ಶಿಲ್ಲಾಂಗ್ ಕೊತ ಕೊತ; ಸೇನೆ, ಅರೆಸೇನಾ ಪಡೆ ಜಮಾವಣೆ
ಶಿಲ್ಲಾಂಗ್, ಜೂನ್ 4: ಮೇಘಾಲಯ ರಾಜಧಾನಿ ಶಿಲ್ಲಾಂಗ್ ನಲ್ಲಿ ಇಂದು ಸಂಜೆ ಮತ್ತೆ ಗಲಭೆ ಹತ್ತಿಕೊಂಡಿದ್ದು ಸೇನಾಪಡೆಯನ್ನು ಕರೆಸಿಕೊಳ್ಳಲಾಗಿದೆ. ಕಳೆದ ನಾಲ್ಕು ದಿನಗಳಿಂದ ರಾಜಧಾನಿಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಣ್ಣಗಾಗಿಸುವ ಪ್ರಯತ್ನ ನಡೆಯುತ್ತಿದ್ದು 1000 ಕ್ಕೂ ಅಧಿಕ ಅರೆಸೇನಾ ಪಡೆ, ಸೇನಾಪಡೆಗಳನ್ನು ಕರೆಸಿಕೊಳ್ಳಲಾಗಿದೆ.
ಇಲ್ಲಿನ ಖಾಸಿ ಬೆಟ್ಟ ಪ್ರದೇಶದಲ್ಲಿ ಪರಿಸ್ಥಿತಿ ಕೈ ಮೀರಿದ್ದು ವಾತಾವರಣವನ್ನು ತಹಬದಿಗೆ ತರಲು ಮೊಬೈಲ್ ಇಂಟರ್ನೆಟ್ ಮತ್ತು ಕಿರು ಸಂದೇಶ ಸೇವೆಯನ್ನೇ ರದ್ದು ಪಡಿಸಲಾಗಿದೆ.
ಗಲಭೆಗೆ ಮೂಲ
ಕಳೆದ ವಾರ ರಾಜಧಾನಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಇದೇ ಮುಂದೆ ರಾಜಧಾನಿಯಲ್ಲಿ ವಲಸೆ ಬಂದು ನೆಲೆ ನಿಂತ ಪಂಜಾಬಿಗರು ಮತ್ತು ಮೂಲ ಬುಡಕಟ್ಟು ನಿವಾಸಿಗಳ ನಡುವಿನ ಘರ್ಷಣೆಯಾಗಿ ಮಾರ್ಪಟ್ಟಿತ್ತು.
ಘರ್ಷಣೆ ತೀವ್ರವಾದ ಹಿನ್ನೆಲೆಯಲ್ಲಿ ಹಲವು ಭಾಗಗಳಲ್ಲಿ ಕರ್ಫ್ಯೂ ಹೇರಲಾಗಿತ್ತು. ಆದರೆ ಇಂದು ಸಂಜೆ ಗುಂಪೊಂದು ಕರ್ಫ್ಯೂ ಉಲ್ಲಂಘಿಸಿ ರಾಜ್ಯದ ಆಡಳಿತ ಕೇಂದ್ರದೊಳಕ್ಕೆ ನುಗ್ಗಲು ಯತ್ನಿಸಿದೆ. ಇವರನ್ನು ಪೊಲೀಸರು ಹಿಮ್ಮೆಟ್ಟಿಸಿದ್ದಾರೆ. ಆದರೆ ಪರಿಸ್ಥಿತಿಯ ಗಂಭೀರತೆ ಅರಿತು ಶಿಲ್ಲಾಂಗ್ ಗೆ ಸೇನೆಯನ್ನು ಕರೆಸಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಹೇಳುವುದೇನು
ಇನ್ನು ರಾಜಧಾನಿಯಲ್ಲಿ ನಡೆಯುತ್ತಿರುವ ಈ ಹಿಂಸಾಚಾರವನ್ನು ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ, ಇದೊಂದು ಪ್ರಾಯೋಜಿತ ಘಟನೆ ಎಂದಿದ್ದಾರೆ. ಘರ್ಷಣೆ ಉಂಟು ಮಾಡಲು ಹಣ, ಹೆಂಡ ಹಂಚಲಾಗುತ್ತಿದೆ ಎಂದು ಅವರು ದೂರಿದ್ದಾರೆ.
"ಇದೊಂದು ಭೂ ವಿವಾದ. ಎರಡೂ ಕಡೆಯವರು ಇದು ತಮ್ಮದು ಎನ್ನುತ್ತಿದ್ದಾರೆ. ಇದಕ್ಕೆ ಉತ್ತರ ಕಂಡುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ," ಎಂದಿದ್ದಾರೆ.
ಇನ್ನು ಶಿಲ್ಲಾಂಗ್ ನಲ್ಲಿರುವ ಸಿಖ್ಖ್ ಸಮುದಾಯಕ್ಕೆ ಎದುರಾಗಿರುವ ಭೀತಿಯ ಹಿನ್ನೆಲೆಯಲ್ಲಿ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಂದರ್ ಸಿಂಗ್ ಕ್ಯಾಬಿನೆಟ್ ಸಚಿವರ ನೇತೃತ್ವದ 4 ಜನರ ತಂಡವನ್ನು ಮೇಘಾಲಯಕ್ಕೆ ಕಳುಹಿಸಿದ್ದಾರೆ.
ಇಲ್ಲಿಯವರೆಗೆ ಪೊಲೀಸರು ಸೇರಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಕೋಟ್ಯಾಂತರ ರೂಪಾಯಿ ಆಸ್ತಿ ಪಾಸ್ತಿ ನಷ್ಟವಾಗಿದೆ.