ಮೇ 28ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ
ನವದೆಹಲಿ, ಮೇ 13: ರಾಜ್ಯಾದ್ಯಂತ ಮಳೆ ಆರ್ಭಟ ಆರಂಭವಾಗಿರುವ ನಡುವೆಯೇ ಈ ಸಾಲಿನ ಮುಂಗಾರು ಮೇ 28ರಂದೇ ಕೇರಳ ಪ್ರವೇಶಿಸುವ ಮುನ್ಸೂಚನೆ ದೊರೆತಿದೆ.
ಮೇ 20ರಂದು ಅಂಡಮಾನ್-ನಿಕೋಬಾರ್ ದ್ವೀಪ ಪ್ರವೇಶಿಸಲಿರುವ ಮಾನ್ಸೂನ್ ವಾಡಿಕೆಗಿಂತ 3 ದಿನ ಮೊದಲೇ ಕೇರಳ ಕರಾವಳಿ ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಮುನ್ಸೂಚನೆ ನೀಡಿದೆ. ಕೇರಳ ಪ್ರವೇಶಿಸಿದ ವಾರದೊಳಗೆ ಮುಂಗಾರು ಕರ್ನಾಟಕ ಪ್ರವೇಶಿಸಲಿದೆ.
ಉತ್ತರ ಭಾರತದಲ್ಲಿ ಮತ್ತೆ ಮಳೆ, ಗಾಳಿ ಅಬ್ಬರ ಸಾಧ್ಯತೆ
ಈಗಾಗಲೇ ಕರ್ನಾಟಕದ ಹಲವು ಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದ ಮಳೆಯ ಅಬ್ಬರವಿದೆ. ಇನ್ನೂ ಮೂರ್ನ್ಲಾಕು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರ ರಾತ್ರಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಧಾರವಾಡ, ಗದಗ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿತ್ತು. ಇದರಿಂದ ಶನಿವಾರವೂ ಮಳೆ ಮುಂದುವರಿದರೆ ಮತದಾನದ ಪ್ರಮಾಣ ಕಡಿಮೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಬೆಂಗಳೂರಿನಲ್ಲಿ ಕೆಲವೆಡೆ ಶನಿವಾರ ಮಳೆಯಾಗಿದೆ.
ವಾರದ ಆರಂಭದಲ್ಲೇ ಹವಾಮಾನ ಇಲಾಖೆ ತಮಿಳುನಾಡಿನಲ್ಲಿ ಉಂಟಾದ ಟ್ರಫ್ನಿಂದ ಕರ್ನಾಟಕದಲ್ಲಿ ಅದರಲ್ಲೂ ದಕ್ಷಿಣ ಒಳನಾಡಿನಲ್ಲಿ ಮೇ 14ರವರೆಗೆ ಮಳೆ ಸುರಿಯಲಿದೆ ಎಂದು ಎಚ್ಚರಿಕೆ ನೀಡಿದೆ.