ಹವಾಯಿ ಚಪ್ಪಲಿ ಹಾಕುವವರೂ ವಿಮಾನ ಯಾನ ಮಾಡಬೇಕು: ನರೇಂದ್ರ ಮೋದಿ
ಉಡಾನ್ ಯೋಜನೆ ಅಡಿ ಅಗ್ಗದ ದರದ ವಿಮಾನ ಯಾನಕ್ಕೆ ಶಿಮ್ಲಾದಲ್ಲಿ ಗುರುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಹವಾಯಿ ಚಪ್ಪಲಿ ತೊಡುವವರೂ ವಿಮಾನ ಯಾನ ಮಾಡುವಂತಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ
ಶಿಮ್ಲಾ, ಏಪ್ರಿಲ್ 27: "ಸಣ್ಣ ಸಣ್ಣ ಬಡಾವಣೆಗಳಲ್ಲಿ ಹವಾಯಿ ಚಪ್ಪಲಿ ಹಾಕಿಕೊಳ್ಳುವ ವ್ಯಕ್ತಿ ಕೂಡ ವಿಮಾನ ಯಾನ ಮಾಡುವಂತಾಗಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಲ್ಲಿ ಹೇಳಿದರು. ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ವಿಮಾನ ಯಾನ ಸಾಧ್ಯವಾಗಬೇಕು ಎಂಬ ಬಹು ನಿರೀಕ್ಷಿತ ಉಡಾನ್ ಯೋಜನೆಗೆ ಶಿಮ್ಲಾದ ಜುಬ್ಬರ್ ಹಟ್ಟಿ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಿ, ಮಾತನಾಡಿದರು.
ಏರ್ ಇಂಡಿಯಾದ ಮಹಾರಾಜ ಲೋಗೋ ಬದಲಿಗೆ ಆರ್ ಕೆ ಲಕ್ಷ್ಮಣ್ ಅವರ ಶ್ರೀಸಾಮಾನ್ಯ ಕಾರ್ಟೂನ್ ಬಳಸುವಂತೆ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ನಾನು ಹೇಳಿದ್ದೆ ಎಂದು ಮೋದಿ ಹೇಳಿದರು.[ಮೈಸೂರಿನಲ್ಲಿ ವಿಮಾನಯಾನ ಆರಂಭಿಸಲು ಪ್ರತಾಪ್ ಸಿಂಹ ಮನವಿ]
ಉಡಾನ್ ಯೋಜನೆಯಡಿ ವಿಮಾನ ಯಾನವು ಟ್ಯಾಕ್ಸಿಯಲ್ಲಿ ಪ್ರಯಾಣಿಸಲು ಕಿಲೋಮೀಟರ್ ಗೆ ತಗುಲುವ ವೆಚ್ಚಕ್ಕಿಂತ ಕಡಿಮೆ ಆಗುತ್ತದೆ. ಐದು ವಿಮಾನ ಯಾನ ಕಂಪೆನಿಗಳು ದೆಹಲಿ-ಶಿಮ್ಲಾ, ಕಡಪಾ-ಹೈದರಾಬಾದ್, ನಾಂದೇಡ್-ಹೈದರಾಬಾದ್ ಸೇರಿದಂತೆ 128 ಹೊಸ ಮಾರ್ಗಗಳಲ್ಲಿ ಸಂಚಾರ ನಡೆಸಲಿವೆ. ನಾಂದೇಡ್-ಮುಂಬೈ ಮಧ್ಯೆ ವಿಮಾನ ಯಾನ ಶೀಘ್ರವೇ ಆರಂಭವಾಗಲಿದೆ.
ಟಯರ್ II ಹಾಗೂ ಟಯರ್ III ನಗರಗಳಲ್ಲಿ ಇನ್ನು ಒಂದು ವರ್ಷದಲ್ಲಿ ವಾಣಿಜ್ಯ ಉದ್ದೇಶದ ಮೂವತ್ತು ಹೊಸ ವಿಮಾನ ನಿಲ್ದಾಣಗಳು ಆರಂಭವಾಗಲಿವೆ. ಕಳೆದ ಹಲವು ದಶಕಗಳಿಂದ ದೇಶದಲ್ಲಿ ನಿರ್ಮಿಸಿರುವುದು 70-75 ವಿಮಾನ ನಿಲ್ದಾಣ ಮಾತ್ರ. ದೇಶದ ಪೂರ್ವ ವಲಯದಲ್ಲಿ ಎಷ್ಟೂ ರನ್ ವೇ ಬಳಕೆಯೇ ಆಗಿಲ್ಲ ಎಂದು ಮೋದಿ ಹೇಳಿದರು.[ವಿಮಾನದೊಳಗೆ ವೈಫೈ ಇನ್ನೂ ದೂರದ ಕನಸು]
ಸಿಕ್ ಪುಣ್ಯಕ್ಷೇತ್ರ ದರ್ಶನದ ಸರ್ಕ್ಯೂಟ್ ಶೀಘ್ರದಲ್ಲೇ ಆರಂಭವಾಗಲಿದೆ. ಪ್ರವಾಸೋದ್ಯಮವೋ ಅಥವಾ ಇನ್ಯಾವುದೇ ವ್ಯವಹಾರವನ್ನು ಅಭಿವೃದ್ಧಿಪಡಿಸಬೇಕಿದೆ. ಶಿಮ್ಲಾ ವಿಮಾನ ನಿಲ್ದಾಣವು ಬಹಳ ವರ್ಷಗಳಿಂದ ಬಳಕೆಯಾಗಿರಲಿಲ್ಲ. ಈಗ ಪುನರಾರಂಭ ಆಗಿರುವುದರಿಂದ ಇಲ್ಲಿನ ಪ್ರವಾಸೋದ್ಯಮ ಅವಕಾಶ ಮುಂಬರುವ ದಿನಗಳಲ್ಲಿ ದುಪ್ಪಟ್ಟು ಆಗುತ್ತದೆ ಎಂದು ಅವರು ಹೇಳಿದರು.
ವಾಯವ್ಯ ಭಾರತದ ಇತರೆ ಸುಂದರ ಪ್ರವಾಸಿ ಸ್ಥಳಗಳಿಗೆ ತೆರಳಲು ಪ್ರಯಾಣ ವ್ಯವಸ್ಥೆ ಅಷ್ಟು ಚೆನ್ನಾಗಿಲ್ಲ. ಸಾಂಸ್ಕೃತಿಕವಾಗಿಯೂ ಈ ಪ್ರದೇಶಗಳು ದೇಶದ ಇತರ ಭಾಗಗಳ ಜತೆಗೆ ಬೆಸೆಯುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಪ್ರಧಾನಿ ಹೇಳಿದರು.[ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಏರ್ ಕಾರ್ನಿವಲ್ ವಿಮಾನ]
ಬಿಲಸ್ ಪುರ್ ನಲ್ಲಿ ಆರಂಭವಾಗುವ ರಾಜ್ಯದ ಮೊದಲ ಹೈಡ್ರೋ ಎಂಜಿನಿಯರಿಂಗ್ ಕಾಲೇಜನ್ನು ಶಿಮ್ಲಾ ವಿಮಾನ ನಿಲ್ದಾಣದಲ್ಲೇ ಮೋದಿ ಉದ್ಘಾಟಿಸಿದರು. ಹಿಮಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರದಲ್ಲಿ ಪವನ ಶಕ್ತಿ ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ಅವಕಾಶ ವಿಫುಲವಾಗಿದೆ. ಇದರಿಂದ ಈ ರಾಜ್ಯಗಳಲ್ಲಿನ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಅನುಕೂಲವಾಗುತ್ತದೆ ಎಂದರು.