ಇಡೀ ವಿಶ್ವಕ್ಕೆ ಬೋಧಿಸಿದ್ದನ್ನು ಇಲ್ಲಿ ಅನುಸರಿಸಿ; ಚಿದಂಬರಂ
ನವದೆಹಲಿ, ಜೂನ್ 14: ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣವನ್ನು "ಸ್ಫೂರ್ತಿದಾಯಕ" ಎಂದು ಕರೆದಿರುವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, "ಇಡೀ ವಿಶ್ವಕ್ಕೇ ಮೋದಿ ಸರ್ಕಾರ ಏನು ಬೋಧಿಸುತ್ತಿದೆಯೋ ಅದನ್ನು ಭಾರತದಲ್ಲಿ ಅನುಸರಿಸಲಿ," ಎಂದು ಹೇಳಿದ್ದಾರೆ.
ಟ್ವಿಟ್ಟರ್ನಲ್ಲಿ ಜಿ7 ಶೃಂಗಸಭೆ ಕುರಿತು ಪ್ರಸ್ತಾಪಿಸಿರುವ ಚಿದಂಬರಂ, "ಜಿ.7 ಶೃಂಗದ ಬಾಹ್ಯ (ಔಟ್ ರೀಚ್) ಅಧಿವೇಶನದಲ್ಲಿ ನೇರವಾಗಿ ಹಾಜರಾಗದ ಏಕೈಕ ಅತಿಥಿ ಎಂದರೆ ನರೇಂದ್ರ ಮೋದಿ. ಯಾಕೆ ಎಂದು ಗೊತ್ತೇ? ನಿಮ್ಮನ್ನೇ ನೀವು ಕೇಳಿಕೊಳ್ಳಿ. ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಭಾರತ ಇನ್ನೂ ಹೊರಗುಳಿದಿದೆ. ಹೆಚ್ಚು ಸೋಂಕಿತರನ್ನು ಹೊಂದಿರುವ ಹಾಗೂ ಕಡಿಮೆ ಜನರಿಗೆ ಲಸಿಕೆ ನೀಡಿದ ದೇಶ ಭಾರತವಾಗಿದೆ," ಎಂದು ಟ್ವೀಟ್ ಮಾಡಿದ್ದಾರೆ.
ಜಿ7 ಶೃಂಗಸಭೆಯಲ್ಲಿ ಮೋದಿ ಪ್ರಸ್ತಾವನೆಗೆ ತಲೆದೂಗಿದ ಮುಖಂಡರು
ಭಾನುವಾರ ಜಿ7 ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ್ದ ಮೋದಿ, ಜಿ7 ದೇಶಗಳಿಗೆ ಭಾರತ ಮಿತ್ರರಾಷ್ಟ್ರವಾಗಿದೆ. ಸರ್ವಾಧಿಕಾರ, ಭಯೋತ್ಪಾದನೆ, ತೀವ್ರಗಾಮಿ, ಆರ್ಥಿಕತೆ ಕುರಿತು ದೇಶಗಳೊಂದಿಗೆ ವಿಚಾರ ವಿನಿಮಯ, ನೆರವು ಹಂಚಿಕೊಂಡಿದೆ ಎಂದು ಹೇಳಿದ್ದರು.
ಕೋವಿಡ್ 19 ಲಸಿಕೆ ಹಕ್ಕು ಸ್ವಾಮ್ಯ, ಪೇಟೆಂಟ್, ಮೂಲ ವಸ್ತು ಪೂರೈಕೆ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಕೋವಿಡ್ ಸಂಬಂಧಿಸಿದ ತಂತ್ರಜ್ಞಾನ, ಸಂಶೋಧನೆ ಹಾಗೂ ಅಭಿವೃದ್ಧಿಯ ಹಕ್ಕು ಸ್ವಾಮ್ಯ, ಪೇಟೆಂಟ್ ಹಿಡಿತದಿಂದ ಹೊರಬರಬೇಕಿದೆ. ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು, ನಿಯಂತ್ರಿಸಲು ವಿಶ್ವ ಮಟ್ಟದಲ್ಲಿ ಮೈತ್ರಿ, ಒಗ್ಗಟ್ಟಿನ ಬಲ ಅಗತ್ಯ ಎಂದು ಹೇಳಿದ್ದರು. ಜಾಗತಿಕವಾಗಿ ಒಂದು ಭೂಮಿ ಒಂದು ಆರೋಗ್ಯ ವಿಧಾನ ಅನುಸರಿಸಬೇಕಿದೆ ಎಂದಿದ್ದರು.
ಯುಕೆ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಹಾಗೂ ಯುಎಸ್ಎ -ಜಿ7 ಪ್ರಮುಖ ರಾಷ್ಟ್ರಗಳಾಗಿವೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳ ನಾಯಕರಿಗೆ ಅತಿಥಿಗಳಾಗಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದ್ದು, ಜೂನ್ 12 ಹಾಗೂ 13ರಂದು ಶೃಂಗಸಭೆ ನಡೆದಿದೆ.