ಉತ್ತರ ಭಾರತದತ್ತ ಮುಖಮಾಡಿದ ಮುಂಗಾರು ಮಾರುತ
Recommended Video
ಹತ್ತುದಿನಗಳಿಂದ ದುರ್ಬಲಗೊಂಡಿದ್ದ ನೈಋತ್ಯ ಮುಂಗಾರಿನ ಮಾರುತಗಳು ಈಗ ಚುರುಕು ಪಡೆದಿದ್ದು, ಮಹಾರಾಷ್ಟ್ರ ಮತ್ತು ಭಾರತದ ಕೇಂದ್ರ ಭಾಗಗಳಲ್ಲಿ ಪ್ರಬಲವಾಗುತ್ತಿವೆ.
ಜೂನ್ 29 ರಿಂದ ಜುಲೈ 1ರ ಅವಧಿಯಲ್ಲಿ ದೆಹಲಿ ಸೇರಿದಂತೆ ಉತ್ತರ ಭಾರತದ ಹೆಚ್ಚಿನ ಭಾಗವನ್ನು ಮುಂಗಾರು ಮಾರುತಗಳು ಆವರಿಸಲಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಭಾರತ ಮತ್ತು ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ ಉಷ್ಣಾಂಶದಲ್ಲಿ ಏರಿಕೆ ಕಂಡುಬರುತ್ತಿದೆ. ಎರಡು ಅಥವಾ ಮೂರು ದಿನಗಳಲ್ಲಿ ಈ ಪ್ರದೇಶಗಳ ಜನರಿಗೆ ಬಿಸಿ ವಾತಾವರಣದಿಂದ ಮುಕ್ತಿ ದೊರಕುವ ನಿರೀಕ್ಷೆಯಿದೆ.
ಪೂರ್ವ ಮುಂಗಾರು ಮಳೆಯು ಮಂಗಳವಾರ ಅಥವಾ ಬುಧವಾರ ಉತ್ತರ ಭಾರತದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅದು ವ್ಯಾಪಕವಾಗಿ ಸುರಿಯಲಿದೆ.
ಮುಂಗಾರು ಮಧ್ಯಪ್ರದೇಶದ ದಕ್ಷಿಣ ಭಾಗವನ್ನು ಭಾನುವಾರ ಪ್ರವೇಶಿಸಿದ್ದು, ಮಹಾರಾಷ್ಟ್ರದ ಮಧ್ಯಭಾಗ ಮತ್ತು ಗುಜರಾತ್ಗಳತ್ತ ಮುನ್ನುಗ್ಗಿದೆ.
ನೈಋತ್ಯ ಮಾರುತಗಳು ಉತ್ತರ ಅರಬ್ಬಿ ಸಮುದ್ರ, ಗುಜರಾತ್ ರಾಜ್ಯಗಳ ಹೆಚ್ಚಿನ ಭಾಗ; ಮಹಾರಾಷ್ಟ್ರದ ಉಳಿದ ಭಾಗಗಳು; ಮಧ್ಯಪ್ರದೇಶ, ಛತ್ತೀಸಗಡದ ಇನ್ನಷ್ಟು ಭಾಗಗಳು; ಒಡಿಶಾ, ಪಶ್ಚಿಮ ಬಂಗಾಳದ ಉಳಿದ ಭಾಗಗಳು ಮತ್ತು ಜಾರ್ಖಂಡ್ ಹಾಗೂ ಬಿಹಾರದ ಮತ್ತಷ್ಟು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮುಂಗಾರು ಚುರುಕಾಗಲು ಅನುಕೂಲಕರವಾದ ವಾತಾವರಣವಿದೆ ಎಂದು ಹವಾಮಾನ ಇಲಾಖೆಯ ಇತ್ತೀಚಿನ ವರದಿ ತಿಳಿಸಿದೆ.
ವಾಡಿಕೆಗಿಂತ ಮೂರು ದಿನ ಮುನ್ನವೇ ಮೇ 29ರಂದು ದೇಶವನ್ನು ಪ್ರವೇಶಿಸಿದ್ದ ನೈಋತ್ಯ ಮುಂಗಾರು ಕೇರಳ, ಕರ್ನಾಟಕ, ಮಹಾರಾಷ್ಟ್ರಗಳ ಕರಾವಳಿ ಭಾಗಗಳು ಮತ್ತು ದಕ್ಷಿಣ ಗುಜರಾತ್ನಲ್ಲಿ ಅಬ್ಬರಿಸಿತ್ತು.
ಆದರೆ ಭಾನುವಾರದವರೆಗೂ ಒಟ್ಟಾರೆ ಮಾನ್ಸೂನ್ ಪ್ರಮಾಣ ಶೇ 10ರಷ್ಟು ಕಡಿಮೆ ಇದೆ.
ದೇಶದ ನಾಲ್ಕು ಹವಾಮಾನ ವಲಯಗಳ ಪೈಕಿ ದಕ್ಷಿಣ ಭಾಗದಲ್ಲಿ ಮಾತ್ರ ಶೇ 29ರಷ್ಟು ಹೆಚ್ಚುವರಿ ಮಳೆಯಾಗಿದೆ. ಈಶಾನ್ಯ ಭಾರತದ ಪೂರ್ವ ಭಾಗ ಮತ್ತು ವಾಯವ್ಯ ಭಾರತಗಳಲ್ಲಿ ಶೇ 29ರಷ್ಟು ಮಳೆ ಕೊರತೆಯುಂಟಾಗಿದೆ.
ದೇಶದ 36 ಉಪ ಹವಾಮಾನ ವಲಯಗಳ ಪೈಕಿ 24 ಉಪವಿಭಾಗಗಳಲ್ಲಿ ಕೊರತೆ ಮತ್ತು ಅತಿ ಕೊರತೆ ಉದ್ಭವಿಸಿದೆ. ಇದರ ಅರ್ಥ ದೇಶದ ಶೇ 25ಕ್ಕೂ ಕಡಿಮೆ ಭಾಗದಲ್ಲಿ ಸಾಮಾನ್ಯ ಮತ್ತು ಹೆಚ್ಚು ಮಳೆ ದಾಖಲಾಗಿದೆ.
ಹವಾಮಾನ ಇಲಾಖೆಯ ಪ್ರಕಾರ 2017ಕ್ಕಿಂತಲೂ ಉತ್ತಮ ಮುಂಗಾರು ಸುರಿಯಲಿದೆ. ದೇಶದಾದ್ಯಂತ ಜೂನ್ನಿಂದ ಸೆಪ್ಟೆಂಬರ್ ಅವಧಿವರೆಗೆ ಶೇ 96-104ರಷ್ಟು 'ಸಾಮಾನ್ಯ ಮಳೆ' ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೈಋತ್ಯ ಮುಂಗಾರು ಅವಧಿಗಿಂತ ಮೂರು ದಿನ ಮುನ್ನವೇ ಅಂದರೆ, ಮೇ 29ರಂದು ಕೇರಳವನ್ನು ಪ್ರವೇಶಿಸಿತ್ತು. ದೇಶದ ಪೂರ್ವ ಭಾಗಗಳಲ್ಲಿ ಚುರುಕಾಗಿದ್ದ ಮುಂಗಾರು ಕಳೆದ ಮಂಗಳವಾರದ ಬಳಿಕ ಪ್ರಭಾವ ಕಡಿಮೆಯಾಗಿತ್ತು.
ಮಳೆಯ ಅಬ್ಬರಕ್ಕೆ ನಡುವೆ 10-12 ದಿನ ಬಿಡುವು ಸಿಗುವುದು ಸಹಜ ಪ್ರಕ್ರಿಯೆಯಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.