ಆರ್ಬಿಐ ಬೋರ್ಡ್ ಸಭೆ ನಡೆದಿರುವಾಗ ರಾಹುಲ್ ಗಾಂಧಿ ಮಾತಿನ ಕಿಡಿ
ನವದೆಹಲಿ, ನವೆಂಬರ್ 19 : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಊರ್ಜಿತ್ ಪಟೇಲ್ ಮತ್ತು ಅವರ ತಂಡಕ್ಕೆ ಗಟ್ಟಿ ಗುಂಡಿಗೆಯಿದೆ ಎಂದು ತಿಳಿದಿದ್ದೇನೆ. ಅವರು ನರೇಂದ್ರ ಮೋದಿಯವರಿಗೆ ಅವರ ಸ್ಥಾನ ಯಾವುದೆಂದು ತಿಳಿಸಲಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಕೆಣಕುವಂಥ ಹೇಳಿಕೆ ನೀಡಿದ್ದಾರೆ.
ಸೆಂಟ್ರಲ್ ಬ್ಯಾಂಕ್ ನ ಬೋರ್ಡ್ ಮೀಟಿಂಗ್ ನಡೆಯುತ್ತಿರುವ ಸಂದರ್ಭದಲ್ಲಿ, ಮತ್ತೆ ಕೇಂದ್ರದ ಕಾಲೆಳೆದಿರುವ ರಾಹುಲ್ ಗಾಂಧಿ ಅವರು, ನರೇಂದ್ರ ಮೋದಿ ಅವರು ಸಹೋದ್ಯೋಗಿಗಳು ತಮ್ಮ ದಾರಿಗೆ ಬರುವ ಎಲ್ಲ ಸಂಸ್ಥೆಗಳನ್ನು ಸರ್ವನಾಶ ಮಾಡುತ್ತಿದ್ದಾರೆ. ಇವತ್ತು ಬೋರ್ಡ್ ನಲ್ಲಿರುವ ತಮ್ಮ ಸೂತ್ರದ ಗೊಂಬೆಗಳ ಸಹಾಯದಿಂದ ಆರ್ಬಿಐಯನ್ನೇ ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಕೆಂಡ ಕಾರಿದ್ದಾರೆ.
ಹಿಂದೆಂದೂ ಬಳಸದ ಆರ್ ಬಿಐ ಕಾಯ್ದೆಯ ಸೆಕ್ಷನ್ 7 ಈಗಿನ ಸರಕಾರಕ್ಕೆ ಏಕೆ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಾರ್ಯನಿರ್ವಹಣೆಯಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಸೆಂಟ್ರಲ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಮತ್ತು ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅವರು ಬಹಿರಂಗವಾಗಿಯೇ ತೊಡೆ ತಟ್ಟಿರುವುದರಿಂದ ಉದ್ಭವವಾಗಿರುವ ಬಿಕ್ಕಟ್ಟನ್ನು ಶಮನ ಮಾಡಲು ಅತ್ಯಂತ ಮಹತ್ವಪೂರ್ಣವಾದ ಸಭೆ ಸೋಮವಾರ ನಡೆಯುತ್ತಿದೆ.
ಬೋರ್ಡ್ ನಲ್ಲಿ ಒಟ್ಟು 18 ಸದಸ್ಯರಿದ್ದು, ಸರಕಾರಿ ಆಡಳಿತ ಮಂಡಳಿಯಿಂದ ಐವರು, ಇಬ್ಬರು ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳು, ಇಬ್ಬರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಸಂಪರ್ಕ ಇರುವವರು, ವ್ಯಾಪಾರ ಹಿನ್ನೆಲೆಯಿರುವ ನಾಲ್ವರು ಮತ್ತು ಉಳಿದ ಐವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಊರ್ಜಿತ್ ಪಟೇಲ್ ಮತ್ತು ನಾಲ್ವರು ಡೆಪ್ಯುಟಿ ಗವರ್ನರ್.
ಊರ್ಜಿತ್ ಪಟೇಲ್ ರಾಜೀನಾಮೆ ಇಲ್ಲ?: ಬಿಕ್ಕಟ್ಟಿಗೆ ತೇಪೆ ಹಚ್ಚಲು ಸರ್ಕಾರದ ಪ್ರಯತ್ನ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಾರ್ಯನಿರ್ವಹಣೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಆದರೆ, ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಸಣ್ಣ ಉದ್ದಿಮೆದಾರರಿಗೆ ಅನುಕೂಲವಾಗಲೆಂದು ಪಾಲಿಸಿಯಲ್ಲಿ ಬದಲಾವಣೆ ಮಾಡಬೇಕೆಂದು ಕೇಂದ್ರ ಆಗ್ರಹಿಸಿತ್ತು. ಇದಕ್ಕೆ ಪ್ರತಿಯಾಗಿ, ಸೆಂಟ್ರಲ್ ಬ್ಯಾಂಕ್ ನಲ್ಲಿ ಕೇಂದ್ರ ಹಸ್ತಕ್ಷೇಪ ಮಾಡಿದರೆ ದೇಶದ ಆರ್ಥಿಕ ವ್ಯವಸ್ಥೆಗೆ ಬೆಂಕಿ ಬೀಳುತ್ತದೆ ಎಂದು ವಿರಲ್ ಆಚಾರ್ಯ ಅವರು ಬಹಿರಂಗವಾಗಿ ಗುಡುಗಿದ್ದರು.
ಆರ್ ಬಿಐ ಗವರ್ನರ್ ಹುದ್ದೆಗೆ ನ. 19ರಂದು ಊರ್ಜಿತ್ ಪಟೇಲ್ ರಾಜೀನಾಮೆ?
ಈ ನಿಟ್ಟಿನಲ್ಲಿ ಈ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ. ಷೇರು ಮಾರುಕಟ್ಟೆ ಮತ್ತು ವಿಶ್ಲೇಷಕರು ಕೂಡ ಈ ಸಭೆಯ ತೀರ್ಮಾನವನ್ನು ಅತ್ಯಂತ ಜಾಗರೂಕತೆಯಿಂದ ಎದುರು ನೋಡುತ್ತಿದ್ದಾರೆ. ಲೋಕಸಭೆ ಚುನಾವಣೆ ಇನ್ನು ಕೆಲವೇ ತಿಂಗಳು ಇರುವುದರಿಂದ ಕೇಂದ್ರ ಸರಕಾರ ತನ್ನ ಬೇಡಿಕೆಗಳಿಂದ ಹಿಂದೆ ಸರಿಯಲಿದೆ ಮತ್ತು ತನ್ನ ಹಿಡಿತವನ್ನು ಸಡಿಸಲಿದೆ ಎಂದೂ ಹೇಳಲಾಗುತ್ತಿದೆ.