ಗುಜರಾತ್ ಚುನಾವಣೆಗೆ ಮುನ್ನ ಕಾಂಗ್ರೆಸ್ಸಿಗೆ ಹಿನ್ನಡೆ: ಅಹಮದ್ ಪಟೇಲ್ ಆಪ್ತನ ಬಂಧನ
ನವದೆಹಲಿ, ನ 1 (ಪಿಟಿಐ): ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿದ್ದು, ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಆಪ್ತನನ್ನು ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಬುಧವಾರ (ನ 1) ಬಂಧಿಸಿದ್ದಾರೆ.
ಶೆಲ್ ಕಂಪೆನಿಗಳ ಮೂಲಕ ಅಕ್ರಮವಾಗಿ ಐದು ಸಾವಿರ ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿರುವ ಹಗರಣಕ್ಕೆ ಸಂಬಂಧಿಸಿದಂತೆ, ಅಹಮದ್ ಪಟೇಲ್ ಆಪ್ತ ಗಗನ್ ಧವನ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆಂದು ವರದಿಯಾಗಿದೆ.
ಶಂಕಿತ ಉಗ್ರರಿಗೂ ಸೋನಿಯಾ ಆಪ್ತ ಕಾರ್ಯದರ್ಶಿಗೂ ಏನು ಸಂಬಂಧ
ಇತ್ತೀಚೆಗೆ ಇಬ್ಬರು ಉಗ್ರರನ್ನು ಸೂರತ್ ಪೊಲೀಸರು ಬಂಧಿಸಿದ್ದು, ಅದರಲ್ಲಿ ಒಬ್ಬ ಉಗ್ರ ಅಹಮದ್ ಪಟೇಲ್ ಟ್ರಸ್ಟಿಯಾಗಿದ್ದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಪಟೇಲ್ ಆಪ್ತನ ಬಂಧನ ಕಾಂಗ್ರೆಸ್ಸಿಗೆ ಭಾರೀ ಮುಜುಗರತಂದೊಡ್ದಿದೆ.
ಸ್ಟರ್ಲಿಂಗ್ ಬಯೋಟೆಕ್ ಅನ್ನುವ ಕಂಪೆನಿಗೆ, ಜೊತೆಗೆ ವಡೋದರ ನಗರದ ಕೆಲವು ಕಂಪೆನಿಗಳಿಗೆ ನಕಲಿ ದಾಖಲೆಗಳನ್ನು ನೀಡಿ ಕೋಟ್ಯಾಂತರ ರೂಪಾಯಿ ಬ್ಯಾಂಕ್ ಸಾಲ ಕೊಡಿಸಿದ ಆರೋಪವೂ ಅಹಮದ್ ಪಟೇಲ್ ಆಪ್ತನ ಮೇಲಿದೆ.
ಹೆಚ್ಚಿನ ವಿಚಾರಣೆಗಾಗಿ ಗಗನ್ ಧವನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು, ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಲಂಚ ನೀಡಿರುವ ಆರೋಪವೂ ಇವರ ಮೇಲಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.
ಗಗನ್ ಧವನ್ ಮತ್ತು ಮಾಜಿ ಕಾಂಗ್ರೆಸ್ಸಿನ ಶಾಸಕನ ಮನೆ, ಕಚೇರಿಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸ್ಟರ್ಲಿಂಗ್ ಬಯೋಟೆಕ್ ಸಂಸ್ಥೆ, ಆಂಧ್ರ ಬ್ಯಾಂಕ್ ನಿಂದ ಐದು ಸಾವಿರ ರೂಪಾಯಿ ಕೋಟಿ ಸಾಲ ಪಡೆದು, ನಂತರ ಈ ಸಾಲ ವಸೂಲಾಗದ ಅಕೌಂಟ್ ಪಟ್ಟಿಗೆ ಸೇರಿತ್ತು.