ದೆವ್ವದ ಭಯ ಹೊಡೆದೋಡಿಸಲು ಸ್ಮಶಾನದಲ್ಲಿ ಮಲಗಿದ ಶಾಸಕ
ಹೈದರಾಬಾದ್, ಜೂನ್ 26: ಜನರಲ್ಲಿರುವ ಮೂಢ ನಂಬಿಕೆ ಹೋಗಲಾಡಿಸಲು ಏನೇನೋ ಪ್ರಯತ್ನಗಳನ್ನು ಪಡುವವರಿದ್ದಾರೆ. ಅದೇ ರೀತಿ ಇಲ್ಲೊಬ್ಬರು ಶಾಸಕರು ಮೂರು ದಿನಗಳ ಕಾಲ ಸ್ಮಶಾನದಲ್ಲೇ ಮಲಗಿ ಜನರಲ್ಲಿದ್ದ ದೆವ್ವ, ಪ್ರೇತದ ಭಯ ಹೋಗಲಾಡಿಸಲು ಯತ್ನಿಸಿದ್ದಾರೆ.
ಪಶ್ಚಿಮ ಗೋದಾವರಿ ಕ್ಷೇತ್ರದ ಟಿಡಿಪಿ ಶಾಸಕ ನಿಮ್ಮಲ ರಾಮನಾಯ್ಡು ಅವರೇ ಈ ರೀತಿ ಸ್ಮಶಾನದಲ್ಲಿ ಮಲಗಿದವರಾಗಿದ್ದಾರೆ. ಪಲಕೊಳೆ ಸ್ಮಶಾನದಲ್ಲಿ ಅವರು ಈ ರೀತಿ ಮಲಗಿದ್ದಾರೆ.
ಪಲಕೊಳೆ ಸ್ಮಶಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಶಾಸಕರು ಕೈಗೊಂಡಿದ್ದರು. ಆದರೆ ಕೆಲಸಕ್ಕೆ ಯಾವುದೇ ಕಾರ್ಮಿಕರು ಬರುತ್ತಿರಲಿಲ್ಲ. ಈ ದೂರನ್ನು ಸ್ಥಳೀಯ ಸಂಸ್ಥೆ ಅಧಿಕಾರಿಗಳು ಶಾಸಕರಿಗೆ ಮುಟ್ಟಿಸಿದ್ದರು. ಭಯದಿಂದ ಕಾರ್ಮಿಕರು ಕೆಲಸ ತಪ್ಪಿಸಿಕೊಳ್ಳುತ್ತಿದ್ದರು.
ಹೀಗಿರುವಾಗ ಕಾರ್ಮಿಕರು ಮತ್ತು ಜನರ ಭಯ ಹೋಗಲಾಡಿಸಲು ಸ್ವತಃ ಶಾಸಕರೇ ಸ್ಮಶಾನದಲ್ಲಿ ಮಲಗುವ ತೀರ್ಮಾನಕ್ಕೆ ಬಂದಿದ್ದರು. ಜೂನ್ 22ರಿಂದ ನಿರಂತರ ಮೂರು ದಿನಗಳ ಕಾಲ ರಾತ್ರಿ ವೇಳೆ ಅವರು ಸ್ಮಶಾನದಲ್ಲಿ ಮಲಗಿ ಇಲ್ಲಿ ಭೂತ, ದೆವ್ವ, ಪ್ರೇತ ಯಾವುದೂ ಇಲ್ಲ; ಹೆದರಬೇಡಿ ಎಂದು ಜನರಿಗೆ ಮನವರಿಕೆ ಮಾಡಿದ್ದಾರೆ.
ರುದ್ರಭೂಮಿಯ ಬಯಲಲ್ಲಿ ಕೇವಲ ಆಗಸದಡಿಯಲ್ಲಿ ಫೋಲ್ಡಿಂಗ್ ಕಾಟ್ ಮೇಲೆ ಮೂರು ದಿನಗಳ ಕಾಲ ರಾಮನಾಯ್ಡು ಮಲಗಿದ್ದರು. ಅವರ ಈ ಮೂಢ ನಂಬಿಕೆ ವಿರೋಧಿ ಹೋರಾಟಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
TDP MLA Nimmala Rama Naidu deserves praise for spending a night at a crematorium where workers had refused to enter after dark to do modernisation work out of fear of ‘spirits’ pic.twitter.com/NLvP2yzNnw
— Pinarayi Vijayan (@vijayanpinarayi) June 24, 2018
ಕರ್ನಾಟಕದಲ್ಲಿಯೂ ಇದೇ ರೀತಿ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಸ್ಮಶಾನದಲ್ಲಿ ಮಲಗುವ, ಗ್ರಹಣದಂದೇ ಊಟ ಆಯೋಜನೆ ಮಾಡುವ ಪರಿಪಾಠಗಳನ್ನು ಇಟ್ಟುಕೊಂಡು ಬಂದಿದ್ದಾರೆ. ಜಾರಕಿಹೊಳಿಯವರು ಕೂಡ ತಮ್ಮದೇ ಆದ ನೆಲೆಯಲ್ಲಿ ಈ ರೀತಿಯ ಮೂಢ ನಂಬಿಕೆಗಳ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದಾರೆ.