ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ
ಬೆಂಗಳೂರು, ಜೂನ್ 16: ಕರಾವಳಿ ಕರ್ನಾಟಕ ಮತ್ತು ಕೇರಳ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅಷ್ಟೇ ಅಲ್ಲ, ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾ, ಮೇಘಾಲಯಗಳಲ್ಲೂ ವರುಣ ಅಬ್ಬರಿಸಲಿದ್ದಾನೆ.
ಪಶ್ಚಿಮ ಬಂಗಾಳ, ಸಿಕ್ಕಿಮ್, ಉತ್ತರಾಖಂಡ್, ಇತ್ತ ಗೋವಾ, ಉತ್ತರ ಕನ್ನಡ ಮತ್ತು ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ.
ಭಾರೀ ಮಳೆಗೆ ಸಾಕ್ಷಿಯಾಗಲಿವೆ ಅಸ್ಸಾಂ ಮತ್ತು ಮೇಘಾಲಯ
ನೈರುತ್ಯ ಮುಂಗಾರು ಮಾರುತಗಳು ಮುಂಬೈನ ಥಾಣೆ, ಅಹ್ಮದ್ ನಗರ, ಬುಲ್ಧಾನಾ, ಅಮ್ರೋಟಿ, ಗೋಂಡಿಯಾ, ಟಿಟ್ಲಾ ಗರ್, ಕಟಕ್, ಮಿಡ್ನಾಪುರ, ಗೋಲ್ ಪಾರಾ ಮತ್ತು ಬಗ್ಡೋಗ್ರಾ ಮೂಲಕ ಹಾದುಹೋಗಿವೆ. ಮುಂಗಾರು ಮಾರುತಗಳು ಮುಂದಿನ ಒಂದು ವಾರ ದುರ್ಬಲವಾಗಲಿದ್ದು, ಹೆಚ್ಚಿನ ಮಳೆ ಸುರಿಯಲಿಕ್ಕಿಲ್ಲ ಎಂದು ಅಂದಾಜಿಸಲಾಗಿದೆ.
ಹವಾಮಾನ ಇಲಾಖೆಯ ಪ್ರಕಾರ ಮುಂದಿನ 24 ಗಂಟೆಗಳಲ್ಲಿ ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್, ತಮಿಳುನಾಡಿನ ಒಳನಾಡು ಮತ್ತು ಉತ್ತರ ಪ್ರದೇಶದ ಪೂರ್ವಭಾಗ, ಬಿಹಾರಗಳಲ್ಲಿ ಚಂಡಮಾರುತ ಸಹಿತ ಮಳೆಯಾಗಲಿದೆ.
24 ಗಂಟೆಗಳಲ್ಲಿ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ. ಈ ವರ್ಷದ ಮುಂಗಾರು ಮುನ್ಸೂಚನೆಯ ಪ್ರಕಾರ ಮಧ್ಯ ಭಾರತದಲ್ಲಿ ಸಾಮಾನ್ಯ ಮಳೆಯಾದರೆ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪುದುಚೇರಿ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಡಿಮೆ ಮಳೆಯಾಗಲಿವೆ.