ರಾಹುಲ್ ಭಾಷಣದಿಂದ 'ಭೂಕಂಪ' ಖಂಡಿತ : ಪರೇಶ್ ರಾವಲ್
ನವದೆಹಲಿ, ಜುಲೈ 20: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿ ಕುರಿತಂತೆ ಶುಕ್ರವಾರ ಮಧ್ಯಾಹ್ನ ಬಿಸಿ ಬಿಸಿ ಚರ್ಚೆ, ಭಾಷಣ ನಡೆಯುತ್ತಿದೆ. ಅವಿಶ್ವಾಸ ನಿರ್ಣಯ ಮಂಡನೆ ಮೂಲಕ ವಿಪಕ್ಷಗಳು, ಆಡಳಿತಾರೂಢ ಎನ್ಡಿಎ ಸರ್ಕಾರ ಬೀಳಿಸಲು ಸಾಧ್ಯವಿಲ್ಲದಿದ್ದರೂ ಇದು ಪ್ರತಿಷ್ಠೆ ಉಳಿಸಲು ಎಲ್ಲರೂ ತಮ್ಮ ವಾಕ್ ಶಕ್ತಿ ಬಳಸುತ್ತಿದ್ದಾರೆ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿಲ್ಲ ಎಂದು ತೆಲುಗುದೇಶಂ ಪಾರ್ಟಿ ಮುನಿಸಿಕೊಂಡು ಎನ್ಡಿಎ ಜತೆ ಸಖ್ಯ ಕಳೆದುಕೊಂಡಿದೆ. ಹೀಗಾಗಿ, ಟಿಡಿಪಿ ಸಂಸದ ಕೆ.ಶ್ರೀನಿವಾಸ್ ಪರವಾಗಿ ಜಯದೇವ್ ಗಲ್ಲಾ ಅವರು ಅವಿಶ್ವಾಸ ನಿರ್ಣಯವನ್ನು ಮಂಡಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾಷಣದ ಬಗ್ಗೆ ಕುತೂಹಲ ಎಂದಿನಂತೆ ಮೂಡಿದ್ದು, ಈ ಬಗ್ಗೆ ಬಾಲಿವುಡ್ಡಿನ ಹಿರಿಯ ನಟ, ಗುಜರಾತ್ ಸಂಸದ ಪರೇಶ್ ರಾವಲ್ ಪ್ರತಿಕ್ರಿಯಿಸಿದ್ದಾರೆ.
'ನನಗೆ 15 ನಿಮಿಷಗಳ ಕಾಲ ಅವಕಾಶ ನೀಡಿದರೆ ಭೂಕಂಪವಾಗುತ್ತದೆ' ಎಂದು ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಪರೇಶ್ ಹೇಳಿಕೆ ನೀಡಿ,
Agar aaj Rahul ji bina padhe, bina fumble kare, bina ghalti kare 15 minute bolenge toh dharti zaroor hilegi, hilegi bhi kya, naachegi: Paresh Rawal,BJP MP #NoConfidenceMotion pic.twitter.com/EwGCtOlxRe
— ANI (@ANI) July 20, 2018
ರಾಹುಲ್ ಗಾಂಧಿ ಅವರು ಯಾರೋ ಬರೆದು ಕೊಟ್ಟಿರುವ ಭಾಷಣವನ್ನು ನೋಡದೆ, ಅಸ್ಖಲಿತವಾಗಿ 15 ನಿಮಿಷಗಳ ಕಾಲ ಭಾಷಣ ಮಾಡಿದ್ರೆ, ನಿಜವಾಗಿಯೂ ಭೂಕಂಪವಾಗಲಿದೆ.ಭೂಮಿ ನಿಜಕ್ಕೂ ನರ್ತಿಸಲಿದೆ ಎಂದಿದ್ದಾರೆ.
535 ಸದಸ್ಯ ಬಲದ ಲೋಕಸಭೆಯಲ್ಲಿ ಎನ್ಡಿಎ ಮೈತ್ರಿಕೂಟ 314 ಸದಸ್ಯ ಬಲ ಹೊಂದಿದೆ. ಬಿಜೆಪಿ ಪಕ್ಷವೇ 274 ಸದಸ್ಯರನ್ನು ಹೊಂದಿದೆ. ಬಹುಮತ ಸಾಬೀತು ಮಾಡಲು 268 ಸದಸ್ಯ ಬಲ ಸಾಕು.
ವಿರೋಧ ಪಕ್ಷ 222 ಸದಸ್ಯ ಬಲ ಹೊಂದಿದೆ. ಇವುಗಳಲ್ಲಿ ಎಐಎಡಿಎಂಕೆಯ 37, ಟಿಎಂಸಿಯ 34, ಬಿಜೆಡಿ 20, ಟಿಡಿಪಿ 16 ಮತ್ತು ಟಿಆರ್ಎಸ್ 11 ಸದಸ್ಯರನ್ನು ಹೊಂದಿವೆ.
ಅವಿಶ್ವಾಸ ಗೊತ್ತವಳಿ ಗೊತ್ತು ನಿರ್ಣಯದ ಬಗ್ಗೆ ಮಾತನಾಡಲು 38 ನಿಮಿಷಗಳನ್ನು ನೀಡಲಾಗಿದೆ. ರಾಹುಲ್ ಗಾಂಧಿ ಅವರು ಪಕ್ಷದ ಪರವಾಗಿ ಮೊದಲು ಮಾತನಾಡಲಿದ್ದಾರೆ. ಬಳಿಕ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಜ್ಯೋತಿರಾಧಿತ್ಯ ಸಿಂಧ್ಯಾ ಕಲಾಪದಲ್ಲಿ ಮಾತನಾಡಲಿದ್ದಾರೆ.