ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಬಿರುಸು: ಮಹಾರಾಷ್ಟ್ರ ಕರಾವಳಿ, ಗೋವಾದಲ್ಲಿ ಭಾರಿ ಮಳೆ ಸಂಭವ

By ವಿಕಾಸ್
|
Google Oneindia Kannada News

ಬೆಂಗಳೂರು, ಜೂನ್ 9: ಮುಂಗಾರು ಮಾರುತಗಳು ಮಹಾರಾಷ್ಟ್ರವನ್ನು ಶುಕ್ರವಾರ ಪ್ರವೇಶಿಸಿದ್ದು, ಮುಂಬೈ ಮತ್ತು ಗೋವಾ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಶನಿವಾರ ಭಾರಿ ಮಳೆ ನಿರೀಕ್ಷಿಸಲಾಗಿದೆ.

ಕರ್ನಾಟಕದ ಕರಾವಳಿ, ಗೋವಾ ಮತ್ತು ದಕ್ಷಿಣ ಮಹಾರಾಷ್ಟ್ರದ ಕರಾವಳಿಗಳಲ್ಲಿ ಈಗಾಗಲೇ ಮಳೆ ತೀವ್ರತೆ ಹೆಚ್ಚಾಗಿದೆ.

ತುರ್ತು ಸನ್ನಿವೇಶಗಳನ್ನು ಎದುರಿಸಲು ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಧಿಕಾರಿಗಳಿಗೆ ಸನ್ನದ್ಧರಾಗಿರುವಂತೆ ಸೂಚನೆ ನೀಡಲಾಗಿದೆ.

ಮುಂಬೈ ಮಹಾನಗರಿಯಲ್ಲಿ ಅನಾಹುತಕಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಸಿಬ್ಬಂದಿಗೆ ವಾರಾಂತ್ಯದ ರಜೆಗಳನ್ನು ರದ್ದುಪಡಿಸಲಾಗಿದೆ.

Monsoon updates: Very Heavy rainfall likely in coastal Maharashtra, Goa today

ಭಾರತದ ಮೇಲೆ ಆವರಿಸಿರುವ ಮೋಡ. ಐಎಂಡಿ ಉಪಗ್ರಹ ಚಿತ್ರ

ನೈರುತ್ಯ ಮುಂಗಾರು ಮಾರುತಗಳು ಕೇಂದ್ರ ಅರಬ್ಬಿ ಸಮುದ್ರದ ಇನ್ನಷ್ಟು ಭಾಗಗಳು, ಗೋವಾ, ಕರ್ನಾಟಕ ಮತ್ತು ರಾಯಲ ಸೀಮೆಯ ಉಳಿದ ಭಾಗಗಳು, ದಕ್ಷಿಣ ಕೊಂಕಣದ ಕೆಲವು ಭಾಗಗಳು, ದಕ್ಷಿಣ ಮಧ್ಯ ಮಹಾರಾಷ್ಟ್ರ, ಸಂಪೂರ್ಣ ತೆಲಂಗಾಣ, ವಿದರ್ಭ, ದಕ್ಷಿಣ ಛತ್ತೀಸಗಡ ಮತ್ತು ಉತ್ತರ ಒಡಿಶಾ, ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಮತ್ತು ಉತ್ತರದ ಬಹುತೇಕ ಭಾಗಗಳಲ್ಲಿ ಇನ್ನಷ್ಟು ಪ್ರಬಲಗೊಂಡಿವೆ.

ಅರಬ್ಬಿ ಸಮುದ್ರದ ಹೆಚ್ಚಿನ ಭಾಗ, ಮಹಾರಾಷ್ಟ್ರದ ಉಳಿದ ಭಾಗ, ದಕ್ಷಿಣ ಗುಜರಾತ್‌ನ ಕೆಲವು ಪ್ರದೇಶಗಳು, ಮಧ್ಯಪ್ರದೇಶದ ದಕ್ಷಿಣ ಭಾಗ, ಛತ್ತೀಸಗಡ, ಒಡಿಶಾದ ಇನ್ನಷ್ಟು ಭಾಗಗಳು, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಕೆಲವು ಪ್ರದೇಶಗಳು, ಈಶಾನ್ಯ ರಾಜ್ಯಗಳು ಹಾಗೂ ಬಂಗಾಳ ಕೊಲ್ಲಿಯ ಉಳಿದ ಭಾಗಗಳಲ್ಲಿ ಮುಂದಿನ 48 ಗಂಟೆಯಲ್ಲಿ ನೈರುತ್ಯ ಮುಂಗಾರು ಪ್ರವೇಶಿಸಲು ಪೂರಕವಾದ ವಾತಾವರಣವಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನಲ್ಲಿ ಗುರುವಾರ ಪೂರ್ವ ಮುಂಗಾರು ಮಳೆಯ ತೀವ್ರತೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಮಳೆಯಿಂದಾಗಿ ರೈಲು ಸಂಚಾರಕ್ಕೆ ಅಡ್ಡಿಯಾಗಿತ್ತು.

ಮುಂಬೈನ ಉಪನಗರ ರೈಲ್ವೆ ಮಾರ್ಗದಲ್ಲಿ ಚಲಿಸುವ ರೈಲುಗಳ 20 ನಿಮಿಷಗಳಷ್ಟು ವಿಳಂಬವಾಗಿ ಸಂಚರಿಸಿದವು. ವಿಪರೀತ ಮಳೆಯಾಗುತ್ತಿದ್ದರಿಂದ ವಿವಿಧೆಡೆಗಳಿಂದ ಬಂದ ಅನೇಕ ವಿಮಾನಗಳನ್ನು ಮಾರ್ಗ ಬದಲಿಸಿ ಅಹಮದಾಬಾದ್‌ನ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.

ಜೂನ್ 8-10ರ ಅವಧಿಯಲ್ಲಿ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿಯಿಂದ ವಿಪರೀತ ಮಳೆಯಾಗಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.

Monsoon updates: Very Heavy rainfall likely in coastal Maharashtra, Goa today

ಏಷ್ಯಾ, ಯುರೋಪ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವಾತಾವರಣದ ಐಎಂಡಿ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರ

ಕೇಂದ್ರ ಮಹಾರಾಷ್ಟ್ರ ಮತ್ತು ಗೋವಾದ ಹಲವೆಡೆ ಮಳೆ ಧಾರಾಕಾರವಾಗಿ ಸುರಿಯುವ ಸಾಧ್ಯತೆ ಹೆಚ್ಚಿರುವುದರಿಂದ ಇಲ್ಲಿ ಅಪಾಯಕಾರಿ ಪರಿಸ್ಥಿತಿ ಉಂಟಾಗಬಹುದು.

ರತ್ನಗಿರಿ, ಸಿಂಧೂದುರ್ಗ, ಮುಂಬೈ, ಥಾಣೆ, ರಾಯಗಡ ಮತ್ತು ಪಾಲ್‌ಘರ್ ಜಿಲ್ಲೆಗಳಲ್ಲಿ ಶನಿವಾರ ವಿಪರೀತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಐಎಂಡಿ ವರದಿ ತಿಳಿಸಿದೆ.

ಮುಂಬೈ ಸೇರಿದಂತೆ ಕೊಂಕಣ ಪ್ರದೇಶದ ಸುತ್ತಮುತ್ತಲಿನ ಆರು ಜಿಲ್ಲೆಗಳಲ್ಲಿ ಜೂನ್ 10-11ರಂದು ಇದೇ ರೀತಿಯ ವಾತಾವರಣ ಮುಂದುವರಿಯಲಿದೆ.

ಮುಂಬೈನಲ್ಲಿರುವ ಜನರು ಮಳೆಯಿಂದ ತೊಂದರೆಯಲ್ಲಿ ಸಿಲುಕಿದ ತುರ್ತು ಸನ್ನಿವೇಶ ಎದುರಾದರೆ 1916 ಸಂಖ್ಯೆಗೆ ಮತ್ತು ಮುಂಬೈ ಹೊರಗಿನ ಜನರು 1077ಗೆ ಕರೆ ಮಾಡಬಹುದು.

ಹವಾಮಾನ ಇಲಾಖೆಯ ವರದಿ ಪ್ರಕಾರ ದೇಶದ ಕೇಂದ್ರ ಭಾಗದಲ್ಲಿ ಈ ಬಾರಿ ಸಾಮಾನ್ಯ ಮಳೆಯಾಗಲಿದೆ. ಆದರೆ, ದಕ್ಷಿಣದ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಪುದುಚೆರಿಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಅದು ತಿಳಿಸಿದೆ.

ಈಶಾನ್ಯ ಭಾಗದಲ್ಲಿಯೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ದೀರ್ಘಾವಧಿ ಸರಾಸರಿಯಲ್ಲಿ (ಎಲ್‌ಪಿಎ) ದೇಶದಲ್ಲಿ ಜುಲೈ ತಿಂಗಳಿನಲ್ಲಿ ಶೇ 101ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ ತಿಂಗಳಿನಲ್ಲಿ ಶೇ 9ರ ವ್ಯತ್ಯಾಸದಲ್ಲಿ ಶೇ 94ರಷ್ಟು ಎಲ್‌ಪಿಎ ನಿರೀಕ್ಷಿಸಲಾಗಿದೆ.

ಎಲ್‌ಪಿಎಯ ಶೇ 90-96ರವರೆಗಿನ ಮಳೆಯನ್ನು ಸಾಮಾನ್ಯಕ್ಕಿಂತ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಶೇ 96-104ರ ವರೆಗಿನ ಎಲ್‌ಪಿಎಯನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ.

ಶೇ 90ಕ್ಕಿಂತ ಕಡಿಮೆ ಮಳೆಯಾದರೆ ಅದನ್ನು ಎಲ್‌ಪಿಎಯಲ್ಲಿ ಮಳೆಯ ಕೊರತೆ ಎಂದು, ಶೇ 104-110ರ ನಡುವಣ ಮಳೆ ಪ್ರಮಾಣವನ್ನು ಸಾಮಾನ್ಯಕ್ಕಿಂತ ಅಧಿಕ ಹಾಗೂ ಶೇ 110ಕ್ಕಿಂತ ಹೆಚ್ಚಿನ ಮಳೆ ಪ್ರಮಾಣವನ್ನು ಅತ್ಯಧಿಕ ಮಳೆ ಎಂದು ಪರಿಗಣಿಸಲಾಗುತ್ತದೆ.

English summary
Monsoon updates: With monsoon already having entered Maharashtra yesterday (June 8), very heavy rainfall is expected today in coastal parts of the state, including Mumbai, and Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X