ಗೋಹತ್ಯೆ ನಿಂತರೆ ಗುಂಪು ಹತ್ಯೆಯೂ ನಿಲ್ಲುತ್ತದೆ: ಆರೆಸ್ಸೆಸ್ ಮುಖಂಡನ ವಿವಾದ
ರಾಂಚಿ, ಜುಲೈ 24: ದೇಶದೆಲ್ಲೆಡೆ ವ್ಯಾಪಕವಾಗುತ್ತಿರುವ ಗುಂಪು ಹತ್ಯೆಯ ವಿರುದ್ಧ ಆಕ್ರೋಶ, ಪ್ರತಿಭಟನೆಗಳು ವ್ಯಕ್ತವಾಗುತ್ತಿರುವುದರ ಬೆನ್ನಲ್ಲೇ, ಅದರ ತಡೆಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ.
ಆದರೆ, ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ಗುಂಪು ಹತ್ಯೆಗೆ ಸಂಬಂಧಿಸಿದಂತೆ ಹೊಸ ವಿವಾದ ಸೃಷ್ಟಿಸಿದ್ದಾರೆ.
ಅಲ್ವಾರ್ ಹತ್ಯೆ: ವ್ಯಕ್ತಿ ಪ್ರಾಣಕ್ಕಿಂತ ಗೋವುಗಳು ಮುಖ್ಯವಾದವೇ ಪೊಲೀಸರಿಗೆ?
ಗೋಹತ್ಯೆಯ ಪಾಪಗಳು ಅಂತ್ಯಗೊಂಡರೆ ಗುಂಪು ಹತ್ಯೆಯ ಸಮಸ್ಯೆಯೂ ಅಂತ್ಯಗೊಳ್ಳುತ್ತದೆ ಎಂದು ಇಂದ್ರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಪೋಸ್ಟ್ ಮಾರ್ಟಂ ವರದಿ : ಹಲ್ಲೆ ಆಘಾತದಿಂದಲೇ ರಕ್ಬರ್ ಸಾವು!
ರಾಜಸ್ಥಾನದ ಅಲ್ವಾರ್ ಎಂಬಲ್ಲಿ ಗೋಕಳ್ಳನೆಂದು ಭಾವಿಸಿ ಯುವಕನೊಬ್ಬನನ್ನು ಜನರ ಗುಂಪು ಹೊಡೆದು ಸಾಯಿಸಿದ ಘಟನೆ ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಸಂದರ್ಭದಲ್ಲಿ ಇಂದ್ರೇಶ್ ಕುಮಾರ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಎಲ್ಲರಿಗೂ ಗೋವು ಪವಿತ್ರ
ಜೀಸಸ್ ಹುಟ್ಟಿದ್ದು ದನದ ಕೊಟ್ಟಿಗೆಯಲ್ಲಿ. ಹೀಗಾಗಿ ಕ್ರೈಸ್ತ ಧರ್ಮದಲ್ಲಿ ತಾಯಿ ಹಸುವಿನ ಕುರಿತು ಮಾತನಾಡುತ್ತಾರೆ. ಮೆಕ್ಕಾ-ಮದೀನಾಗಳಲ್ಲಿ ಗೋಹತ್ಯೆ ಅಪರಾಧ.
ಈ ಪಾಪದಿಂದ ಮಾನವಕುಲವನ್ನು ಮುಕ್ತಗೊಳಿಸಲು ಗೋವುಗಳನ್ನು ಕೊಲ್ಲುವುದಿಲ್ಲ ಎಂದು ಪ್ರತಿಜ್ಞೆ ಮಾಡಲು ನಮ್ಮಿಂದ ಸಾಧ್ಯವಿಲ್ಲವೇ? ಈ ಸಮಸ್ಯೆ ಬಗೆಹರಿದರೆ ಗುಂಪು ಹತ್ಯೆಯೆಡೆಗಿನ ನಮ್ಮ ಸಮಸ್ಯೆಯೂ ಬಗೆಹರಿಯುತ್ತದೆ ಎಂದು ಇಂದ್ರೇಶ್ ಹೇಳಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಲ್ಲ
ಜಾರ್ಖಂಡ್ನ ಪಾಕುರ್ನಲ್ಲಿ ಕಳೆದ ವಾರ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರ ಮೇಲೆ ನಡೆದ ಹಲ್ಲೆಯನ್ನು ಇಂದ್ರೇಶ್ ಖಂಡಿಸಿದ್ದಾರೆ.
'ಈ ಹಲ್ಲೆ ತಪ್ಪು ಮತ್ತು ಖಂಡನಾರ್ಹ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರಿಗೂ ಇತರರ ಭಾವನೆಗಳಿಗೆ ಧಕ್ಕೆ ತರಲು ಹಕ್ಕಿಲ್ಲ' ಎಂದು ಹೇಳಿದರು.
ಯಾವುದೇ ರೀತಿಯ ಗುಂಪು ಹತ್ಯೆ ಘಟನೆ ಖಂಡನಾರ್ಹ ಎಂದಿರುವ ಅವರು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟುಮಾಡುವವರ ವಿರುದ್ಧ ಕಠಿಣ ಕಾನೂನು ರೂಪಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಮುಸ್ಲಿಂ ಮುಖಂಡರ ಖಂಡನೆ
ಇಂದ್ರೇಶ್ ಹೇಳಿಕೆಗೆ ವಿವಿಧೆಡೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಗೋಮಾಂಸ ಭಕ್ಷಣೆ ಮಾಡುತ್ತಿದ್ದಾರೆಂಬ ಶಂಕೆಯಲ್ಲಿ ಅಮಾಯಕ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆ ಬಗ್ಗೆ ಆರೆಸ್ಸೆಸ್ ಚಿಂತನೆ ನಡೆಸಬೇಕಿದೆ ಎಂದು ಮಹಾರಾಷ್ಟ್ರ ಜಮಾಯತ್ ಉಲಾಮ ಐ ಹಿಂದ್ ಮುಖಂಡ ಗುಲ್ಜಾರ್ ಅಜ್ಮಿ ಹೇಳಿದ್ದಾರೆ.
ಹಾಲು ಮಾರಲು ಮತ್ತು ಇತರೆ ಉತ್ಪನ್ನಗಳಿಗಾಗಿ ತಮ್ಮೊಂದಿಗೆ ಹಸು ಕರೆದೊಯ್ಯುವ ಮುಸ್ಲಿಂ ಪುರುಷರ ಮೇಲೆ ಹಲ್ಲೆ ನಡೆಸಿ ಕ್ರೂರವಾಗಿ ಕೊಂದು ಹಾಕಲಾಗುತ್ತಿದೆ. ಭಾರತದಲ್ಲಿ ಇಂತಹ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿದೆ ಎಂಬುದನ್ನು ಆರೆಸ್ಸೆಸ್ ಸದಸ್ಯರು ಯೋಚಿಸಬೇಕು ಎಂದಿದ್ದಾರೆ.
ಗುಂಪು ಹತ್ಯೆಗೆ ರಾಜನಾಥ್ ಖಂಡನೆ
ದೇಶದ ವಿವಿಧೆಡೆ ನಡೆಯುತ್ತಿರುವ ಗುಂಪು ಹತ್ಯೆ ಘಟನೆಗಳನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಖಂಡಿಸಿದ್ದಾರೆ.
ಲೋಕಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಈ ವಿಚಾರದ ಬಗ್ಗೆ ಕೇಂದ್ರ ಸರ್ಕಾರ ಕಳವಳ ಹೊಂದಿದೆ. ಈ ವಿಚಾರದ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಹತ್ಯೆಗಳು ಇತ್ತೀಚೆಗೆ ಆರಂಭವಾಗಿರುವುದಲ್ಲ. ಅದು ಅನೇಕ ವರ್ಷಗಳಿಂದ ನಡೆಯುತ್ತಿದೆ. ಇದನ್ನು ಈ ಹಿಂದೆಯೂ ಹೇಳಿದ್ದೆ. ಅತಿ ದೊಡ್ಡ ಗುಂಪು ಹತ್ಯೆಗಳು ನಡೆದಿದ್ದು 1984ರಲ್ಲಿ ಎಂದು ಸಿಖ್ ದಂಗೆಯ ಹತ್ಯಾಕಾಂಡವನ್ನು ಅವರು ಮತ್ತೆ ಪ್ರಸ್ತಾಪಿಸಿದರು.
|
ನಾನು ತಪ್ಪು ಮಾಡಿದೆ, ಶಿಕ್ಷಿಸಿ
ಅಲ್ವಾರ್ ಗುಂಪು ಹತ್ಯೆ ಪ್ರಕರಣದಲ್ಲಿ ಗಾಯಾಳುವನ್ನು ಮೂರೂವರೆ ಗಂಟೆ ತಡವಾಗಿ ಆಸ್ಪತ್ರೆಗೆ ದಾಖಲಿಸಿದ್ದ ಪೊಲೀಸರಲ್ಲಿ ಒಬ್ಬರು ಕ್ಷಮೆ ಕೋರಿದ್ದಾರೆ.
ಪ್ರಕರಣದಲ್ಲಿ ಅಮಾನತುಗೊಂಡಿರುವ ಸಹಾಯಕ ಸಬ್ ಇನ್ಸ್ಪೆಕ್ಟರ್ ಮೋಹನ್ ಸಿಂಗ್ ತಪ್ಪೊಪ್ಪಿಕೊಂಡಿದ್ದಾರೆ. 'ಹೌದು. ಅದು ನನ್ನ ತಪ್ಪು ಎಂದು ಒಪ್ಪಿಕೊಳ್ಳುತ್ತೇನೆ. ಈಗ ನನ್ನನ್ನು ಶಿಕ್ಷಿಸಿ. ನನಗೆ ಏನು ಬೇಕಾದರೂ ಮಾಡಿ. ನಾನು ತಪ್ಪು ಮಾಡಿದ್ದೇನೆ' ಎಂದು ಮೋಹನ್ ಸಿಂಗ್ ತಪ್ಪೊಪ್ಪಿಕೊಳ್ಳುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಗೋವನ್ನು 'ರಾಷ್ಟ್ರ ಮಾತೆ' ಎಂದು ಘೋಷಿಸಿ
ಗೋವಿಗೆ 'ರಾಷ್ಟ್ರ ಮಾತೆ' ಎಂಬ ಮಾನ್ಯತೆ ಸಿಗುವವರೆಗೂ ಹತ್ಯೆಯ ಘಟನೆಗಳು ನಿಲ್ಲುವುದಿಲ್ಲ ಎಂದು ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜ ಸಿಂಗ್ ಲೋಧ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ನೀಡಿರುವ ಲೋಧ್, ಈ ರೀತಿ ರಕ್ತ ಹರಿಸುತ್ತಿರುವುದ ತಮಗೆ ಇಷ್ಟವಿಲ್ಲ. ಆದರೆ, ಇದನ್ನು ತಡೆಯಬೇಕೆಂದರೆ ಗೋವನ್ನು ದೇಶದ ತಾಯಿ ಎಂದು ಘೋಷಣೆ ಮಾಡಬೇಕು ಎಂದು ಹೇಳಿದ್ದಾರೆ.
ಗೋವಿಗೆ ರಾಷ್ಟ್ರ ಮಾತೆ ಎಂಬ ಮಾನ್ಯತೆ ನೀಡುವವರೆಗೂ ಗೋರಕ್ಷಕರನ್ನು ಜೈಲಿಗಟ್ಟಿದರೂ ಅಥವಾ ಅವರ ಮೇಲೆ ಗುಂಡುಗಳನ್ನು ಹಾರಿಸಿದರೂ ಗೋರಕ್ಷಣೆಯ ಯುದ್ಧ ನಿಲ್ಲುವುದಿಲ್ಲ ಎಂದು ಅವರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.
ಎಂಎಲ್ಎ ಸಾಹೇಬರು ನಮ್ಮ ಜತೆಗಿದ್ದಾರೆ
'ಎಂಎಲ್ಎ ನಮ್ಮ ಜತೆಗಿದ್ದಾರೆ. ನಮಗೆ ಯಾರೂ ಏನನ್ನೂ ಮಾಡಲಾರರು. ಆತನನ್ನು (ರಕ್ಬರ್) ಬೆಂಕಿಗೆ ಹಾಕಿ' ಇದು ರಾಜಸ್ಥಾನದ ಅಲ್ವಾರ್ನಲ್ಲಿ ನಡೆದ ಹತ್ಯೆಯ ವೇಳೆ ಗೋರಕ್ಷಕರು ಹೇಳಿದ ಮಾತು.
ಹತ್ಯೆಯಾದ ರಕ್ಬರ್ನ ಸ್ನೇಹಿತ ಹಾಗೂ ಘಟನೆಯ ಪ್ರತ್ಯಕ್ಷದರ್ಶಿ ಅಸ್ಲಾಂ ನೀಡಿರುವ ಪೊಲೀಸ್ ದೂರಿನಲ್ಲಿ ಈ ಹೇಳಿಕೆ ದಾಖಲಿಸಿದ್ದಾನೆ.
ಗೋ ರಕ್ಷಕರನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದ ಸ್ಥಳೀಯ ಬಿಜೆಪಿ ಶಾಸಕ ಗ್ಯಾನದೇವ್ ಅಹುಜಾ, ಹತ್ಯೆಗೆ ಪೊಲೀಸರೇ ಕಾರಣ ಎಂದು ಆರೋಪಿಸಿದ್ದರು.
ಗೋರಕ್ಷಕರು ಸಾಯುವಷ್ಟು ತೀವ್ರವಾಗಿ ಹೊಡೆದಿರಲಿಲ್ಲ. ಆದರೆ, ಪೊಲೀಸರು ಆತನಿಗೆ ಥಳಿಸಿ ಸಾಯುವಂತೆ ಮಾಡಿದ್ದರು ಎಂದು ಶಾಸಕ ಹೇಳಿಕೆ ನೀಡಿದ್ದರು.