ಹಳೆ 'ಬೆಂಕಿ'ಗೆ ಹೊಸ ತುಪ್ಪ ಸುರಿದ ಕಾಂಗ್ರೆಸ್!
ನವದೆಹಲಿ/ಲಕ್ನೋ, ಏ 18: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿಕಾಸ ಪುರುಷನಲ್ಲ, ಬದಲಿಗೆ ವಿನಾಶ ಪುರುಷ ಎಂದಿದ್ದ ಬಿಜೆಪಿ ನಾಯಕಿ ಉಮಾಭಾರತಿ ಹೇಳಿಕೆಯ ಸಿಡಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಈ ಹಿಂದೆ ಉಮಾಭಾರತಿ ನೀಡಿದ್ದ ಹೇಳಿಕೆಯ ಸಿಡಿಯನ್ನು ಗುರುವಾರ (ಏ 17) ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಕಾಂಗ್ರೆಸ್, ಇದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ನಿಜವಾದ ಬಣ್ಣವೆಂದು ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.
2006ರಲ್ಲಿ ವರಿಷ್ಠರ ನಡುವಿನ ಭಿನ್ನಾಭಿಪ್ರಾಯದಿಂದ ಮಾತೃ ಪಕ್ಷ ಬಿಜೆಪಿ ತೊರೆದಿದ್ದ ಉಮಾಭಾರತಿ ಮೋದಿ ಒಬ್ಬ 'ವಿಕಾಸ ಪುರುಷನಲ್ಲ ಬದಲಿಗೆ ವಿನಾಶ ಪುರುಷ', ಅವರು ಗುಜರಾತಿನಲ್ಲಿ ಹೇಳುತ್ತಿರುವ ಅಭಿವೃದ್ದಿ ಕೆಲಸವೆಲ್ಲಾ ಬರೀ ಸುಳ್ಳು ಎಂದು ಹೇಳಿಕೆ ನೀಡಿದ್ದರು.
ಗುಜರಾತ್ ದಿನದಿಂದ ದಿನಕ್ಕೆ ಸಾಲಗಾರ ರಾಜ್ಯವಾಗುತ್ತಿದೆ. ಅಲ್ಲಿ ರಾಮನೂ ಸಿಗಲಿಲ್ಲ, ರೊಟ್ಟಿಯೂ ಸಿಗಲಿಲ್ಲ ಎಂದು ಭಾರತೀಯ ಜನಶಕ್ತಿ ಎನ್ನುವ ಪಕ್ಷವನ್ನು ಹುಟ್ಟುಹಾಕಿದ ಸಂದರ್ಭದಲ್ಲಿ ಉಮಾಭಾರತಿ ನೀಡಿದ್ದ ಹೇಳಿಕೆಯನ್ನು ವಿಡಿಯೋ ಚಿತ್ರೀಕರಿಸಲಾಗಿತ್ತು.
ಈಗ ಎಂಟು ವರ್ಷದ ಹಿಂದಿನ ವಿಡಿಯೋಗೆ ಕಾಂಗ್ರೆಸ್ ಮರುಜೀವ ತಂದುಕೊಟ್ಟು 16ನೇ ಲೋಕಸಭೆಗೆ ಐದನೇ ಹಂತದ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ (ಏ 17) ಬಿಡುಗಡೆಮಾಡಿದೆ.
ಫೈರ್ ಬ್ರ್ಯಾಂಡ್ ಖ್ಯಾತಿಯ ಉಮಾಭಾರತಿ 2011ರಲ್ಲಿ ಜನಶಕ್ತಿ ಪಕ್ಷವನ್ನು ವಿಸರ್ಜಿಸಿ ಬಿಜೆಪಿಗೆ ಮರುಸೇರ್ಪಡೆಯಾದರು. ಹಾಲಿ ಲೋಕಸಭಾ ಚುನಾವಣೆಯಲ್ಲಿ ಉಮಾ, ಉತ್ತರಪ್ರದೇಶದ ಝೂನ್ಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.
ಮೋದಿ ಬಗ್ಗೆ ಉಮಾಭಾರತಿ ಹೇಳಿದ್ದು, ಮುಂದೆ ಓದಿ..
ಮೋದಿಯನ್ನು ಅಟ್ಟಕ್ಕೇರಿಸಿದ್ದು ಮಾಧ್ಯಮ
1973ರಿಂದಲೇ ನನಗೆ ಅವರು ಗೊತ್ತು. ಮೋದಿ ದೊಡ್ಡ ವ್ಯಕ್ತಿಯಾಗಲು ಮಾಧ್ಯಮಗಳೇ ಕಾರಣ. ಮಾಧ್ಯಮಗಳು ಅವರನ್ನು ಬಲೂನಿನ ಹಾಗೆ ಉಬ್ಬಿಸಿದ್ದರು. ಈಗ ಮಾಧ್ಯಮದವರೇ ಅದರ ಗಾಳಿಯನ್ನು ತೆಗೆಯಬೇಕೆಂದು ಉಮಾ ಅಂದು ಹೇಳಿದ್ದರು.
ಕಾಂಗ್ರೆಸ್ ಸಮಜಾಯಿಶಿ
ಉಮಾಭಾರತಿ ವಿಡಿಯೋ ಸಿಡಿಯನ್ನು ಬಿಡುಗಡೆ ಮಾಡುವ ಉದ್ದೇಶ ಮಾತ್ರ ಕಾಂಗ್ರೆಸ್ಸಿನದಲ್ಲ. ಮೋದಿ ಸರ್ವಾಧಿಕಾರಿ ಎಂದು ತೋರಿಸಲು ಈ ವಿಡಿಯೋ ಬಿಡುಗಡೆ ಮಾಡಿದ್ದೇವೆ - ಕಾಂಗ್ರೆಸ್ ವಕ್ತಾರ ಸಿಂಘ್ವಿ
ಆಯೋಗಕ್ಕೆ ಉಮಾಭಾರತಿ ದೂರು
ತಾನು ಅಂದು ಹೇಳಿರುವ ಹೇಳಿಕೆಯನ್ನು ಒಪ್ಪಿಕೊಂಡ ಉಮಾ, ಅಮೆರಿಕ ಕೂಡಾ ಮೋದಿ ವಿರುದ್ದ ತನ್ನ ನಿಲುವನ್ನು ಬದಲಿಸಿಕೊಂಡಿದೆ. ಹಳೆಯ ಸಿಡಿಯನ್ನು ಈಗ ಬಿಡುಗಡೆ ಮಾಡಿದ ಕಾಂಗ್ರೆಸ್ ಕ್ರಮವನ್ನು ಉಮಾ ಟೀಕಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಬಿಜೆಪಿ ಪ್ರತಿಕ್ರಿಯೆ
ಈಗಾಗಲೇ ಸೋಲನ್ನು ಒಪ್ಪಿಕೊಂಡಂತಿರುವ ಕಾಂಗ್ರೆಸ್ ಹತಾಶ ಮನೋಭಾವದಿಂದ ಈ ವಿಡಿಯೋ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಮೊದಲು ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲಿ - ಬಿಜೆಪಿ ವಕ್ತಾರ ಜಾವ್ಡೇಕರ್
ಕೆಲವು ದಿನಗಳ ಹಿಂದೆ
ಕೆಲವು ದಿನಗಳ ಹಿಂದೆ ನರೇಂದ್ರ ಮೋದಿಗಿಂತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಉತ್ತಮ ವಾಗ್ಮಿ ಎಂದು ಉಮಾಭಾರತಿ ನೀಡಿದ್ದ ಹೇಳಿಕೆಯನ್ನು ಮತ್ತೆ ಸ್ಮರಿಸಿಕೊಳ್ಳಬಹುದಾಗಿದೆ.
ಭೋಪಾಲ್ ನಲ್ಲಿ ಟಿಕೆಟ್ ನೀಡಿಲ್ಲ
ಭೋಪಾಲ್ ನಿಂದ ಸ್ಪರ್ಧಿಸಲು ಬಯಸಿದ್ದ ಉಮಾಗೆ ಬಿಜೆಪಿ ಅಲ್ಲಿ ಟಿಕೆಟ್ ನೀಡಲಿಲ್ಲ, ಅಲ್ಲದೇ ರಾಯ್ ಬರೇಲಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ದ ಸ್ಪರ್ಧಿಸಲು ಉಮಾಗೆ ಸೂಚಿಸಿತ್ತು. ಆದರೆ ಉಮಾಭಾರತಿ, ಸೋನಿಯಾ ವಿರುದ್ದ ಸ್ಪರ್ಧಿಸಲು ನಿರಾಕರಿಸಿದ್ದರು.