲು ಹಾಕಿದರು.
ಓಬಿಸಿಗೆ ಹೆಚ್ಚಿನ ಮೀಸಲಾತಿ
'ಜಾರ್ಖಂಡ್ನಲ್ಲಿ ಬಿಜೆಪಿಗೆ ಅಧಿಕಾರಕ್ಕೆ ಬಂದರೆ ಇತರೆ ಹಿಂದುಳಿದ ವರ್ಗದವರಿಗೆ ಇನ್ನಷ್ಟು ಮೀಸಲಾತಿಗಳನ್ನು ನೀಡಲಾಗುವುದು. ಇದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗುವುದು. ಓಬಿಸಿಗಳ ಮೀಸಲಾತಿ ಏರಿಕೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಪ್ರಸ್ತುತ ನೀಡಲಾಗುತ್ತಿರುವ ಮೀಸಲಾತಿಯ ಮೇಲೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ' ಎಂದು ತಿಳಿಸಿದರು.
ಯಾರಿಗೆಲ್ಲ ಸಿಗಲಿದೆ ಎಸ್ ಪಿಜಿ ಭದ್ರತೆ: ಸ್ಪಷ್ಟಪಡಿಸಿದ ಅಮಿತ್ ಶಾ
ಅಯೋಧ್ಯಾ ಪ್ರಕರಣ-ಕಾಂಗ್ರೆಸ್ ಕಾರಣ
ಆಯೋಧ್ಯಾ ಪ್ರಕರಣವನ್ನು ನ್ಯಾಯಾಲಯದಲ್ಲಿ ಎಳೆದಾಡುವಂತೆ ಮಾಡಿದ್ದು ಕಾಂಗ್ರೆಸ್ ಎಂದು ದೂಷಿಸಿದರು. ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣದ ಮಾರ್ಗಕ್ಕೆ ಇದ್ದ ಅಡ್ಡಿಯನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದೆ ಎಂದು ಅಯೋಧ್ಯಾ ವಿವಾದವನ್ನು ನೆನಪಿಸಿಕೊಂಡರು.
'ನಕ್ಸಲಿಸಂಅನ್ನು ಹೂತು ಹಾಕಿದ್ದಾರೆ'
ಜಾರ್ಖಂಡ್ನಲ್ಲಿ ನಕ್ಸಲರ ಹಾವಳಿಯನ್ನು ನಿಯಂತ್ರಿಸುವಲ್ಲಿ ರಘುಬರ್ ದಾಸ್ ಸರ್ಕಾರ ಪರಿಣಾಮಕಾರಿ ಕೆಲಸ ಮಾಡಿದೆ ಎಂದು ಶ್ಲಾಘಿಸಿದ ಅವರು, ಬಿಜೆಪಿ ಸರ್ಕಾರವು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ, ಮುಖ್ಯವಾಗಿ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣಕ್ಕೆ ಹೆಚ್ಚಿನ ಗಮನ ಹರಿಸಿದೆ ಎಂದರು. ರಘುಬರ್ ದಾಸ್ ಸರ್ಕಾರವು ರಾಜ್ಯದಲ್ಲಿನ ನಕ್ಸಲಿಸಂ ಅನ್ನು ಭೂಮಿಯ 20 ಅಡಿ ಆಳದವರೆಗೆ ಹೂತುಹಾಕಿದೆ ಎಂದು ಹೇಳಿದರು.