ರಾಹುಲ್ ಪ್ರಚಾರ ಸಭೆಯಲ್ಲಿ ದಿಗ್ವಿಜಯ್ ಫೋಟೋ ನಾಪತ್ತೆ
ಭೋಪಾಲ್, ಸೆಪ್ಟೆಂಬರ್ 18: ಇದೇನು ಆಕಸ್ಮಿಕವೋ, ಉದ್ದೇಶ ಪೂರ್ವಕವೋ ಯಾರದ್ದೋ ಕುಹಕವೋ ಗೊತ್ತಿಲ್ಲ. ಮಧ್ಯಪ್ರದೇಶದ ಮುಂದಿನ ಸಿಎಂ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಕಾಂಗ್ರೆಸ್ಸಿನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರಿಗೆ ಭಾರಿ ಅಪಮಾನವಾಗಿದೆ.
ಎಐಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಪಾಲ್ಗೊಂಡಿದ್ದರು. ಆದರೆ, ರಾಹುಲ್ ಅವರಿದ್ದ ವೇದಿಕೆ, ಅಲ್ಲಿಗೆ ಹೋಗಿ ಬರುವ ಹಾದಿಯಲ್ಲಿದ್ದ ಪೋಸ್ಟರ್, ಬಂಟಿಂಗ್ಸ್, ಕಟೌಟ್ ಗಳಲ್ಲಿ ಎಲ್ಲೂ ಕೂಡಾ ದಿಗ್ವಿಜಯ ಸಿಂಗ್ ಅವರ ಫೋಟೋ ಕಾಣಿಸಲಿಲ್ಲ
ಚುನಾವಣಾ ಪ್ರಚಾರಕ್ಕೆ ರಾಹುಲ್ ಅವರು ನಾಂದಿ ಹಾಡಲು ಇಲ್ಲಿಗೆ ಬಂದಿದ್ದ ರಾಹುಲ್ ಅವರು ಎಂದಿನಂತೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಿಎಚ್ಇಎಲ್ ದಸರಾ ಮೈದಾನದಲ್ಲಿ ರಾಹುಲ್ ಭಾಷಣದಲ್ಲಿ ಅಪನಗದೀಕರಣ, ರಫೇಲ್ ವಿಮಾನ ಖರೀದಿಯನ್ನು ದೊಡ್ಡ ಹಗರಣಗಳು ಎಂದರು. ಮೋದಿ ಸರ್ಕಾರವು ನಾಲ್ಕು ವರ್ಷಗಳಲ್ಲಿ ಮಹಾ ಭ್ರಷ್ಟಾಚಾರ ಮಾಡಿದೆ ಎಂದರು.
ವೇದಿಕೆಯೇರಿದ್ದ ದಿಗ್ವಿಜಯ್ ಸಿಂಗ್
ಸಮಾರಂಭ ನಡೆದ ಮೈದಾನದಲ್ಲಿದ್ದ ಪೋಸ್ಟರ್ ಗಳಲ್ಲೂ ದಿಗ್ವಿಜಯ್ ಸಿಂಗ್ ಬಗ್ಗೆ ಉಲ್ಲೇಖವಿರಲಿಲ್ಲ. ಕಮಲ್ ನಾಥ್ ಹಾಗೂ ಜ್ಯೋತಿರಾದಿತ್ಯ ಸಿಂಧ್ಯಾ ಫೋಟೋಗಳಿದ್ದವು. ಮೈದಾನಕ್ಕೆ ಬರುವ ಮುನ್ನ 12 ಕಿ. ಮೀ ಹಾದಿಯಲ್ಲಿ ಎಲ್ಲೂ ಕೂಡಾ ದಿಗ್ವಿಜಯ್ ಸಿಂಗ್ ಫೋಟೊ ಕಾಣಿಸಿರಲಿಲ್ಲ.
ಶಿವಭಕ್ತನೆಂದು ಬಣ್ಣಿಸುವ ಬ್ಯಾನರ್ ಹಾಗೂ ವೇಷ
ಕೈಲಾಸ- ಮಾನಸ ಸರೋವರ ಯಾತ್ರೆ ಅರ್ಧಕ್ಕೆ ಮೊಟಕುಗೊಳಿಸಿ ಭಾರತ್ ಬಂದ್ ಗಾಗಿ ರಾಹುಲ್ ಅವರು ಹಿಂದಿರುಗಿದ್ದರು. ಯಾತ್ರೆಗೆ ತೆರಳಿ ವಾಪಸ್ ಬಂದ ರಾಹುಲ್ ಅವರನ್ನು ಶಿವಭಕ್ತ ಎಂದು ಬಿಂಬಿಸಿ ಬ್ಯಾನರ್ಗಳನ್ನು ಹಾಕಲಾಗಿದೆ. ಪೋಸ್ಟರ್ ಗಳು,ವೇಷಧಾರಿಗಳು ರಾಹುಲ್ ರನ್ನು ಸ್ವಾಗತಿಸಿದರು.
30 ಬಿಜೆಪಿ ಶಾಕಸರು ಟಿಕೆಟ್ ಕೇಳಿದ್ದಾರೆ
ಮುಂಬರುವ ವಿಧಾನ ಸಭಾ ಚುನಾವಣೆಗೆ ಪೂರ್ವ ತಯಾರಿಯೆಂದೆ ಬಿಂಬಿಸಲಾದ ಈ ಸಮಾರಂಭವು ಯಶಸ್ವಿಯಾಗಿದೆ. ಮುಂಬರುವ ಚುನಾವಣೆಗಾಗಿ 2,500ಕ್ಕೂ ಹೆಚ್ಚು ಮುಖಂಡರು ಟಿಕೆಟ್ ಬಯಸಿದ್ದಾರೆ. ಇದರಲ್ಲಿ 30 ಮಂದಿ ಬಿಜೆಪಿ ಶಾಸಕರೂ ಇದ್ದಾರೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಕಮಲ್ನಾಥ್ ಘೋಷಿಸಿದ್ದಾರೆ.
|
ನಾನು ಸಿಎಂ ಅಭ್ಯರ್ಥಿಯಲ್ಲ
ದಿಗ್ವಿಜಯ್ ಸಿಂಗ್ ಅವರು ಮತ್ತೆ ಸಿಎಂ ಆಗುತ್ತಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಆಡಳಿತ ಅಂತ್ಯ ಕಾಣಲಿದೆ ಎಂಬ ಸುದ್ದಿ ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಯಾರೋ ಸಾಮಾಜಿಕ ಜಾಲ ತಾಣದಲ್ಲಿ ಅಭಿಯಾನ ಮಾಡುತ್ತಿದ್ದಾರೆ. ಆದರೆ, ನಾನು ಸಿಎಂ ಅಭ್ಯರ್ಥಿಗಳ ರೇಸಿನಲ್ಲಿಲ್ಲ.
ರಾಮ ಮಂದಿರ ಬಗ್ಗೆ ಹೇಳಿಕೆ ನೀಡಿದ ದಿಗ್ವಿಜಯ್
ರಾಮ ಮಂದಿರ, ರಾಮರಥ ನಿರ್ಮಾಣದ ಬಗ್ಗೆ ದಿಗ್ವಿಜಯ್ ಸಿಂಗ್ ಅವರು ಹೇಳಿಕೆ ನೀಡಿದ್ದಕ್ಕೆ ಬಿಜೆಪಿ ಟಾಂಗ್ ನೀಡಿದ್ದು, ಇದು ಒಳ್ಳೆ ವಿಚಾರ, ಸಂಸದರಾಗಿರುವ ದಿಗ್ವಿಜಯ್ ಅವರು ಬಿಜೆಪಿಯನ್ನು ಸಂಸತ್ತಿನಲ್ಲಿ ಬೆಂಬಲಿಸಿ ಎಂದಿದೆ.