ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ, ಸಿಗುವುದು ಅನುಮಾನ!
Recommended Video
ನವದೆಹಲಿ, ಮಾರ್ಚ್ 23 : ಕರ್ನಾಟಕ ಸರಕಾರವೇನೋ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ಮಾಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ಸಿಗುವುದು ಅನುಮಾನ.
ಕರ್ನಾಟಕ ಚುನಾವಣೆ ಹತ್ತಿರದಲ್ಲಿಯೇ ಇರುವುದರಿಂದ ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆಯೂ ನಡೆಯಲಿರುವುದರಿಂದ, ಎನ್ಡಿಎ ಸರಕಾರ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರದ ಶಿಫಾರಸಿಗೆ ಸೊಪ್ಪು ಹಾಕುವುದು ಅಸಾಧ್ಯದ ಮಾತಾಗಿದೆ.
ಲಿಂಗಾಯತರ ದಾರಿ ತಪ್ಪಿಸುತ್ತಿರುವ ಬಿಜೆಪಿ, ಕಾಂಗ್ರೆಸ್ ಅಂದು-ಇಂದು
ಬಲ್ಲ ಮೂಲಗಳ ಪ್ರಕಾರ, ಕೇಂದ್ರ ಸಂಪುಟದಲ್ಲಿ ಈ ವಿಷಯ ಚರ್ಚೆಗೀಡಾಗಿದೆ. ಆದರೆ, ಕಾಂಗ್ರೆಸ್ ಪಕ್ಷದ ಈ ಹುನ್ನಾರವನ್ನು ಬಹುತೇಕ ಸದಸ್ಯರು ಒಕ್ಕೊರಲಿನಿಂದ ಬೇಡ ಎಂದು ಹೇಳಿದ್ದಾರೆ. ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಿದರೆ, ದಲಿತ ಪಂಗಡದ ಮೀಸಲಾತಿಗೆ ಧಕ್ಕೆಯಾಗುವುದು ಈ ನಿರ್ಧಾರಕ್ಕೆ ಕಾರಣವಾಗಿದೆ.
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದವರಲ್ಲಿ ಮೊದಲಿಗರು. ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದೂಗಳಾಗಿರುವ ದಲಿತರು, ಸಿಖ್ ಮತ್ತು ಬೌದ್ಧರಿಗೆ ಮಾತ್ರ ಮೀಸಯಾತಿ ಪಡೆಯುತ್ತಿದ್ದಾರೆ.
ಈ ನಡುವೆ, ಕೇಂದ್ರ ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್ ಅವರು, 2013ರಲ್ಲಿಯೇ ಹೇಗೆ ಯುಪಿಎ ಸರಕಾರವೇ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ನೀಡುವುದು ಸಾಧ್ಯವಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು ಎಂದು ಎಂದು ಸಭೆಯಲ್ಲಿ ವಿವರಿಸಿದರು.
ಉಗುರು ಸುತ್ತಾದರೆ ಬೆರಳು ತೆಗೆಯೋಣ ಎಂಬಂತಿದೆ ಲಿಂಗಾಯತ ಪ್ರತ್ಯೇಕ ಧರ್ಮ
ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಟ್ಟರೂ ಸರಿ, ಕೊಡದಿದ್ದರೂ ಸರಿ, ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಒಂದು ವೇಳೆ ಕೇಂದ್ರವೂ ಒಪ್ಪಿದರೆ, ಇದರ ಶ್ರೇಯಸ್ಸನ್ನು ಕಾಂಗ್ರೆಸ್ ಪಡೆದುಕೊಳ್ಳುತ್ತದೆ, ಕೊಡದಿದ್ದರೆ ಕೇಂದ್ರದಿಂದಾಗಿಯೇ ಲಿಂಗಾಯತರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಲು ಸಾಧ್ಯವಾಗಲಿಲ್ಲ ಎಂದ ವಾದ ಮುಂದಿಡಬಹುದು. ಈ ಕಾರಣದಿಂದಾಗಿ ಕರ್ನಾಟಕ ಬಿಜೆಪಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.