ಮುಂಬೈನಲ್ಲಿ ಭಾರಿ ಮಳೆ ನಿರೀಕ್ಷೆ, ಕಡಲಿಗೆ ಇಳಿಯದಂತೆ ಕೇರಳ ಮೀನುಗಾರರಿಗೆ ಸೂಚನೆ
ಬೆಂಗಳೂರು, ಜೂನ್ 8: ಮುಂದಿನ ಎರಡು ದಿನಗಳಲ್ಲಿ ಮುಂಬೈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.
ಕೊಂಕಣ ಮತ್ತು ಗೋವಾ ಕರಾವಳಿಗಳಲ್ಲಿ ಜೂನ್ 8-12ರವರೆಗೆ ಅರಬ್ಬಿ ಸಮುದ್ರದ ತೀರಗಳಲ್ಲಿ ಇಳಿಯದಂತೆ ಕೇರಳ ಹಾಗೂ ಲಕ್ಷದ್ವೀಪದ ಮೀನುಗಾರರಿಗೆ ಸೂಚಿಸಲಾಗಿದೆ.
ಕೇಂದ್ರ ಅರಬ್ಬಿ ಸಮುದ್ರ, ಕರಾವಳಿ ಕರ್ನಾಟಕದ ಉಳಿದ ಭಾಗಗಳು, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಗೋವಾದ ಬಹುತೇಕ ಭಾಗ ಹಾಗೂ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ನೈರುತ್ಯ ಮುಂಗಾರು ಇನ್ನಷ್ಟು ಪ್ರಬಲಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ಮಹಾರಾಷ್ಟ್ರ ಕರಾವಳಿ ಮತ್ತು ಗೋವಾದ ವಿವಿಧೆಡೆ ಮಳೆ ಧಾರಾಕಾರವಾಗಿ ಸುರಿಯುವ ಸಾಧ್ಯತೆ ಹೆಚ್ಚಿರುವುದರಿಂದ ಇಲ್ಲಿ ಅಪಾಯಕಾರಿ ಪರಿಸ್ಥಿತಿ ಉಂಟಾಗಬಹುದು.
ರತ್ನಗಿರಿ, ಸಿಂಧೂದುರ್ಗ, ಮುಂಬೈ, ಥಾಣೆ, ರಾಯಗಡ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಶನಿವಾರ ವಿಪರೀತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಐಎಂಡಿ ವರದಿ ತಿಳಿಸಿದೆ.
ಮುಂಬೈ ಸೇರಿದಂತೆ ಕೊಂಕಣ ಪ್ರದೇಶದ ಸುತ್ತಮುತ್ತಲಿನ ಆರು ಜಿಲ್ಲೆಗಳಲ್ಲಿ ಜೂನ್ 10-11ರಂದು ಇದೇ ರೀತಿಯ ವಾತಾವರಣ ಮುಂದುವರಿಯಲಿದೆ.
ಕೇಂದ್ರ ಅರಬ್ಬಿ ಸಮುದ್ರ ಇನ್ನಷ್ಟು ಭಾಗಗಳು, ಗೋವಾದ ಉಳಿದ ಭಾಗಗಳು, ದಕ್ಷಿಣ ಮಹಾರಾಷ್ಟ್ರದ ಕೆಲವು ಪ್ರದೇಶಗಳು, ಕರ್ನಾಟಕ ಮತ್ತು ರಾಯಲಸೀಮೆಯ ಉಳಿದ ಭಾಗಗಳು, ತೆಲಂಗಾಣದ ಕೆಲವು ಭಾಗಗಳು, ಆಂಧ್ರಪ್ರದೇಶ ಕರಾವಳಿ ಹಾಗೂ ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ನೈರುತ್ಯ ಮಾರುತ ಬಲಗೊಳ್ಳಲು ಪೂರಕವಾದ ವಾತಾವರಣವಿದೆ.
ಭಾರತದ ಮೇಲೆ ಆವರಿಸಿರುವ ಮೋಡದ ಐಎಂಡಿ ಉಪಗ್ರಹ ಚಿತ್ರ
ರಾಜಧಾನಿ ಲಖನೌ ಸೇರಿದಂತೆ ಉತ್ತರ ಪ್ರದೇಶದ ವಿವಿಧೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಲಖನೌ, ಹರ್ದೋಯಿ, ಸೀತಾಪುರ, ಬಾರಾಬಂಕಿ, ಉನ್ನಾವೊ ಜಿಲ್ಲೆಗಳಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಶುಕ್ರವಾರ ಗುಡುಗು/ಮಳೆಯಾಗುವ ನಿರೀಕ್ಷೆಯಿದೆ ಎಂದು ಲಖನೌದಲ್ಲಿನ ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದೆ.
ಗುರುವಾರ ಸಂಜೆ ಪೂರ್ವ ಮುಂಗಾರು ಮಳೆಯು ಮುಂಬೈನ ಸಹಜ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ವಿಮಾನ ಮತ್ತು ರೈಲುಗಳ ಸಂಚಾರ ವಿಳಂಬಗೊಂಡಿತ್ತು.
ಸಾಂಟಾಕ್ರೂಜ್ನಲ್ಲಿ 39 ಮಿ.ಮೀ. ಮಳೆಯಾಗಿದ್ದರೆ, ಕೊಲಬಾದಲ್ಲಿ 27.6 ಮಿ.ಮೀ. ಮಳೆ ಸುರಿದೆ ಎಂದು ಐಎಂಡಿ ತಿಳಿಸಿದೆ.
ಐಎಂಡಿ ಜೂನ್ 8ರಂದು ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರ
ಮುಂಬೈನಲ್ಲಿರುವ ಜನರು ಮಳೆಯಿಂದ ತೊಂದರೆಯಲ್ಲಿ ಸಿಲುಕಿದ ತುರ್ತು ಸನ್ನಿವೇಶ ಎದುರಾದರೆ 1916 ಸಂಖ್ಯೆಗೆ ಮತ್ತು ಮುಂಬೈ ಹೊರಗಿನ ಜನರು 1077ಗೆ ಕರೆ ಮಾಡಬಹುದು.
ಹವಾಮಾನ ಇಲಾಖೆಯ ವರದಿ ಪ್ರಕಾರ ದೇಶದ ಕೇಂದ್ರ ಭಾಗದಲ್ಲಿ ಈ ಬಾರಿ ಸಾಮಾನ್ಯ ಮಳೆಯಾಗಲಿದೆ. ಆದರೆ, ದಕ್ಷಿಣದ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಪುದುಚೆರಿಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಅದು ತಿಳಿಸಿದೆ.
ಈಶಾನ್ಯ ಭಾಗದಲ್ಲಿಯೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ದೀರ್ಘಾವಧಿ ಸರಾಸರಿಯಲ್ಲಿ (ಎಲ್ಪಿಎ) ದೇಶದಲ್ಲಿ ಜುಲೈ ತಿಂಗಳಿನಲ್ಲಿ ಶೇ 101ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ ತಿಂಗಳಿನಲ್ಲಿ ಶೇ 9ರ ವ್ಯತ್ಯಾಸದಲ್ಲಿ ಶೇ 94ರಷ್ಟು ಎಲ್ಪಿಎ ನಿರೀಕ್ಷಿಸಲಾಗಿದೆ.
ಎಲ್ಪಿಎಯ ಶೇ 90-96ರವರೆಗಿನ ಮಳೆಯನ್ನು ಸಾಮಾನ್ಯಕ್ಕಿಂತ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಶೇ 96-104ರ ವರೆಗಿನ ಎಲ್ಪಿಎಯನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ.
ಶೇ 90ಕ್ಕಿಂತ ಕಡಿಮೆ ಮಳೆಯಾದರೆ ಅದನ್ನು ಎಲ್ಪಿಎಯಲ್ಲಿ ಮಳೆಯ ಕೊರತೆ ಎಂದು, ಶೇ 104-110ರ ನಡುವಣ ಮಳೆ ಪ್ರಮಾಣವನ್ನು ಸಾಮಾನ್ಯಕ್ಕಿಂತ ಅಧಿಕ ಹಾಗೂ ಶೇ 110ಕ್ಕಿಂತ ಹೆಚ್ಚಿನ ಮಳೆ ಪ್ರಮಾಣವನ್ನು ಅತ್ಯಧಿಕ ಮಳೆ ಎಂದು ಪರಿಗಣಿಸಲಾಗುತ್ತದೆ.