ಮೋದಿ ಜನಪ್ರಿಯತೆ ಹೆಚ್ಚಿದಷ್ಟೂ ಗುಂಪು ಹತ್ಯೆ ಹೆಚ್ಚಳ: ಮೇಘ್ವಾಲ್ ವಿವಾದ
ನವದೆಹಲಿ, ಜುಲೈ 21: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚಿದಷ್ಟೂ ಗುಂಪು ಹತ್ಯೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಹೇಳಿದ್ದಾರೆ.
ಸುಳ್ಳು ಸುದ್ದಿಗಳನ್ನು ನಂಬಿ ಸಾರ್ವಜನಿಕರು ಅಮಾಯಕರನ್ನು ಹೊಡೆದು ಸಾಯಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿತ್ತು.
ಆದರೆ, ಅದರ ಬೆನ್ನಲ್ಲೇ ರಾಜಸ್ಥಾನದ ಅಲ್ವಾರ್ನಲ್ಲಿ ಶುಕ್ರವಾರ ರಾತ್ರಿ ಮತ್ತೊಂದು ಗುಂಪು ಹತ್ಯೆ ಪ್ರಕರಣ ನಡೆದಿದೆ.
ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂದು ಆರೋಪಿಸಿ 28 ವರ್ಷದ ಯುವಕನನ್ನು ಸಾರ್ವಜನಿಕರು ಅಮಾನವೀಯವಾಗಿ ಥಳಿಸಿ ಕೊಂದಿದ್ದಾರೆ.
ಅಮಾಯಕರ ಹತ್ಯೆ: ಕಾಂಗ್ರೆಸ್ನತ್ತ ಪರೋಕ್ಷ ಬೆಟ್ಟು ಮಾಡಿದ ರಾಜನಾಥ್
ಈ ಘಟನೆಗೆ ಪ್ರತಿಕ್ರಿಯಿಸಿರುವ ಮೇಘ್ವಾಲ್, ಅಲ್ವಾರ್ನಲ್ಲಿ ನಡೆದ ಘಟನೆಯಂತಹ ಪ್ರಕರಣಗಳು ಪ್ರಧಾನಿ ಮೋದಿ ಅವರು ಜಾರಿ ಮಾಡುತ್ತಿರುವ ನೀತಿಗಳು ಹಾಗೂ ಕಾರ್ಯಕ್ರಮಗಳಿಗೆ ನೀಡಲಾಗುತ್ತಿರುವ ಪ್ರತಿಕ್ರಿಯೆಗಳು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
|
ಚುನಾವಣೆಯ ನಾಟಕಗಳು
ಮೋದಿ ಅವರು ಜನಪ್ರಿಯತೆ ಹೆಚ್ಚಿದಷ್ಟೂ ಇಂತಹ ಘಟನೆಗಳು ಇನ್ನಷ್ಟು ನಡೆಯುತ್ತವೆ. ಇವೆಲ್ಲವೂ ಚುನಾವಣೆಗೆ ಸಂಬಂಧಿಸಿದ ಕೃತ್ಯಗಳಾಗಿವೆ ಎಂದು ಅವರು ಹೇಳಿದ್ದಾರೆ.
'ಬಿಹಾರ ಚುನಾವಣೆ ಸಂದರ್ಭದಲ್ಲಿ ಅವಾರ್ಡ್ ವಾಪ್ಸಿ' ನಡೆಯಿತು. ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಗುಂಪು ಹತ್ಯೆ. 2019ರ ಚುನಾವಣೆ ವೇಳೆ ಮತ್ತೊಂದು ಯಾವುದಾದರೂ ಬರಲಿದೆ' ಎಂದಿದ್ದಾರೆ.
|
ಸಿಖ್ ಹತ್ಯಾಕಾಂಡ ಅತಿ ದೊಡ್ಡದು
ಮಾಜಿ ಐಎಎಸ್ ಅಧಿಕಾರಿಯೂ ಆಗಿರುವ ಮೇಘ್ವಾಲ್, ಇಂತಹ ಗುಂಪು ಹತ್ಯೆ ಘಟನೆಗಳನ್ನು ಖಂಡಿಸಬೇಕು. ಅಲ್ವರ್ ಘಟನೆಯೇ ಮೊದಲಲ್ಲ. ನೀವು ಇತಿಹಾಸದಿಂದಲೇ ಇವುಗಳನ್ನು ನೋಡಬೇಕು. ಇದೆಲ್ಲ ಏಕೆ ನಡೆದಿವೆ? ಯಾರು ಇವುಗಳನ್ನು ತಡೆಯಬೇಕು? 80ರ ದಶಕದಲ್ಲಿ ನಡೆದ ಸಿಖ್ ಸಂಬಂಧಿ ಹಿಂಸಾಚಾರ ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಗುಂಪು ಹತ್ಯೆಯಾಗಿದೆ ಎಂದು ಹೇಳಿದ್ದಾರೆ.
ಮೇಘ್ವಾಲ್ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಗುಂಪು ಹತ್ಯೆಯಂತಹ ಸೂಕ್ಷ್ಮ ಸಂಗತಿ ಕುರಿತು ಅವಿವೇಕದ ಹೇಳಿಕೆ ನೀಡಲಾಗಿದೆ ಎಂದು ಖಂಡಿಸಲಾಗಿದೆ.
|
ಜನಪ್ರಿಯತೆಯಿಂದ ಜನರಿಗೆ ಸಂಕಷ್ಟ
ಮಿಸ್ಟರ್ ಮೇಘ್ವಾಲ್ ಅವರೇ, ಮೋದಿ ಅವರ ಜನಪ್ರಿಯತೆ ಹೆಚ್ಚಿದಷ್ಟೂ, ಇನ್ನಷ್ಟು ಜನರು ಸಂಕಷ್ಟಕ್ಕೆ ಒಳಗಾಗಬಹುದು ಎನ್ನುವುದು ನಿಮ್ಮ ಮಾತಿನ ಅರ್ಥವೇ ಎಂದು ಪಿಸಿ ಕುಲಕರ್ಣಿ ಎಂಬುವವರು ಪ್ರಶ್ನಿಸಿದ್ದಾರೆ.
|
ನಾಯಕನ ಅನುಮತಿಯಿಲ್ಲದೆ ಸಾಧ್ಯವೇ?
ಈ ಹತ್ಯೆಗಳು ಅವರ ನಾಯಕನ ಅನುಮತಿ ಇಲ್ಲದೆ ನಡೆಯಲು ಸಾಧ್ಯವೇ ಎಂದು ಅನಿಸುತ್ತಿದೆಯೇ? ಇದು ನಿರುದ್ಯೋಗಿ ಯುವಜನರನ್ನು ಬಿಜಿಯಾಗಿಡಲು ಅವರು ಮಾಡುತ್ತಿರುವ ತಂತ್ರ. ಕೆಲವರು ನಾಗರಿಕರ ಹತ್ಯೆಯಲ್ಲಿ ತೊಡಗಿಕೊಂಡಿದ್ದರೆ, ಇನ್ನು ಕೆಲವರು ಆ ಹತ್ಯೆಗಳನ್ನು ವಿರೋಧಿಸುವುದರಲ್ಲಿ ಮುಳುಗಿದ್ದಾರೆ. ಈ ಮೇಘ್ವಾಲ್ ತಮ್ಮ ಮಾಲೀಕನನ್ನು ಒಳ್ಳೆಯ ನಾಯಿಯಂತೆ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಪಕೋಡಾ ಮ್ಯಾಬ್ ಎಂಬ ನಕಲಿ ಖಾತೆಯೊಂದರಿಂದ ಟ್ವೀಟ್ ಮಾಡಲಾಗಿದೆ.