ಉತ್ತರಪ್ರದೇಶದಲ್ಲಿ ಭಾರಿ ಮಳೆ, ಕರ್ನಾಟಕದಲ್ಲಿ ಸಾಧಾರಣ
ಬೆಂಗಳೂರು, ಜುಲೈ 01:ನೈಋತ್ಯ ಮುಂಗಾರು ಮಾರುತಗಳು ಸದ್ಯ ಎತ್ತ ಸಾಗಿವೆ? ಭಾರತದ ಯಾವ ಯಾವ ರಾಜ್ಯಗಳಲ್ಲಿ ಭಾರಿ ಮಳೆ ನಿರೀಕ್ಷಿಸಬಹುದು? ಯಾವ ರಾಜ್ಯಗಳಲ್ಲಿ ಮುಂಗಾರು ಕ್ಷೀಣಗೊಂಡಿದೆ? ಈ ಕುರಿತಂತೆ ಭಾರತೀಯ ಹವಾಮಾನ ಇಲಾಖೆ ಭಾನುವಾರದಂದು ನೀಡಿರುವ ಹವಾಮಾನ ಮುನ್ಸೂಚನೆ, ವರದಿ ಇಲ್ಲಿದೆ.
ಇಲಾಖೆ ವರದಿಯಂತೆ ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಭಾರಿ ಗುಡುಗು ಸಹಿತ ಮಳೆ ಬೀಳಲಿದೆ. ನೈಋತ್ಯ ಮುಂಗಾರು ಮಾರುತಗಳು ರಾಜಸ್ಥಾನ್ ಹಾಗೂ ಕಛ್ ಭಾಗದಲ್ಲಿದ್ದು, ಉತ್ತರ ಭಾರತದ ಹಲವೆಡೆ ಮುಂಗಾರು ಚುರುಕುಗೊಂಡಿದೆ. ಆದರೆ, ಕರ್ನಾಟಕ ಸೇರಿದಂತೆ ದಕ್ಷಿಣದಲ್ಲಿ ಮುಂಗಾರು ಸಾಧಾರಣವಾಗಿದೆ.
ಹವಾಮಾನ ಮುನ್ಸೂಚನೆ: ಜುಲೈ 1ರಿಂದ 3ರ ತನಕ ಉತ್ತರಪ್ರದೇಶದ ಉತ್ತರ ಭಾಗ, ಬಿಹಾರ, ಪಂಜಾಬ್, ಚಂಡೀಗಢ, ಪಶ್ಚಿಮ ಹಿಮಾಲಯ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ ಬೀಳಲಿದೆ.
ಗುಡುಗು ಸಹಿತ ಸಾಧಾರಣ ಮಳೆ: ಜಮ್ಮು ಮತ್ತು ಕಾಶ್ಮೀರ, ಕೊಂಕಣ ಹಾಗೂ ಗೋವಾ, ಲಕ್ಷದೀಪ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಹಿಮಾಚಲಪ್ರದೇಶ ಕೆಲ ಪ್ರದೇಶ, ಛತ್ತೀಸ್ ಗಢ, ಒಡಿಶಾ, ಮಧ್ಯ ಮಹಾರಾಷ್ಟ್ರ, ಕರ್ನಾಟಕದ ಉತ್ತರ ಒಳನಾಡು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆ ನಿರೀಕ್ಷಿಸಬಹುದು.
ಕರ್ನಾಟಕದ ಮಲೆನಾಡು ಹಾಗೂ ಕರಾವಳಿ, ಜಾರ್ಖಂಡ್, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ಸೌರಾಷ್ಟ್ರ, ಆಂಧ್ರಪ್ರದೇಶದ ಕರಾವಳಿ, ತಮಿಳುನಾಡು ಹಾಗೂ ಪುದುಚೇರಿಗಳಲ್ಲಿ ಮಂಗಾರು ವಾಡಿಕೆಯಂತೆ ಮಳೆ ಸುರಿಸಲಿದೆ.