ಮೋದಿ ಹೊಗಳಿದ ಮುಲಾಯಂ ಸಿಂಗ್ : ಇದರ ಹಿಂದೆ ಹೀಗೊಂದು ರಾಜಕೀಯ ಲೆಕ್ಕಾಚಾರ
Recommended Video
ಬಹುಷಃ ಎಂಬತ್ತು ಲೋಕಸಭಾ ಸೀಟನ್ನು ಉತ್ತರಪ್ರದೇಶ ಹೊಂದಿರುವುದಕ್ಕೋ ಏನೋ, ಅಲ್ಲಿನ ಒಂದೊಂದು ರಾಜಕೀಯ ಬೆಳವಣಿಗೆಗಳು ರಾಷ್ಟ್ರ ಮಟ್ಟದಲ್ಲಿ ಬಹುದೊಡ್ಡ ಸುದ್ದಿಯಾಗುತ್ತದೆ. ಅದೇ ರೀತಿ ಬುಧವಾರ (ಫೆ 13) ಲೋಕಸಭೆಯಲ್ಲಿ ಮಾಜಿ ಉ,ಪ್ರ ಸಿಎಂ ಆಡಿರುವ ಮಾತು.
ದೇಶದ ಸೀಸನ್ ಪೊಲಿಟಿಸಿಯನ್ ಸಾಲಿನಲ್ಲಿ ನಿಲ್ಲುವ ಮತ್ತು ಸಮಾಜವಾದಿ ಪಕ್ಷವನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ ಮುಲಾಯಂ ಸಿಂಗ್ ಯಾದವ್, ಸಂಸತ್ತಿನಲ್ಲಿ ಮೋದಿಯನ್ನು ಹೊಗಳಿದ್ದು ತೀರಾ ಆಶ್ಚರ್ಯಕರ ಸಂಗತಿಯೆಂದೇ ವ್ಯಾಖ್ಯಾನಿಸಬಹುದು.
ಸೋನಿಯಾ ಪಕ್ಕದಲ್ಲೇ ಕುಳಿತು ಮೋದಿ ಪ್ರಧಾನಿ ಆಗಲೆಂದ ಮುಲಾಯಂ!
ಖುದ್ದು ಪ್ರಧಾನಿಯೇ ಮುಲಾಯಂ ಅವರಿಂದ ಈ ಹೊಗಳಿಕೆಯನ್ನು ನಿರೀಕ್ಷಿಸಿರಿಲಿಕ್ಕಿಲ್ಲ. ಅದೂ, ಪಕ್ಕದಲ್ಲೇ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಆಸೀನರಾಗಿದ್ದ ವೇಳೆ ಮುಲಾಯಂ ಅವರಿಂದ ಇಂತಾ ಮಾತು ಬಂದಿದ್ದು, ಏನೇನೋ ರಾಜಕೀಯ ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ.
ಮುತ್ಸದ್ದಿ ಮುಲಾಯಂ ಮಾತಿಗೆ ಹರಿದುಬಂದ ತರಹೇವಾರಿ ಪ್ರತಿಕ್ರಿಯೆ
ದೇಶ, ಸಾರ್ವತ್ರಿಕ ಚುನಾವಣೆಯ ಹೊಸ್ತಿಲಲ್ಲಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಎಲ್ಲಾ ಪಕ್ಷಗಳು ಮೋದಿ ವಿರುದ್ದ ಒಂದಾಗಿರುವುದು. ಈ ನಿರ್ಣಾಯಕ ಕಾಲಘಟ್ಟದಲ್ಲಿ, ಮುಲಾಯಂ, ಮತ್ತೆ ಮೋದಿಯೇ ಪ್ರಧಾನಿಯಾಗಲಿ ಎನ್ನುವ ಮಾತು, ಉತ್ತರಪ್ರದೇಶದ ರಾಜಕೀಯ ಸಮೀಕರಣವನ್ನು ಬದಲಿಸುತ್ತಾ? ಅಥವಾ ಮಗನಿಗೆ ಪಾಠ ಕಲಿಸಲು ಮುಲಾಯಂ ಮುಂದಾಗಿದ್ದಾರಾ? ಹೀಗೊಂದು ರಾಜಕೀಯ ಲೆಕ್ಕಾಚಾರ
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಹೇಗಾಗಿರಬೇಡ!
ಲೋಕಸಭೆ ಚುನಾವಣೆಗೂ ಮುನ್ನ ನಡೆದ ಅಂತಿಮ ಅಧಿವೇಶನದ ಅಂತಿಮ ದಿನ (ಬುಧವಾರ), ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಅವರ ಪಕ್ಕವೇ ಕುಳಿತು ಮುಲಾಯಂ, "ನಾನು ಮೋದಿಯವರಿಗೆ ಅಭಿನಂದನೆ ಸಲ್ಲಿಸಲು ಇಚ್ಛಿಸುತ್ತೇನೆ. ಎಲ್ಲ (ಬಿಜೆಪಿ) ಸಂಸದರು ಮತ್ತೆ ಗೆದ್ದು ಬರಲಿ ಮತ್ತು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿ" ಎಂದು ನುಡಿದಿದ್ದರು. ಸೋನಿಯಾ ಗಾಂಧಿಗೆ ಹೇಗಾಗಿರಬೇಡ!
2012ರಲ್ಲಿ ನಡೆದ ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆ
2012ರಲ್ಲಿ ನಡೆದ ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಿ ಮುಲಾಯಂ ನೇತೃತ್ಬದ ಎಸ್ಪಿ, 224 ಕ್ಷೇತ್ರಗಳನ್ನು ಜಯಿಸುವ ಮೂಲಕ ಅಧಿಕಾರಕ್ಕೇರಿತ್ತು. ಮುಲಾಯಂ ಅವರೇ ಮತ್ತೆ ಸಿಎಂ ಆಗಬೇಕು ಎನ್ನುವ ತೀವ್ರ ಒತ್ತಡದ ನಡುವೆಯೂ, ಮುಲಾಯಂ ಪುತ್ರ ವ್ಯಾಮೋಹ ತೋರಿ, ಅಖಿಲೇಶ್ ಯಾದವ್ ಗೆ ಪಟ್ಟಕಟ್ಟಿದ್ದರು. ಕುಟುಂಬದಲ್ಲಿನ ದಾಯಾದಿ ಕಲಹ ಆರಂಭವಾಗಲು ಅಡಿಪಾಯದ ಇನ್ನೊಂದು ಕಲ್ಲು ಬಿದ್ದಿದ್ದೇ ಇಲ್ಲಿಂದ.
ಹೇಗಿದ್ದ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹೇಗಾಗಿ ಹೋದರು!
ಮುಲಾಯಂ ಕುಟುಂಬದ ಕಲಹ ಬೀದಿರಂಪವಾಯಿತು
ಪುತ್ರ ವ್ಯಾಮೋಹ ಮತ್ತು ಕಿರಿಯ ಸಹೋದರನ ಪ್ರೀತಿ (ಶಿವಪಾಲ್ ಸಿಂಗ್ ಯಾದವ್) ಎರಡನ್ನೂ ಸರಿಯಾಗಿ ತೂಗಲಾಗದಿದ್ದಾಗ, ಮುಲಾಯಂ ಕುಟುಂಬದ ಕಲಹ ಬೀದಿರಂಪವಾಯಿತು. ತಂದೆಯನ್ನೇ ಮಗ, ಮಗನನ್ನೇ ತಂದೆ ಉಚ್ಚಾಟನೆ ಮಾಡುವ ಹಂತಕ್ಕೆ ಬಂತು. ಇನ್ನು ಅಖಿಲೇಶ್ ಚಿಕ್ಕಪ್ಪ ಹೊಸ ಪಕ್ಷವನ್ನೇ ಕಟ್ಟಿಬಿಟ್ಟರು. ಇತ್ತೀಚಿನ ಚುನಾವಣೆಯಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಉತ್ತಮ ಸಾಧನೆ ತೋರಿದ್ದರೂ, ಮೂಲ ಎಸ್ಪಿ ಕಾರ್ಯಕರ್ತರಿಗೆ ಅಖಿಲೇಶ್ ಇಡುತ್ತಿರುವ ಹೆಜ್ಜೆಗೆ ಸಂಪೂರ್ಣ ಬೆಂಬಲವೂ ಇಲ್ಲ ಎನ್ನುವ ಮಾಹಿತಿಯಿದೆ.
ಮುಲಾಯಂ ಸಿಂಗ್, ಉತ್ತರಪ್ರದೇಶದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ
ಹಲವು ಬಾರಿ, ಹಲವು ವೇದಿಕೆಗಳ ಮೂಲಕ, ಅಪ್ಪಮಗನನ್ನು ಒಂದು ಮಾಡಲು ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಗಿದ್ದವು. ತಾನು ನಡೆದಿದ್ದೇ ದಾರಿ ಎನ್ನುವ ರಾಜಕೀಯ ಧೋರಣೆ, ನನ್ನ ರಾಜಕೀಯ ಅನುಭವಕ್ಕೆ ಮಗ ಬೆಲೆಕೊಡುತ್ತಿಲ್ಲ ಎನ್ನುವ ನೋವಿನಲ್ಲೇ ಮುಲಾಯಂ, ತಾನೇ ಕಟ್ಟಿಬೆಳೆಸಿದ ಪಕ್ಷದಲ್ಲಿ ಮೂಲೆಗುಂಪಾದರು. ಆದರೂ.. ಇಂದಿಗೂ.., ಮುಲಾಯಂ ಸಿಂಗ್, ಉತ್ತರಪ್ರದೇಶದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರವಹಿಸಬಲ್ಲರು ಎನ್ನುವ ಕಾರಣಕ್ಕಾಗಿಯೇ, ಸಂಸತ್ತಿನಲ್ಲಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿರುವುದು.
ಮುಲಾಯಂ ಇಂದು ನೀಡಿದ ಒಂದು ಹೇಳಿಕೆ
ಮುಲಾಯಂ ಇಂದು ನೀಡಿದ ಒಂದು ಹೇಳಿಕೆ, ಸಮಾಜವಾದಿ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸದೇ ಇರದು. ಬಿಎಸ್ಪಿ-ಎಸ್ಪಿ ಮೈತ್ರಿಕೂಟ ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲಲಿದೆ ಎನ್ನುವ ಚುನಾವಣಾಪೂರ್ವ ಸಮೀಕ್ಷೆಯ ನಡುವೆ, ಕಾಂಗ್ರೆಸ್ಸಿಗೆ ಪ್ರಿಯಾಂಕ ಎಂಟ್ರಿಯಾಗಿದೆ. ಇದರ ಜೊತೆಗೆ, ಮುಲಾಯಂ ಸಿಂಗ್, ಪ್ರಧಾನಿ ಮೋದಿ ಮೇಲೆ ತೋರಿದ ಪ್ರೀತಿ..
ಮೈತ್ರಿಕೂಟಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ
ಮುಲಾಯಂ, ಮೋದಿಯವರನ್ನು ಹೊಗಳಿದ್ದನ್ನು ಜಮ್ಮು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಎರಡೇ ಪದದಲ್ಲಿ ಸಾವಿರ ಅರ್ಥಬರುವ ಟ್ವೀಟ್ ಅನ್ನು ಮಾಡಿದ್ದಾರೆ. 'ಪೂವರ್ ಅಖಿಲೇಶ್' ಎನ್ನುವ ಓಮರ್ ಟ್ವೀಟ್ ನಲ್ಲಿ, ಮುಲಾಯಂ ಅವರ ಹೇಳಿಕೆ, ಬಿಎಸ್ಪಿ-ಎಸ್ಪಿ ಮೈತ್ರಿಕೂಟಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಬಹುದು ಎನ್ನುವ ಅರ್ಥದಲ್ಲಿತ್ತು.