ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಯೋಧ ಭಾರತೀಯ ಪ್ರಜೆಯೇ ಅಲ್ಲವಂತೆ!

|
Google Oneindia Kannada News

ಗುವಾಹಟಿ, ಮೇ 30: ದೇಶಕ್ಕಾಗಿ ಹೋರಾಡುವ ಯೋಧರಿಗೆ ಎಲ್ಲೆಡೆ ಗೌರವವಿದೆ. ಕುಟುಂಬ, ತಮ್ಮವರನ್ನು ತೊರೆದು ದೂರದ ಗಡಿಯಲ್ಲಿ ಪ್ರಾಣದ ಹಂಗು ತೊರೆದು ಗಡಿಕಾಯುವ ಯೋಧರು ದೇಶದ ಹೆಮ್ಮೆಯೆಂದೇ ಪರಿಗಣಿಸಲಾಗುತ್ತದೆ. ಆದರೆ, ದೇಶಕ್ಕಾಗಿ ಹೋರಾಡಿದ ಯೋಧನೊಬ್ಬನ ಸ್ಥಿತಿ ಹೀನಾಯವಾಗಿದೆ. ಮೂರು ದಶಕ ಸೇನೆಯಲ್ಲಿದ್ದು ಕರ್ತವ್ಯ ನಿಭಾಯಿಸಿದ ಯೋಧ ತನ್ನದೇ ದೇಶದಲ್ಲಿ 'ವಿದೇಶಿಗ' ಎಂಬ ಹಣೆಪಟ್ಟಿ ತೊಟ್ಟು ಜೈಲು ಸೇರಬೇಕಾಗದ ದುರ್ಗತಿಗೆ ಒಳಗಾಗಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಮಿಲಿಟರಿಯನ್ನು ಸದೆಬಡಿದಿತ್ತು. ಎರಡು ದಶಕದ ಹಿಂದೆ ನಡೆದ ಈ ಯುದ್ಧ ಇಂದಿಗೂ ಭಾರತೀಯರ ಮನಸಿನಲ್ಲಿ ಹಸಿರಾಗಿ ಉಳಿದಿದೆ. ಈ ಯುದ್ಧದಲ್ಲಿ ಪಾಲ್ಗೊಂಡು ನಿವೃತ್ತರಾಗಿರುವ ಯೋಧನ ಕುಟುಂಬ ನ್ಯಾಯಕ್ಕಾಗಿ ಅಂಗಲಾಚಿ ಗುವಾಹಟಿ ಹೈಕೋರ್ಟ್ ಮೆಟ್ಟಿಲೇರಿದೆ.

ಕಾರ್ಗಿಲ್ ಯುದ್ಧ: ಅನುಜ್ ಎಂಬ ವೀರ ಯೋಧನ ರೋಮಾಂಚನಕಾರಿ ಸಾಹಸಗಾಥೆ ಕಾರ್ಗಿಲ್ ಯುದ್ಧ: ಅನುಜ್ ಎಂಬ ವೀರ ಯೋಧನ ರೋಮಾಂಚನಕಾರಿ ಸಾಹಸಗಾಥೆ

ಯೋಧನನ್ನು ಅಕ್ರಮ ವಲಸಿಗರ ಕಾರಾಗೃಹ ಕೇಂದ್ರಕ್ಕೆ ಕಳುಹಿಸಲಾಗಿದೆ. ಇದರಿಂದ ಕಂಗಾಲಾಗಿರುವ ಆ ಕುಟುಂಬ ತಕ್ಷಣವೇ ನ್ಯಾಯಾಲಯದ ಮೊರೆ ಹೋಗಿದೆ.

ಸೇನೆಯ ಗೌರವಾನ್ವಿತ ಲೆಫ್ಟಿನೆಂಟ್ ಆಗಿ ನಿವೃತ್ತರಾಗಿರುವ ಮೊಹಮ್ಮದ್ ಸನಾವುಲ್ಲಾ ಅವರ ವಿರುದ್ಧ ಅಸ್ಸಾಂನ ಪೊಲೀಸ್ ಗಡಿ ಸಂಘ ಅಥವಾ ಗಡಿ ಪೊಲೀಸ್ ಮಂಗಳವಾರ ಗುವಾಹಟಿಯಲ್ಲಿ ಸಮನ್ಸ್ ಜಾರಿ ಮಾಡಿತ್ತು. ಅದರ ಬೆನ್ನಲ್ಲೇ ಅವರನ್ನು ಬಂಧಿಸಲಾಗಿತ್ತು. ವಿದೇಶಿಗರ ನ್ಯಾಯಮಂಡಳಿಯು ಸನಾವುಲ್ಲಾ ಅವರು ಭಾರತೀಯ ನಾಗರಿಕರಲ್ಲ ಎಂದು ತೀರ್ಪು ನೀಡಿದ ಬೆನ್ನಲ್ಲೇ ಅವರ ಬಂಧನಕ್ಕೆ ಆದೇಶ ಹೊರಡಿಸಲಾಗಿತ್ತು.

ಗಡಿ ಪೊಲೀಸರು ವಿದೇಶಿಗರು ಎಂದು ಗುರುತಿಸಿರುವ ಸರಿಯಾಗಿ 100 ಮಂದಿಯ ವಿರುದ್ಧದ ಪ್ರಕರಣಗಳನ್ನು ವಿದೇಶಿಗರ ನ್ಯಾಯಮಂಡಳಿ ವಿಚಾರಣೆ ನಡೆಸಲಿದೆ.

ವಿಜಯ್ ದಿವಸ್: ಕಾರ್ಗಿಲ್ ಯುದ್ಧದ ಆ ರೋಚಕ ಕ್ಷಣಕ್ಕೆ 19 ವರ್ಷವಿಜಯ್ ದಿವಸ್: ಕಾರ್ಗಿಲ್ ಯುದ್ಧದ ಆ ರೋಚಕ ಕ್ಷಣಕ್ಕೆ 19 ವರ್ಷ

ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಸ್ಸಾಂ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ಕೇಳಿಬರುತ್ತಿದೆ.

ಇದೇ ಪೊಲೀಸ್ ಇಲಾಖೆಯಲ್ಲಿದ್ದರು

ಇದೇ ಪೊಲೀಸ್ ಇಲಾಖೆಯಲ್ಲಿದ್ದರು

ಪರಿಸ್ಥಿತಿಯ ವ್ಯಂಗ್ಯವೆಂದರೆ, 52 ವರ್ಷದ ಲೆಫ್ಟಿನೆಂಟ್ ಸನಾವುಲ್ಲಾ ಅವರು, ಅನುಮಾನ ವ್ಯಕ್ತವಾದ ನಾಗರಿಕರನ್ನು ಮತ್ತು ಅಕ್ರಮ ವಲಸಿಗರನ್ನು ಗುರುತಿಸುವ, ಬಂಧಿಸುವ ಮತ್ತು ಗಡಿಪಾರು ಮಾಡುವ ಇದೇ ಗಡಿ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಆಗಿ ಕೂಡ ಕಾರ್ಯನಿರ್ವಹಿಸಿದ್ದರು. ರಕ್ಷಣೆ ಮತ್ತು ಅರೆ ಸೇನಾಪಡೆಯಿಂದ ನಿವೃತ್ತರಾದ ಸಿಬ್ಬಂದಿಯನ್ನು ಅಸ್ಸಾಂ ರಾಜ್ಯ ಪೊಲೀಸ್ ಇಲಾಖೆ ಹೆಚ್ಚಾಗಿ ಈ ವಿಭಾಗಕ್ಕೆ ನೇಮಿಸಿಕೊಳ್ಳುತ್ತದೆ.

ಲೆಫ್ಟಿನೆಂಟ್ ಸನಾವುಲ್ಲಾ ಅವರಿಗೆ ವಿದೇಶಿಗರ ನ್ಯಾಯಮಂಡಳಿ ಕಳೆದ ವರ್ಷ ನೋಟಿಸ್ ಜಾರಿ ಮಾಡಿತ್ತು. ಐದು ಬಾರಿ ಅವರು ನ್ಯಾಯಮಂಡಳಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಸನಾವುಲ್ಲಾ ಮಾತ್ರವಲ್ಲ, ಸೇನೆ ಹಾಗೂ ಅರೆಸೇನಾ ಪಡೆಯ ಇನ್ನೂ ಕನಿಷ್ಠ ಆರು ಮಂದಿ ನಿವೃತ್ತ ಸಿಬ್ಬಂದಿಗೆ ಇದೇ ರೀತಿ ನೋಟಿಸ್‌ಗಳನ್ನು ಕಳುಹಿಸಲಾಗಿದೆ ಎನ್ನಲಾಗಿದೆ.

ಚಿತ್ರಗಳು:ವಿಜಯ ದಿವಸ: ಕಾರ್ಗಿಲ್‌ ಹುತಾತ್ಮ ಯೋಧರಿಗೆ ದೇಶದ ನಮನ ಚಿತ್ರಗಳು:ವಿಜಯ ದಿವಸ: ಕಾರ್ಗಿಲ್‌ ಹುತಾತ್ಮ ಯೋಧರಿಗೆ ದೇಶದ ನಮನ

ಜೈಲಿನಲ್ಲಿ ಕಳೆದ ಸನಾವುಲ್ಲಾ

'1987ರಲ್ಲಿ ನಾನು ಸೇನೆಗೆ ಸೇರಿಕೊಂಡಿದ್ದೆ. ಆದರೆ ಅವರು ತಪ್ಪಾಗಿ ಅದನ್ನು 1978ರಲ್ಲಿ ಎಂದು ನಮೂದಿಸಿದ್ದಾರೆ. ನಾನು ಹುಟ್ಟಿದ್ದು 1967ರಲ್ಲಿ. ಅಂದರೆ ನಾನು ಸೇನೆ ಸೇರುವಾಗ ನನಗೆ ಕೇವಲ 11 ವರ್ಷ ಎಂದಾಗುತ್ತದೆ' ಎಂದು ಪೊಲೀಸರು ಎಸಗಿರುವ ಪ್ರಮಾದದ ಬಗ್ಗೆ ಅವರು ನೊಂದು ಹೇಳಿದ್ದಾರೆ.

ಸನಾವುಲ್ಲಾ ಅವರು ಇಡೀ ರಾತ್ರಿಯನ್ನು ಅಮೀನಗಾಂವ್ ಪೊಲೀಸ್ ಠಾಣೆಯಲ್ಲಿ ಕಳೆದಿದ್ದರು. ಬುಧವಾರ ವಿದೇಶಿಗರ ನ್ಯಾಯಮಂಡಳಿ ಎದುರು ವಿಚಾರಣೆಗೆ ಹಾಜರಾಗಿದ್ದರು. ಅಲ್ಲಿಂದ ಅವರನ್ನು ಸೆರೆ ಶಿಬಿರಕ್ಕೆ ಕಳುಹಿಸಲಾಗಿದೆ.

'ಅವರನ್ನು ವಿದೇಶಿಗ ಎಂದು ಘೋಷಣೆ ಮಾಡಲಾಗಿದೆ. ಹೀಗಾಗಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಹಾಲಿ ಇರುವ ನಿಯಮ ಮತ್ತು ಮಾರ್ಗದರ್ಶಿಗಳಿಗೆ ಅನುಗುಣವಾಗಿ ನಾವು ಆದೇಶ ಪಾಲಿಸುತ್ತೇವೆ' ಎಂದು ಕಾಮರೂಪದ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥಸಾರಥಿ ಮಹಾಂತ ತಿಳಿಸಿದ್ದಾರೆ.

ವಿವಿಧ ಕಾರ್ಯಾಚರಣೆಗಳಲ್ಲಿ ಭಾಗಿ

ಸೈನಿಕನಾಗಿ ನಿವೃತ್ತರಾದ ಬಳಿಕ ಸನಾವುಲ್ಲಾ ಅವರು ಕಾಮರೂಪ ಗ್ರಾಮೀಣ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಬೈಹತಾ ಚರೈಲಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದ್ದರು. ಯೋಧರಾಗಿದ್ದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ 26 ರಾಷ್ಟ್ರೀಯ ರೈಫಲ್ಸ್ ಪಡೆಗಳೊಂದಿಗೆ ಮೂರು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು. 2015-2017ರ ಅವಧಿಯಲ್ಲಿ ಎಲ್‌ಒಸಿಯ ಕುಪ್ವಾರದಲ್ಲಿ ಕಾರ್ಯನಿರ್ವಹಿಸಿದ್ದರು.

1987ರಲ್ಲಿ ಸೇನೆಗೆ ಸೇರಿದ್ದರು

'ಅಸ್ಸಾಂನಲ್ಲಿ ಜನಿಸಿದ್ದ ಸನಾವುಲ್ಲಾ ಅವರು 1987ರಲ್ಲಿ ಸೇನೆಗೆ ಸೇರಿಕೊಂಡಿದ್ದರು. 2017ರಲ್ಲಿ ಸೇನೆಯಿಂದ ನಿವೃತ್ತರಾದ ಬಳಿಕ ಗಡಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ಆದರೆ ಅವರು 1978ರಲ್ಲಿ ಸೇನೆಗೆ ಸೇರಿಕೊಂಡಿದ್ದಾಗಿ ಉಲ್ಲೇಖಿಸಲಾಗಿದೆ. ಈ ತಪ್ಪನ್ನೇ ಆಧಾರವಾಗಿಟ್ಟುಕೊಂಡು ನ್ಯಾಯಮಂಡಳಿ ಅವರನ್ನು ವಿದೇಶಿಗನೆಂದು ಘೋಷಿಸಿದೆ. 11 ವರ್ಷಕ್ಕೆ ಯಾರೂ ಸೇನೆಯನ್ನು ಸೇರಲು ಸಾಧ್ಯವಿಲ್ಲ ಎನ್ನುವುದಷ್ಟೇ ನ್ಯಾಯಮಂಡಳಿ ವಾದವಾಗಿದೆ' ಎಂದು ಸೇನೆಯ ಜೂನಿಯರ್ ಕಮಿಷನರ್ ಅಧಿಕಾರಿಯಾಗಿ ನಿವೃತ್ತರಾಗಿರುವ ಅಸ್ಸಾಂನ ಬೋಕೋದ ಮೊಹಮ್ಮದ್ ಅಜ್ಮಲ್ ಹಕ್ ಆರೋಪಿಸಿದ್ದಾರೆ.

ಹಕ್ ಅವರಿಗೂ ನೋಟಿಸ್ ಜಾರಿಯಾಗಿತ್ತು

ನಿವೃತ್ತ ಸೈನಿಕರನ್ನು ಈ ರೀತಿ ನಡೆಸಿಕೊಳ್ಳುವುದಕ್ಕಿಂತ ಅಘಾತಕಾರಿ ಸಂಗತಿ ಇನ್ನೊಂದಿಲ್ಲ ಎಂದು ಸನಾವುಲ್ಲಾ ಅವರ ಸಂಬಂಧಿಯೂ ಆಗಿರುವ ಹಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಗಿಲ್ ಯುದ್ಧದ ಹೋರಾಟ ಸೇರಿದಂತೆ ದೇಶವನ್ನು ರಕ್ಷಿಸುವ ಕಾರ್ಯದಲ್ಲಿ 30 ವರ್ಷ ಸೇನೆಯಲ್ಲಿ ಕಳೆದಿದ್ದಕ್ಕೆ ಅವರಿಗೆ ಕೊಡುವ ಉಡುಗೊರೆಯೇ ಇದು? ಎಂದು ಅವರು ಪ್ರಶ್ನಿಸಿದ್ದಾರೆ. ಹಕ್ ಅವರಿಗೂ ವಿದೇಶಿಗರ ನ್ಯಾಯಮಂಡಳಿ ನೋಟಿಸ್ ಜಾರಿ ಮಾಡಿತ್ತು. ಆದರೆ, ಅವರ ಪ್ರಕರಣವನ್ನು ವಜಾಗೊಳಿಸಲಾಗಿತ್ತು. ತಪ್ಪಾಗಿ ಬೇರೆ ಅಜ್ಮಲ್ ಹಕ್ ಅವರಿಗೆ ನೋಟಿಸ್ ನೀಡಲಾಗಿತ್ತು ಎಂದು ಗಡಿ ಪೊಲೀಸರು ಕ್ಷಮೆ ಕೋರಿದ್ದರು.

ಅವರ ಕುಟುಂಬದ ಹೆಸರೂ ಇಲ್ಲ

ಸನಾವುಲ್ಲಾ ಅವರ ಪತ್ನಿ ಹಾಗೂ ಮೂವರು ಮಕ್ಕಳ ಹೆಸರನ್ನು ಕೂಡ ರಾಷ್ಟ್ರೀಯ ಪೌರತ್ವ ನೋಂದಣಿಯ ಸಂಪೂರ್ಣ ಕರಡುದಿಂದ ಕೈಬಿಡಲಾಗಿದೆ. ಆದರೆ, ಅವರ ಹಿರಿಯ ಅಣ್ಣ ಮತ್ತು ಅವರ ಕುಟುಂಬದವರನ್ನು ಭಾರತೀಯರು ಎಂದು ನಮೂದಿಸಲಾಗಿದೆ. ಪರಿಶೀಲನೆಯ ಪುರಾವೆಯಾಗಿ ಸನಾವುಲ್ಲಾ ಅವರು ತಮ್ಮ ಮತದಾರರ ಪಟ್ಟಿಯಲ್ಲಿನ ಹೆಸರು, ಜನ್ಮದಿನದ ಪುರಾವೆಯಾಗಿ ಶಾಲಾ ಪ್ರಮಾಣಪತ್ರ, ಪಾಸ್‌ಪೋರ್ಟ್ ಮತ್ತು ಇತರೆ ದಾಖಲೆಗಳನ್ನು ಒದಗಿಸಿದ್ದರು. ಆದರೆ, ಅವರು ತಮ್ಮ ಪೋಷಕರು ಭಾರತೀಯ ನಾಗರಿಕರೆನ್ನುವುದಕ್ಕೆ ಹಾಗೂ ತಾವು ಮೂಲತಃ ಭಾರತೀಯ ಸಂಜಾತ ಎನ್ನುವುದಕ್ಕೆ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಹಿಂದೂ ಅಲ್ಲದವರು...

ಭಾರತೀಯ ಯುದ್ಧ ಹೋರಾಟಗಾರ ಹಿರಿಯನನ್ನು ವಿದೇಶಿಗ ಎಂದು ಬಂಧಿಸಲಾಗಿದೆ. ಅವರ ಹೆಸರು-ಮೊಹಮ್ಮದ್ ಸನಾವುಲ್ಲಾ.

ಶಾಂತಿ ಪ್ರಿಯ ಅಮಿತ್ ಶಾ ಅವರು ಆಶ್ವಾಸನೆ ನೀಡಿದಂತೆ... ನೀವು ಹಿಂದೂ, ಸಿಖ್, ಜೈನ್ ಅಥವಾ ಬುದ್ಧ ಅಲ್ಲದೆ ಹೋದರೆ ನಿಮಗೆ ಭಾರತದಲ್ಲಿ ಅವಕಾಶವಿಲ್ಲ. ನೀವು ಹಿರಿಯ ಸೈನಿಕನಾದರೂ ಅಷ್ಟೇ! ಪ್ರಮಾಣವಚನ ಸ್ವೀಕಾರಕ್ಕೆ ಶುಭವಾಗಲಿ ಎಂದು ಮೋದಿ ಹಾಗೂ ಬಿಜೆಪಿ ಟೀಕಾಕಾರ ನಟ ಸಿದ್ಧಾರ್ಥ್ ಟ್ವೀಟ್ ಮಾಡಿದ್ದಾರೆ.

English summary
Retired soldier Mohammaed Sanaullah, who fought in Kargil war has been detained by Assam border police after Boko Foreigners' Tribunal declared him a 'Foreigner'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X