ಮೊಹಮ್ಮದ್ ಕೈಫ್ ಗೆ ಅಂಟಿಕೊಂಡಿತು 'ತ್ರಿವಳಿ ತಲಾಖ್' ವಿವಾದ
ಟ್ರಿಪಲ್ ತಲಾಖ್ ವಿರುದ್ಧ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು ಬೆಂಬಲಿಸಿದ್ದಕ್ಕೆ ಕ್ರಿಕೆಟಿಗ ಮೊಹಮ್ಮದ್ ಕೈಫ್ ಗೆ ತರಾಟೆ. ಟ್ವೀಟ್ಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಟ್ವಿಟ್ಟರ್ ನಲ್ಲಿ ಮುಸ್ಲಿಂ ಬಾಂಧವರಿಂದ ತರಾಟೆ. ಹಿಂದೂ ಟ್ವಿ
ನವದೆಹಲಿ, ಆಗಸ್ಟ್ 23: ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಮಂಗಳವಾರ ನೀಡಿದ್ದ ತೀರ್ಪನ್ನು ಬೆಂಬಲಿಸಿದ್ದ ಕ್ರಿಕೆಟಿಗ ಮೊಹಮ್ಮದ್ ಕೈಫ್ ಗೆ ಟ್ವಿಟರ್ ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ತಲಾಖ್ ವಿರುದ್ಧ ಗೆದ್ದ 5 ಮುಸ್ಲಿಂ ಮಹಿಳೆಯರು ಇವರೇ!
ಮಂಗಳವಾರವೇ ಈ ಬಗ್ಗೆ ಟ್ವೀಟ್ ಮಾಡಿದ್ದ ಕೈಫ್, 'ತ್ರಿವಳಿ ತಲಾಖ್ ಅಸಾಂವಿಧಾನಿಕ ಎಂದು ಹೇಳಿರುವ ಸುಪ್ರೀಂ ಕೋರ್ಟ್ ನ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಈ ತೀರ್ಪು ಮುಸ್ಲಿಂ ಮಹಿಳೆಯರಿಗೆ ಮತ್ತಷ್ಟು ಸುರಕ್ಷತೆಯನ್ನು ಕೊಡುತ್ತದೆ. ಲಿಂಗ ಸಮಾನತೆ ಇಂದಿನ ಅವಶ್ಯಕತೆಗಳಲ್ಲೊಂದು' ಎಂದು ತಿಳಿಸಿದ್ದರು.
ಆದರೆ, ಇವರ ಟ್ವೀಟ್ ಅನ್ನು ಹಲವಾರು ಮಂದಿ ಟೀಕಿಸಿದ್ದಾರೆ. ಕ್ಸನೂರ್ ಭಟ್ ಎಂಬುವರು 'ಇಸ್ಲಾಂ ಧರ್ಮದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ. ಇದು ನಿಮಗೆ ಗೊತ್ತಿಲ್ಲವೇ? ಮಹಿಳೆಯರ ಸುರಕ್ಷತೆಯ ಹೆಸರಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪನ್ನು ನೀವು ಹೇಗೆ ಬೆಂಬಲಿಸುತ್ತೀರಿ?' ಎಂದು ಕೇಳಿದ್ದಾರೆ.
ಕನ್ನಡ ದಿನಪತ್ರಿಕೆಗಳ ಕಣ್ಣಲ್ಲಿ 'ತ್ರಿವಳಿ ತಲಾಖ್' ತೀರ್ಪು
ರೆಬೆಲ್ ಲಡ್ಕಾ ಎಂಬ ಖಾತೆ ಹೊಂದಿರುವ ವ್ಯಕ್ತಿಯು, 'ನೀವು ಯಾರನ್ನು ಮೆಚ್ಚಿಸಲು ಇಂಥ ಟ್ವೀಟ್ ಗಳನ್ನು ಮಾಡುತ್ತೀರಿ' ಎಂದು ತಿಳಿಸಿದರು.
ಇನ್ನು, ಮೊಹಮ್ಮದ್ ಅಲಿ ಎಂಬಾತ, 'ನೀವು ಖುರಾನ್ ಓದಿದ್ದೀರಾ? ಓದಿದ್ದರೆ, ನಿಮಗೆ ಲಿಂಗ ಸಮಾನತೆ ಹಾಗೂ ಮಹಿಳಾ ಸುರಕ್ಷತೆ ವಿಚಾರಗಳು ಅರ್ಥವಾಗಿರಬೇಕಿತ್ತು' ಎಂದು ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯದ ಕೆಲವರು ಹೀಗೆ ಟ್ವೀಟ್ ಮಾಡಿ ಕೈಫ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರೆ, ಹಿಂದೂ ಧರ್ಮಕ್ಕೆ ಸೇರಿದ ಕೆಲವರು ಕೈಫ್ ಅವರಿಗೆ ನೈತಿಕ ಬೆಂಬಲ ಕೊಟ್ಟಿದ್ದಾರೆ. ಕೆಲವರು ಹುಷಾರಾಗಿರಿ ಎಂದು ತಮಾಷೆಯನ್ನೂ ಮಾಡಿದ್ದಾರೆ.
ತ್ರಿವಳಿ ತಲಾಖ್ ಪದ್ಧತಿ ಅಸಂವಿಧಾನಿಕ : ಮಂಗಳೂರಿಗರು ಏನಂತಾರೆ?
ರವೀಂದ್ರ ಜಾಧವ್ ಎಂಬುವರು, 'ಕೈಫ್ ಅವರೇ ನಿಮ್ಮ ವಿರುದ್ಧವೇ ಫತ್ವಾ ಹೊರಡಿಸಬಹುದು, ಎಚ್ಚರವಾಗಿರಿ' ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ರೋಹಿತ್ ಕೊಠಾರಿ ಎಂಬುವರು, 'ಕೆಟ್ಟ ಸಂಪ್ರದಾಯದ ವಿರುದ್ಧ ನೀವು ಹೀಗೆ ಬಹಿರಂಗವಾಗಿ ಮಾತನಾಡಿದ್ದಕ್ಕೆ ನಮ್ಮ ಬೆಂಬಲವಿದೆ. ನೀವು ಫತ್ವಾಕ್ಕೆ ಹೆದರುವುದಿಲ್ಲ ಎಂದಿರಬಹುದು' ಎಂದು ತಿಳಿಸಿದ್ದಾರೆ.
ಇನ್ನು, ಅಂಕುರ್ ಕುಮಾರ್ ಎಂಬುವರು, 'ಅಯ್ಯೋ, ಟ್ವೀಟ್ ಮೂಲಕ ಇಂಥದ್ದನ್ನೆಲ್ಲವನ್ನೂ ಹೇಳಬೇಡಿ. ನಿಮಗೆ ಅದರಿಂದ ತೊಂದರೆಯಾದೀತು' ಎಂದು ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ, ಕೈಫ್ ಅವರಿಗೆ ಟ್ವಿಟ್ಟರ್ ನಲ್ಲಿ ವಿರೋಧ, ಬೆಂಬಲ ಎರಡೂ ಸಿಕ್ಕಿವೆ.