ಅಧಿಕಾರಿಗಳ ಪಂಚತಾರಾ ವಾಸಕ್ಕೆ ಕೇಂದ್ರದ ಬ್ರೇಕ್
ನವದೆಹಲಿ, ಅ. 30: ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳು ಪಂಚತಾರಾ ಹೋಟೆಲ್ ಗಳಲ್ಲಿ ಉಳಿದುಕೊಂಡು, ಐಷಾರಾಮಿ ವಿಮಾನಯಾನ ಮಾಡುತ್ತ ಕಾಲ ದೂಡುವಂತಿಲ್ಲ.
ಕೇಂದ್ರ ಸರ್ಕಾರ ಅನಗತ್ಯ ಖರ್ಚು ವೆಚ್ಚ ತಡೆಗೆ ಗುರುವಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಈ ಎಲ್ಲ ವೆಚ್ಚಗಳಿಗೆ ಬ್ರೇಕ್ ಹಾಕಿದೆ. ಶೇ.10 ಅನಗತ್ಯ ಖರ್ಚು ತಡೆಗೆ ಮುಂದಾಗಿದ್ದು ಹಣಕಾಸು ಸಚಿವಾಲಯ ಈ ಬಗ್ಗೆ ಆದೇಶ ಹೊರಡಿಸಿದೆ.[ಐದು ವರ್ಷದಲ್ಲೇ ಅತಿ ಕಡಿಮೆ ಹಣದುಬ್ಬರ ದಾಖಲು]
ಪಂಚತಾರಾ ಹೊಟೆಲ್ ಗಳಲ್ಲಿ ಉಳಿದುಕೊಂಡು ಮೀಟಿಂಗ್ ಮಾಡುವಂತಿಲ್ಲ. ಅಧಿಕಾರಿಗಳು ನಿರ್ದಿಷ್ಟ ಬಜೆಟ್ ಒಳಗೆ ತಮ್ಮ ಕೆಲಸ ಕಾರ್ಯ ಮುಗಿಸಬೇಕು. ಪ್ರಥಮ ದರ್ಜೆ ಬುಕಿಂಗ್ ಗೂ ಅವಕಾಶವಿಲ್ಲ ಎಂದು ಆದೇಶ ತಿಳಿಸಿದೆ.
ರಕ್ಷಣಾ ಕಾರ್ಯಕ್ಕೆ ಅಗತ್ಯವಿದ್ದರೆ ಮಾತ್ರ ಹೊಸ ವಾಹನಗಳನ್ನು ಖರೀದಿ ಮಾಡಬಹುದು. ಸಂಸದೀಯ ಆಡಳಿತ ಮತ್ತು ಸೆಕ್ಯೂರಿಟಿ ವಿಭಾಗಕ್ಕೆ ವಾಹನ ಖರೀದಿಗೆ ಅವಕಾಶವಿದೆ. ಆದರೆ ಕೆಲ ನಿಬಂಧನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.[ಐದು ವರ್ಷದಲ್ಲೇ ಮೊದಲ ಬಾರಿ ಡಿಸೇಲ್ ದರ ಇಳಿಕೆ]
ಆರ್ಥಿಕ ಅಭಿವೃದ್ಧಿ ದರ ಹೆಚ್ಚಳ, ಸುರಕ್ಷತೆ ಮತ್ತು ಹಣದುಬ್ಬರ ತಡೆಗೆ ಇಂಥ ಕ್ರಮಗಳು ಅನಿವಾರ್ಯವಾಗುತ್ತವೆ. ಇಲ್ಲಿ ಕಳೆದುಕೊಳ್ಳಬೇಕಾದ್ದು ಏನೂ ಇಲ್ಲ. ಸರ್ಕಾರದ ಮಟ್ಟದಿಂದಲೇ ಖರ್ಚು ವೆಚ್ಚ ತಡೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ನಿರಂತರವಾಗಿ ಕುಸಿದು ಹೋಗಿದ್ದ ಭಾರತದ ಆರ್ಥಿಕ ಅಭಿವೃದ್ಧಿ ದರ ಮತ್ತು ರೂಪಾಯಿ ಮೌಲ್ಯ ಇತ್ತೀಚೆಗೆ ಚೇತರಿಕೆ ಹಾದಿ ಹಿಡಿದಿವೆ. ಈಗ ಅನಗತ್ಯ ವೆಚ್ಚತಡೆಗೂ ಮುಂದಾಗಿರುವುದು ಮುಂದಿನ ದಿನಗಳಲ್ಲಿ ದೇಶಕ್ಕೆ ಆಶಾದಾಯಕ ಬೆಳವಣಿಗೆಯಾಗಿ ಪರಿಣಮಿಸಿಲಿದೆ. ಆದರೆ ಆದೇಶದ ಸಮರ್ಪಕ ಅನುಷ್ಠಾನ ಅಷ್ಟೆಮುಖ್ಯ.