ಮೋದಿ ಫೇಲ್: ಲಸಿಕೆ ವಿತರಣೆ ವೈಫಲ್ಯ ಮುಚ್ಚಿಕೊಳ್ಳಲು 'ಉತ್ಸವ'ದ ಉಲ್ಲೇಖ!
ನವದೆಹಲಿ, ಏಪ್ರಿಲ್ 12: ಕೊರೊನಾವೈರಸ್ ಲಸಿಕೆ ವಿತರಣೆಯ ವೈಫಲ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ವಾಕ್ಚಾತುರ್ಯ ಮತ್ತು ಅತಿಶಯೋಕ್ತಿಯ ಮಾತುಗಳಿಂದ ಮರೆ ಮಾಚಲು ನೋಡುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಆರೋಪಿಸಿದ್ದಾರೆ.
ಭಾರತದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಕೆ ನಡುವೆ ಲಸಿಕೆಗೆ ಬೇಡಿಕೆ ಹೆಚ್ಚಾಗಿದೆ. ಕೊರೊನಾವೈರಸ್ ಲಸಿಕೆಯ ಪೂರೈಕೆಯ ವಿಷಯದಿಂದ ತಪ್ಪಿಸಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.
ಮಹಾರಾಷ್ಟ್ರದಲ್ಲಿ ಇದೆಂಥಾ ದುಸ್ಥಿತಿ; ಕೊರೊನಾ ರೋಗಿಗಳಿಗೆ ಕುರ್ಚಿಯಲ್ಲೇ ಚಿಕಿತ್ಸೆ!
ಕೊರೊನಾವೈರಸ್ ಲಸಿಕೆಯ ಉತ್ಪಾದನೆ ಮತ್ತು ದೇಶಾದ್ಯಂತ ಲಸಿಕೆ ಸರಬರಾಜು ವ್ಯವಸ್ಥೆ ಬಲಪಡಿಸಲು ಹಾಗೂ ಅನುಮೋದನೆ ಪಡೆದಿರುವ ಲಸಿಕೆಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಅನುದಾನವನ್ನು ನೀಡಬೇಕು ಎಂದು ಮಾಜಿ ಸಚಿವ ಪಿ ಚಿದಂಬರಂ ಆಗ್ರಹಿಸಿದ್ದಾರೆ.
"ಕೇಂದ್ರ ಸರ್ಕಾರಕ್ಕೆ ಲಸಿಕೆ ವಿತರಣೆಯು ಒಂದು ಉತ್ಸವವೇ?"
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿರುವ ದಿನಗಳಲ್ಲಿ ಲಸಿಕೆ ವಿತರಣೆ ಮಹತ್ತರ ಪಾತ್ರ ವಹಿಸಲಿದೆ. ಕೊವಿಡ್-19 ಲಸಿಕೆ ವಿತರಣೆಯನ್ನು ಪ್ರಧಾನಿ ಮೋದಿ ಅವರು ಉತ್ಸವ ಎಂದು ಕರೆಯುತ್ತಾರೆ. ಯಾವುದೇ ಕಾರಣಕ್ಕೂ ಇದನ್ನು ಹಬ್ಬವೆಂದು ಕಲ್ಪನೆಯಲ್ಲೂ ಎನ್ನಿಸುವುದಕ್ಕೆ ಸಾಧ್ಯವಿಲ್ಲ. ಇದೊಂದು ಧರ್ಮಯುದ್ಧವಾಗಿದೆ ಎಂದು ಪಿ ಚಿದಂಬರಂ ಹೇಳಿದ್ದಾರೆ.
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಹೇಗಿರಬೇಕು?
ಕೊರೊನಾವೈರಸ್ ಲಸಿಕೆ ವಿತರಣೆಯು ಸಾರ್ವತ್ರಿಕವಾಗಿ ನಡೆಯಬೇಕು. ವಾಕ್-ಇನ್ ಕಾರ್ಯಕ್ರಮದ ರೀತಿಯಲ್ಲಿ ನಡೆಯಬೇಕಿರುವ ಲಸಿಕೆ ವಿತರಣೆಯನ್ನು ಯಾವುದೋ ಒಂದು ಸಣ್ಣ ಮೊಬೈಲ್ ಅಪ್ಲಿಕೇಷನ್ ಮೂಲಕ ಮಾಡಲು ಹೊರಟಿದ್ದಾರೆ. ಪೂರ್ವ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಈ ಹಂತದಲ್ಲಿ ಕೇಂದ್ರ ಸರ್ಕಾರ ಲಸಿಕೆ ಉತ್ಪಾದನೆ, ಲಸಿಕೆಗಳ ಸರಬರಾಜು ಸೇರಿದಂತೆ ಎಲ್ಲ ರೀತಿಯ ನಿರ್ವಹಣೆಯಲ್ಲಿ ಆಗಿರುವ ವೈಫಲ್ಯವನ್ನು ಮರೆ ಮಾಚುವುದಕ್ಕಾಗಿ ವಾಕ್ಚಾತುರ್ಯ ಮತ್ತು ಅತಿಶಯೋಕ್ತಿಯ ಮಾತುಗಳನ್ನು ಆಡುತ್ತಿದ್ದಾರೆ ಎಂದು ದೂಷಿಸಿದ್ದಾರೆ.
ಕೊರೊನಾವೈರಸ್ ಲಸಿಕೆ ಸರಬರಾಜಿಗೆ ಅನುದಾನ ನೀಡಿರಿ
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಉತ್ಪಾದನೆ ಮತ್ತು ಸರಬರಾಜು ಹೆಚ್ಚಿಸುವುದಕ್ಕಾಗಿ ಕೇಂದ್ರ ಸರ್ಕಾರ ತತ್ ಕ್ಷಣವೇ ಅನುದಾನವನ್ನು ಬಿಡುಗಡೆ ಮಾಡಬೇಕು. 138 ಕೋಟಿ ಜನಸಂಖ್ಯೆಯ ದೇಶದಲ್ಲಿ ಕೇವಲ ಎರಡು ಮಾದರಿಯ ಲಸಿಕೆ ವಿತರಣೆಗೆ ಅನುಮದೋನೆ ನೀಡಲಾಗಿದೆ. ಇದರಿಂದ ಎಲ್ಲರಿಗೂ ಲಸಿಕೆ ನೀಡುವುದು ದೊಡ್ಡ ಸವಾಲಾಗಲಿದೆ. ಇದರ ಜೊತೆಗೆ ಹೆಚ್ಚು ಹೆಚ್ಚು ಲಸಿಕೆಗಳಿಗೆ ಅನುಮೋದನೆ ನೀಡಬೇಕು. ಆ ಲಸಿಕೆಗಳ ವಿತರಣೆಗೆ ಆರ್ಥಿಕ ನೆರವು ನೀಡಬೇಕು ಎಂದು ಪಿ ಚಿದಂಬರಂ ಹೇಳಿದ್ದಾರೆ.
ಭಾರತದಲ್ಲಿ 3 ದಿನ ಲಸಿಕೆ ಉತ್ಸವ ಎಂದಿದ್ದ ಪ್ರಧಾನಿ
ಕೊರೊನಾವೈರಸ್ ಎರಡನೇ ಅಲೆ ನಿಯಂತ್ರಣಕ್ಕೆ ಲಸಿಕೆ ವೇಗ ಹೆಚ್ಚಿಸುವುದೇ ಉತ್ತಮ ಮಾರ್ಗ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದರು. ಏಪ್ರಿಲ್ 11 ರಿಂದ ಏಪ್ರಿಲ್ 14ರವರೆಗೂ ನಾಲ್ಕು ದಿನ ದೇಶಾದ್ಯಂತ ಲಸಿಕೆ ಉತ್ಸವ ನಡೆಸಲಾಗುತ್ತಿದ್ದು, 45 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿಕೊಂಡಿದ್ದರು.
ಭಾರತದಲ್ಲಿ 10 ಕೋಟಿಗೂ ಅಧಿಕ ಮಂದಿಗೆ ಲಸಿಕೆ
ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 86 ದಿನಗಳಲ್ಲಿ 10 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ. ಭಾನುವಾರ ಒಂದೇ ದಿನ 27,69,888 ಜನರಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 25,47,691 ಫಲಾನುಭವಿಗಳಿಗೆ ಮೊದಲ ಡೋಸ್, 2,22,197 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಈವರೆಗೂ 10,43,65,035 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.