ನರೇಂದ್ರ ಮೋದಿಗೆ ಮುಸ್ಲಿಮರನ್ನು ಕಂಡರಾಗದು: ಶಶಿ ತರೂರ್
ನವದೆಹಲಿ, ಆಗಸ್ಟ್ 6: ಸ್ವಾಮಿ ವಿವೇಕಾನಂದರು ಈಗ ಇದ್ದಿದ್ದರೆ ಅವರ ಮೇಲೆಯೂ ದಾಳಿಯಾಗುತ್ತಿತ್ತು ಎಂದು ಹೇಳಿಕೆ ನೀಡಿ ಸೋಮವಾರ ಬೆಳಿಗ್ಗೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಸ್ಲಿಂ ಸಮುದಾಯವನ್ನು ಕಂಡರೆ ಆಗುವುದಿಲ್ಲ' ಎಂದು ಶಶಿ ತರೂರ್ ಹೇಳಿದ್ದಾರೆ.
ಕೇರಳದ ತಿರುವನಂತಪುರಂನಲ್ಲಿ ಉಪನ್ಯಾಸವೊಂದರಲ್ಲಿ ಅವರು ಮಾತನಾಡಿದರು.
ಹಿಂದುತ್ವದಲ್ಲಿ ತಾಲಿಬಾನ್: ಶಶಿ ತರೂರ್ ಹೊಸ ವಿವಾದ!
'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬುದು ಪಕ್ಷದ ಘೋಷಣೆಯಾದರೂ ಪ್ರಧಾನಿ ಮೋದಿ ನಿರ್ದಿಷ್ಟ ಸಮುದಾಯವನ್ನು ಇಷ್ಟಪಡುವುದಿಲ್ಲ ಮತ್ತು ಅವರ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ' ಎಂದು ತರೂರ್ ಹೇಳಿದ್ದಾರೆ.
ದಿರಿಸು ತೊಡುವುದಿಲ್ಲ
ನನ್ನ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಅಗತ್ಯವಿಲ್ಲ. ಏಕೆಂದರೆ ಅದು ಒಂದು ಗ್ರಹಿಕೆಯಷ್ಟೇ. ಪ್ರಧಾನಿ ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿನ ವಿವಿಧ ಬಗೆಯ ಟೊಪ್ಪಿಗಳು ಹಾಗೂ ಉಡುಪುಗಳನ್ನು ತೊಡುತ್ತಾರೆ. ಆದರೆ, ಅವರು ಎಂದಿಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಉಡುಪನ್ನು ಧರಿಸುವುದಿಲ್ಲ ಎಂದು ತರೂರ್ ಹೇಳಿದ್ದಾರೆ.
ಸಬ್ ಕಾ ಸಾಥ್...
ಪ್ರಧಾನಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಆದರೆ, ಅದಕ್ಕೆ ತದ್ವಿರುದ್ಧವಾಗಿ ಎಲ್ಲವೂ ನಡೆಯುತ್ತಿವೆ. ಅವರು ದೇಶದ ಎಲ್ಲ ನಾಗರಿಕರಿಗೂ ಪ್ರಧಾನಿಯಾಗಿರಬೇಕು. ಅವರು ಸೆಲೆಕ್ಟಿವ್ ಆಗಬಾರದು. ಆದರೂ ಅವರು ಅದನ್ನು ಮಾಡುತ್ತಿದ್ದಾರೆ. ಇದು ಅವರ ಬಗ್ಗೆ ಏನನ್ನು ಹೇಳುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಉತ್ತರಕ್ಕಾಗಿ ಕಾಯುತ್ತಿದ್ದೇನೆ
ಇದು ತಮ್ಮ ಕಡೆಯಿಂದ ಉದ್ಭವಿಸಿರುವ ಒಂದು ಗ್ರಹಿಕೆ. ಆದರೆ ಅದಕ್ಕೆ ಉತ್ತರಕ್ಕಾಗಿ ಕಾಯುತ್ತಿರುವುದಾಗಿ ಶಶಿ ತರೂರ್ ಹೇಳಿದ್ದಾರೆ. ಬಿಜೆಪಿಯು ಹಿಂದುತ್ವದಲ್ಲಿ ತಾಲಿಬಾನ್ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ತರೂರ್, ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತವು ಹಿಂದೂ ಪಾಕಿಸ್ತಾನವಾಗಲಿದೆ ಎಂದಿದ್ದರು.
ಕೋಮು ಹಿಂಸಾಚಾರ ಹೆಚ್ಚಳ
ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ತರೂರ್, ಕಳೆದ ನಾಲ್ಕು ವರ್ಷಗಳಲ್ಲಿ ಕೋಮು ಹಿಂಸಾಚಾರ ಹಾಗೂ ಗೋರಕ್ಷಣೆ ಹೆಸರಿನಲ್ಲಿ ಹತ್ಯೆಗಳು ಹೆಚ್ಚಳವಾಗಿವೆ ಎಂದರು.
ನಾಲ್ಕು ವರ್ಷಗಳಲ್ಲಿ ಗೃಹಸಚಿವಾಲಯದ ವರದಿ ಪ್ರಕಾರ ದೇಶದಲ್ಲಿ 2,920 ಕೋಮು ಹಿಂಸಾಚಾರಗಳು ನಡೆದಿವೆ. 389 ಮಂದಿ ಮೃತಪಟ್ಟಿದ್ದಾರೆ. ಇಂತಹ ಘಟನೆಗಳು ಹೆಚ್ಚಾದರೂ ಮೋದಿ ಇದರ ಬಗ್ಗೆ ಬಹಿರಂಗವಾಗಿ ಖಂಡಿಸುತ್ತಿಲ್ಲ ಎಂದು ಆರೋಪಿಸಿದರು.
ವಿವೇಕಾನಂದರ ಮೇಲೆಯೂ ಹಲ್ಲೆಯಾಗುತ್ತಿತ್ತು
ನನಗೆ ಗೊತ್ತು. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು ಭಾರತಕ್ಕೆ ಬಂದರೆ ಅವರ ಮೇಲೆ ಕೂಡ ದಾಳಿ ನಡೆಯುತ್ತದೆ. ಅವರ ಮೇಲೆ ಎಂಜಿನ್ ಆಯಿಲ್ ಎರಚುತ್ತಾರೆ. ರಸ್ತೆಯಲ್ಲಿಯೇ ಹೊಡೆಯುತ್ತಾರೆ. ಏಕೆಂದರೆ ಅವರು ಜನರನ್ನು ಗೌರವಿಸಿ ಮತ್ತು ಮಾನವೀಯತೆ ಮುಖ್ಯ ಎಂದು ಹೇಳಿದ್ದಾರೆ ಎಂದು ತರೂರ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
|
ನಾಗಾ ದಿರಿಸಿನ ಅವಹೇಳನೆ
ಮೋದಿಯನ್ನು ಟೀಕಿಸುವ ಭರದಲ್ಲಿ ಶಶಿ ತರೂರ್ ನೀಡಿದ ಹೇಳಿಕೆ ಈಶಾನ್ಯ ಭಾಗದ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮೋದಿ ಬೇರೆ ಬೇರೆ ಸ್ಥಳಗಳಿಗೆ ಹೋದಾಗ ಅಲ್ಲಿನ ಉಡುಪು ಧರಿಸುತ್ತಾರೆ ಎಂದಿದ್ದ ತರೂರ್, ವಿಲಕ್ಷಣವಾದ ಟೊಪ್ಪಿಗಳನ್ನು ತೊಡುತ್ತಾರೆ ಆದರೆ, ಮುಸ್ಲಿಂ ಟೊಪ್ಪಿ ಧರಿಸಲು ನಿರಾಕರಿಸುತ್ತಾರೆ ಎಂದಿದ್ದರು.
ತರೂರ್ ಟೀಕಿಸಿದ ಟೊಪ್ಪಿ ನಾಗಾಲ್ಯಾಂಡ್ನ ಸಾಂಪ್ರದಾಯಿಕ ನಾಗಾ ದಿರಿಸಾಗಿದೆ. ಅದು ಅವರ ಸಾಂಸ್ಕೃತಿಕ ಪರಂಪರೆಯಲ್ಲಿ ಬಹು ಪ್ರಾಮುಖ್ಯ ಪಡೆದಿದೆ.