ಕೊರೊನಾ ಸೋಂಕು: ಮೇ 15ರವರೆಗೆ ರಾಷ್ಟ್ರೀಯ ಸ್ಮಾರಕಗಳು ಹಾಗೂ ಮ್ಯೂಸಿಯಂಗಳು ಬಂದ್
ನವದೆಹಲಿ, ಏಪ್ರಿಲ್ 15: ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ಮಾರಕಗಳು ಹಾಗೂ ಮ್ಯೂಸಿಯಂಗಳನ್ನು ಮೇ 15ರವರೆಗೆ ಮುಚ್ಚುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಕೇಂದ್ರ ಸರ್ಕಾರದ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವರಾದ ಪ್ರಲ್ಹಾದ್ ಸಿಂಗ್ ಪಟೇಲ್ ಅವರು ತಿಳಿಸಿದ್ದಾರೆ. ಹಲವು ರಾಜ್ಯಗಳು ಕರ್ಪ್ಯೂ ಹಾಗೂ ಇನ್ನಿತರ ರಕ್ಷಣಾ ಕ್ರಮಗಳನ್ನು ತೆಗೆದುಕೊಂಡಿವೆ.ದೆಹಲಿ ಸರ್ಕಾರ ಈಗಾಗಲೇ 14 ಖಾಸಗಿ ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗಾಗಿ ಮೀಸಲಿಟ್ಟಿವೆ.
ಕೊರೊನಾ ಡಬಲ್: ಭಾರತದಲ್ಲಿ ಒಂದೇ ದಿನ 2 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು
ಈಗಾಗಲೇ ದೆಹಲಿ, ಬೆಂಗಳೂರು, ಹಾಗೂ ಮುಂಬೈನಲ್ಲಿ ಪ್ರಕರಣಗಳು ವ್ಯಾಪಕ ರೀತಿಯಲ್ಲಿ ವರದಿಯಾಗುತ್ತಿವೆ.ದೇಶದ 80 ಕ್ಕೂ ಅಧಿಕ ಕೊರೊನಾ ಪ್ರಕರಣಗಳು ಕೇವಲ 10 ರಾಜ್ಯಗಳಿಂದ ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು 15 ದಿನಗಳ ಕಾಲ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಇನ್ನು ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ ಘೋಷಿಸಲಾಗಿದ್ದು, ಜಿಮ್, ಶಾಪಿಂಗ್ ಮಾಲ್ , ಸ್ಪಾ ಸೇರಿದಂತೆ ಹೆಚ್ಚು ಮಂದಿ ಸೇರುವ ಪ್ರದೇಶಗಳನ್ನು ಮುಚ್ಚಲಾಗುತ್ತಿದೆ.
ದೇಶದಲ್ಲಿ ಒಂದೇ ದಿನ 2,00,739 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 1038 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 93,528 ಸೋಂಕಿತರು ಗುಣಮುಖರಾಗಿದ್ದಾರೆ.
ಗುರುವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,40,74,564ಕ್ಕೆ ಏರಿಕೆಯಾಗಿದೆ. ಇದುವರೆಗೂ 1,73,123 ಜನರು ಕೊವಿಡ್-19 ಸೋಂಕಿಗೆ ಬಲಿಯಾಗಿದ್ದರೆ, 1,24,29,564 ಸೋಂಕಿತರು ಗುಣಮುಖರಾಗಿದ್ದಾರೆ. 14,71,877 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.