ಅತ್ಯಾಚಾರ ಆರೋಪಿಗಳನ್ನು ಬೆಂಬಲಿಸಿದ ಶಾಸಕನಿಗೆ ಸಚಿವ ಸ್ಥಾನ!
ಜಮ್ಮು, ಮೇ 1: ಕತುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿದ್ದ ಶಾಸಕ ಈಗ ಜಮ್ಮು ಮತ್ತು ಕಾಶ್ಮೀರದ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರದ ಸಚಿವ.
ಅತ್ಯಾಚಾರ ಘಟನೆಯ ಆರೋಪಿಗಳನ್ನು ಬೆಂಬಲಿಸಿ ಸಂಘಟನೆಯೊಂದು ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿತ್ತು. ಅದರಲ್ಲಿ ಕತುವಾ ಶಾಸಕ ರಾಜೀವ್ ಜಸ್ರೋಟಿಯಾ ಕೂಡ ಭಾಗವಹಿಸಿದ್ದರು. ಸೋಮವಾರ ನಡೆದ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಸಂಪುಟ ಪುನರ್ರಚನೆ ವೇಳೆ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿಯ ಆರು ಸದಸ್ಯರಲ್ಲಿ ರಾಜೀವ್ ಕೂಡ ಒಬ್ಬರು.
ಕತುವಾ ಅತ್ಯಾಚಾರ 'ಚಿಕ್ಕ ಘಟನೆ': ಮೊದಲ ದಿನವೇ ಹೊಸ ಡಿಸಿಎಂ ವಿವಾದ
ಅತ್ಯಾಚಾರ ಆರೋಪಿಗಳನ್ನು ಬೆಂಬಲಿಸಿ ನಡೆದ ಹಿಂದೂ ಏಕ್ತಾ ಮಂಚ್ ಸಮಾವೇಶದಲ್ಲಿ ಸಚಿವರಾದ ಲಾಲ್ ಸಿಂಗ್ ಮತ್ತು ಚಂದರ್ ಪ್ರಕಾಶ್ ಗಂಗಾ ಭಾಗವಹಿಸಿದ್ದಲ್ಲದೆ, ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದ್ದರು. ಆರೋಪಿಗಳನ್ನು ಬೆಂಬಲಿಸಿದ್ದ ಅವರು, ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಇದು ರಾಷ್ಟ್ರದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಅದರ ಬೆನ್ನಲ್ಲೇ ಇಬ್ಬರೂ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ರಾಜೀವ್ ಜಸ್ರೋಟಿಯಾ ಸಹ ಪಾಲ್ಗೊಂಡಿದ್ದರು. ಆದರೆ, ಭಾಷಣ ಮಾಡಿರಲಿಲ್ಲ. ಈಗ ಅವರನ್ನು ಸಂಪುಟಕ್ಕೆ ತೆಗೆದುಕೊಂಡಿರುವುದು ವಿರೋಧ ಪಕ್ಷಗಳ ಆಕ್ಷೇಪಕ್ಕೆ ಕಾರಣವಾಗಿದೆ.
2 BJP ministers removed in J&K for attending a pro-rapist rally & a MLA who is reported to have attended the same rally is promoted as a minister. Why are the BJP/ @MehboobaMufti confused about where they stand on the #Kathua rape?
— Omar Abdullah (@OmarAbdullah) 30 April 2018
'ಅತ್ಯಾಚಾರಿಗಳ ಪರವಾದ ಸಮಾವೇಶದಲ್ಲಿ ಪಾಲ್ಗೊಂಡಿದ್ದಕ್ಕೆ ಬಿಜೆಪಿಯ ಇಬ್ಬರು ಸಚಿವರನ್ನು ಕಿತ್ತೊಗೆಯಲಾಯಿತು. ಆದರೆ ಅದೇ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎನ್ನಲಾದ ಶಾಸಕರನ್ನು ಸಚಿವರನ್ನಾಗಿ ಬಡ್ತಿ ನೀಡಲಾಗಿದೆ. ಬಿಜೆಪಿ ಮತ್ತು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕತುವಾರ ಅತ್ಯಾಚಾರ ಪ್ರಕರಣದಲ್ಲಿ ತಮ್ಮ ನಿಲುವಿನ ಬಗ್ಗೆ ಏಕಿಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
ಕತುವಾ ರೇಪ್ ಸಂತ್ರಸ್ತೆ ಪರ ನಿಂತ ಕೇರಳ ಲೆಕ್ಚರರ್ ಗೆ ಬಿಜೆಪಿಯಿಂದ ಬೆದರಿಕೆ
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಆ ಇಬ್ಬರೂ ಸಚಿವರು ಸಮಾವೇಶದಲ್ಲಿ ತಮ್ಮ ಹಾಜರಾತಿ ಬಗ್ಗೆ ತಪ್ಪು ಕಲ್ಪನೆ ಮೂಡಿದ್ದರಿಂದ ನೈತಿಕ ಆಧಾರದಲ್ಲಿ ರಾಜೀನಾಮೆ ನೀಡುವ ನಿರ್ಧಾರವನ್ನು ತಾವೇ ತೆಗೆದುಕೊಂಡರು ಎಂದು ಹೇಳಿದ್ದಾರೆ.