'ವೈಯಕ್ತಿಕ ಪ್ರಚಾರಕ್ಕೆ ಕೋವಿಡ್ ಲಸಿಕೆ ಬಳಸುತ್ತಿರುವ ಮೋದಿ'- ಪ್ರಿಯಾಂಕಾ ಆರೋಪ
ನವದೆಹಲಿ, ಮೇ 26: ಕೋವಿಡ್ ಲಸಿಕೆಯನ್ನು ಜನರ ಜೀವ ಉಳಿಸುವ ಸಾಧನವನ್ನಾಗಿ ಬಳಸುವ ಬದಲಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ ವೈಯಕ್ತಿಕ ಪ್ರಚಾರಕ್ಕಾಗಿ ಕೋವಿಡ್ ಲಸಿಕೆಯನ್ನು ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ಈ ಬಗ್ಗೆ ಜಿಮೆದಾರ್ ಕೌನ್? (ಯಾರು ಜವಾಬ್ದಾರರು?) ಅಭಿಯಾನದಡಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ವಿಶ್ವದಲ್ಲೇ ಅತಿದೊಡ್ಡ ಲಸಿಕೆ ತಯಾರಕ ದೇಶ ಭಾರತವಾಗಿದೆ. ಆದರೆ ಈಗ ಲಸಿಕೆಗಾಗಿ ಬೇರೆ ದೇಶಗಳ ಮೇಲೆ ಅವಲಂಬಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.
ಕೇಂದ್ರ ವಿಸ್ತಾ ಯೋಜನೆ ಹಣವನ್ನು ಸಂಕಷ್ಟದಲ್ಲಿರುವ ಜನರಿಗೆ ಬಳಸಿ; ಪ್ರಿಯಾಂಕಾ
ಕೇಂದ್ರ ಸರ್ಕಾರ ಲಸಿಕೆ ಅಭಿಯಾನವನ್ನು ತನ್ನ ದೊಡ್ಡ ಸಾಧನೆ ಎಂಬ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಈಗ ಲಸಿಕೆಗಾಗಿ ಬೇರೆ ದೇಶಗಳನ್ನು ನಮ್ಮ ರಾಜ್ಯ ಸರ್ಕಾರಗಳು ಅವಲಂಬಿಸಿದೆ. ಲಸಿಕೆಯ ಸಂಪೂರ್ಣ ಜವಾಬ್ದಾರಿಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ರಾಜ್ಯಗಳ ಮೇಲೆ ಹೇರಿದೆ. ಆದರೆ ಲಸಿಕೆ ಪ್ರಮಾಣಪತ್ರದಲ್ಲಿ ಮಾತ್ರ ಪ್ರಧಾನಿ ನರೇಂದ್ರ ಮೋದಿ ಪೋಟೋ ಹಾಕುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಲಸಿಕೆ ಅಭಿಯಾನಕ್ಕೆ ಸಂಪೂರ್ಣ ಯೋಜನೆಯನ್ನು ರೂಪಿಸಿರುವುದಾಗಿ ಆಗಸ್ಟ್ 15ರಂದು ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಹೇಳಿದ್ದರು. ನಾನು ಕೂಡ ಕೇಂದ್ರ ಸರ್ಕಾರ ಲಸಿಕೆ ಅಭಿಯಾನವನ್ನು ಸರಿಯಾದ ರೀತಿಯಲ್ಲಿ ಮಾಡಬಹುದು ಎಂದು ಭಾವಿಸಿದ್ದೆ. ಆದರೆ ಈಗ ಲಸಿಕೆಯ ಎಲ್ಲ ಹೊಣೆ ರಾಜ್ಯ ಸರ್ಕಾರದ ಮೇಲೆ ಹಾಕಿಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ವಾಯುಗಾಮಿ- ಕೇಂದ್ರದ ಪರಿಷ್ಕೃತ ಮಾರ್ಗಸೂಚಿಯಲ್ಲಿ ಏನಿದೆ?
ಭಾರತದ 130 ಕೋಟಿ ಜನಸಂಖ್ಯೆ ಪೈಕಿ ಶೇಕಡ 11ರಷ್ಟು ಜನರು ಮಾತ್ರ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಶೇಕಡ 3ರಷ್ಟು ಜನರು ಎರಡೂ ಡೋಸ್ಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ಕಳೆದ ಒಂದು ತಿಂಗಳಲ್ಲಿ ಲಸಿಕೆ ಪ್ರಮಾಣವು ಶೇಕಡ 83ರಷ್ಟು ಕಡಿಮೆಯಾಗಿದೆ ಎಂದು ಆರೋಪಿಸಿದ್ದಾರೆ.