ಭಾರತದಲ್ಲಿ ಸ್ವಾತಂತ್ರ್ಯವೇ ಇಲ್ಲ: ಅಮೆರಿಕ ಎನ್ಜಿಒ ವರದಿ, ಸರ್ಕಾರದ ತಿರುಗೇಟು
ನವದೆಹಲಿ, ಮಾರ್ಚ್ 5: ಸ್ವತಂತ್ರ ರಾಷ್ಟ್ರ ಎಂಬ ಭಾರತದ ಮಾನ್ಯತೆಯು 'ಭಾಗಶಃ ಸ್ವತಂತ್ರ' ಎಂಬಲ್ಲಿಗೆ ಕುಸಿದಿದೆ ಎಂಬ 'ಫ್ರೀಡಂ ಹೌಸ್' ವರದಿಯು 'ದಾರಿತಪ್ಪಿಸುವ, ಅವಾಸ್ತವಿಕ ಹಾಗೂ ತಪ್ಪಾಗಿ ಬಿಂಬಿಸಿದ' ಆರೋಪ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಮೆರಿಕ ಮೂಲದ ಚಿಂತಕರ ಚಾವಡಿಯ ವರದಿಗೆ ಭಾರತ ತೀಕ್ಷ್ಣ ಉತ್ತರ ನೀಡಿದೆ.
ಅಮೆರಿಕ ಸರ್ಕಾರದ ಅನುದಾನಿತ, ಪ್ರಜಾಪ್ರಭುತ್ವ, ರಾಜಕೀಯ ಸ್ವಾತಂತ್ರ್ಯ ಮತ್ತು ಮಾನವಹಕ್ಕುಗಳ ಸಂಶೋಧನೆ ಹಾಗೂ ವಕಾಲತ್ತುಗಳನ್ನು ನಡೆಸುವ ಎನ್ಜಿಒ ಫ್ರೀಡಂ ಹೌಸ್ ತನ್ನ ವರದಿಯಲ್ಲಿ, ಭಾರತದಲ್ಲಿನ ನಾಗರಿಕ ಸ್ವಾತಂತ್ರ್ಯವು ನರೇಂದ್ರ ಮೋದಿ ಅವರು ಪ್ರಧಾನಿಯಾದ ಸಂದರ್ಭದಿಂದ ಕುಸಿಯುತ್ತಿದೆ ಎಂದು ಹೇಳಿತ್ತು.
ಭಾರತದಲ್ಲಿ ಅತಿಯಾದ ಪ್ರಜಾಪ್ರಭುತ್ವ: ಟೀಕೆಗೊಳಗಾದ ನೀತಿ ಆಯೋಗದ ಸಿಇಒ
'ಭಾರತದ ಅನೇಕ ರಾಜ್ಯಗಳು ರಾಷ್ಟ್ರಮಟ್ಟದಲ್ಲಿ ಇರುವ ಪಕ್ಷವಲ್ಲದೆ ಬೇರೆ ಪಕ್ಷಗಳ ಆಳ್ವಿಕೆಯಿದೆ. ಇಲ್ಲಿನ ಚುನಾವಣಾ ಪ್ರಕ್ರಿಯೆಯನ್ನು ಸ್ವತಂತ್ರ ಚುನಾವಣಾ ಸಂಸ್ಥೆಯು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುತ್ತಿದೆ. ಈ ಸಂಸ್ಥೆಯ ಶ್ರೇಯಾಂಕವು ವಾಸ್ತವಕ್ಕಿಂತ ದೂರ ಇರುವ ಸಂಗತಿಗಳಿಂದ ತಪ್ಪಾಗಿ ನೀಡಲಾಗಿದೆ' ಎಂದು ವರದಿಯಲ್ಲಿನ ಪ್ರತಿ ಅಂಶಕ್ಕೂ ಸರ್ಕಾರ ವಿವರಣೆ ನೀಡಿದೆ. ಮುಂದೆ ಓದಿ.
ವರದಿಯಲ್ಲಿನ ಆರೋಪಗಳು
'ಡೆಮಾಕ್ರಸಿ ಅಂಡರ್ ಸೀಜ್' ಎಂಬ ಶೀರ್ಷಿಕೆಯ ವರದಿಯಲ್ಲಿ, ಭಾರತದ ಮಾನ್ಯತೆಯು ಮುಕ್ತ ದೇಶದಿಂದ 'ಭಾಗಶಃ ಮುಕ್ತ' ಎಂದು ಬದಲಾಗಿದೆ ಎಂಬುದಾಗಿ ಹೇಳಿದೆ. ಭಾರತದ ಅತಿ ದೊಡ್ಡ ಪ್ರಜಾಪ್ರಭುತ್ವವು ಈಗ ಅಧಿಕಾರಶಾಹಿಯತ್ತ ಕುಸಿಯುತ್ತಿದೆ. ದೆಹಲಿ ಗಲಭೆಯ ವೇಳೆ ಮುಸ್ಲಿಮರ ವಿರುದ್ಧ ಗುಂಪು ಹಿಂಸಾಚಾರ ನಡೆದಿದೆ. ಟೀಕಾಕಾರರ ಮೇಲೆ ದೇಶದ್ರೋಹದ ಪ್ರಕರಣ ವಿಧಿಸಲಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಮನಬಂದಂತೆ ವಿಧಿಸಲಾದ ಲಾಕ್ಡೌನ್ನಿಂದ ವಲಸಿಗರ ಬಿಕ್ಕಟ್ಟು ಉಂಟಾಗಿದೆ ಎಂದು ಆರೋಪಿಸಿದೆ.
ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳುತ್ತಿದ್ದೇವೆ
'ಭಾರತ ಸರ್ಕಾರವು ತನ್ನ ಎಲ್ಲ ನಾಗರಿಕರನ್ನು ದೇಶದ ಸಂವಿಧಾನಕ್ಕೆ ಅನುಗುಣವಾಗಿ ಸಮಾನವಾಗಿ ನೋಡಿಕೊಳ್ಳುತ್ತಿದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲ ಕಾನೂನುಗಳೂ ಅನ್ವಯವಾಗುತ್ತಿವೆ. ಕಾನೂನು ಮತ್ತು ಸುವ್ಯವಸ್ಥೆಯ ವಿಷಯಗಳಲ್ಲಿ ಆರೋಪಿಯ ಅಸ್ಮಿತೆಯಾಚೆ ಕಾನೂನು ಪ್ರಕ್ರಿಯೆ ಪಾಲಿಸಲಾಗುತ್ತಿದೆ' ಎಂದು ಮುಸ್ಲಿಮರ ವಿರುದ್ಧ ಕ್ರಮದ ಆರೋಪಗಳನ್ನು ಸರ್ಕಾರ ನಿರಾಕರಿಸಿದೆ.
130 ಕೋಟಿ ಜನರು ಶಕ್ತಿಶಾಲಿ ಸರ್ಕಾರ ರಚಿಸಿದ್ದಾರೆ: ಜಪಾನ್ನಲ್ಲಿ ಮೋದಿ
ಎಲ್ಲವೂ ಕಾನೂನುಬದ್ಧವಾಗಿದೆ
'2019ರ ಜನವರಿಯಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆಗೆ ನಿರ್ದಿಷ್ಟವಾಗಿ ಸಂಬಂಧಿಸಿದಂತೆ ಕಾನೂನು ವ್ಯವಸ್ಥೆಯು ಪಕ್ಷಾತೀತವಾಗಿ ಮತ್ತು ನ್ಯಾಯೋಚಿತ ರೀತಿಯಲ್ಲಿ ಕ್ರಮ ತೆಗೆದುಕೊಂಡಿದೆ. ಸನ್ನಿವೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕಾನೂನುಬದ್ಧ ಹಾಗೂ ಸೂಕ್ತ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಎಲ್ಲ ದೂರು/ಕರೆಗಳಲ್ಲಿ ಕಾನೂನು ಹಾಗೂ ಪ್ರಕ್ರಿಯೆಗಳಿಗೆ ಅನುಗುಣವಾಗಿ ಅಗತ್ಯ ಕಾನೂನು ಮತ್ತು ತಡೆ ಕ್ರಿಯೆಗಳನ್ನು ಕಾನೂನು ಜಾರಿ ಸಂಸ್ಥೆಗಳು ಅನುಸರಿಸಿದೆ' ಎಂದು ವಿವರಣೆ ನೀಡಿದೆ.
ಪೊಲೀಸ್ ವ್ಯವಸ್ಥೆ ರಾಜ್ಯ ಸರ್ಕಾರಗಳದ್ದು
ದೇಶದ್ರೋಹ ಕಾನೂನು ಬಳಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸರ್ಕಾರ, 'ಸಾರ್ವಜನಿಕ ಸುವ್ಯವಸ್ಥೆ' ಮತ್ತು 'ಪೊಲೀಸ್' ಎರಡೂ ರಾಜ್ಯ ಸರ್ಕಾರದ ವಿಷಯಗಳು. ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ ಹಾಗೂ ಅಪರಾಧಗಳ ತನಿಖೆ ನಡೆಸುವ ಹೊಣೆಗಾರಿಕೆ ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದು. ಹೀಗಾಗಿ ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದೆ.
ಜಾಗತಿಕ ಪ್ರಜಾಪ್ರಭುತ್ವ ಸ್ಥಾನದಲ್ಲಿ ಹಿಂಬಡ್ತಿ ಪಡೆದ ಭಾರತ
ಲಾಕ್ಡೌನ್ ಟೀಕೆಗೆ ಪ್ರತಿಕ್ರಿಯೆ
ಲಾಕ್ಡೌನ್ ಕುರಿತಾದ ಟೀಕೆಗೆ ಪ್ರತಿಕ್ರಿಯಿಸಿರುವ ಸರ್ಕಾರ, ಜನರು ಗುಂಪುಗೂಡಿಸಾಗುವ ಯಾವುದೇ ಚಲನವಲನಗಳು ದೇಶದಲ್ಲಿ ವೇಗವಾಗಿ ಕಾಯಿಲೆ ಹರಡುವ ಅಪಾಯವಿತ್ತು. ಈ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು, ಜಾಗತಿಕ ಅನುಭವದೊಂದಿಗೆ ಮತ್ತು ದೇಶದಲ್ಲಿ ವಿವಿಧ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಸ್ಥಿರ ನಿಯಮಗಳನ್ನು ಅನುಸರಿಸಲು ರಾಷ್ಟ್ರವ್ಯಾಪಿ ಲಾಕ್ಡೌನ್ ಪ್ರಕಟಿಸಲಾಗಿತ್ತು ಎಂದು ವಿವರಿಸಿದೆ.
ಅಧಿಕಾರಶಾಹಿಗಳ ವಿಜೃಂಭಣೆ
ಬುಧವಾರ ಪ್ರಕಟವಾಗಿದ್ದ ಈ ವರದಿಯಲ್ಲಿ ತನ್ನ ರಾಜಕೀಯ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯದ ಕುಸಿತದ ಕಾರಣಕ್ಕೆ ಕೆಳಮಟ್ಟದ ಇಳಿದಿರುವ 73 ದೇಶಗಳ ಪೈಕಿ ಭಾರತವೂ ಒಂದು ಎಂದು ಹೇಳಲಾಗಿದೆ. 2014ರಲ್ಲಿ ಮೋದಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಪ್ರಜಾಪ್ರಭುತ್ವ ಮತ್ತು ಅಧಿಕಾರಶಾಹಿಯಲ್ಲಿನ ಅಂತಾರಾಷ್ಟ್ರೀಯ ಸಮತೋಲನದಲ್ಲಿ ಭಾರಿ ಬದಲಾವಣೆಯಾಗಿವೆ. ನಿರಂಕುಶಾಧಿಕಾರಿಗಳು ತಮ್ಮ ಅಪರಾಧಗಳಿಂದ ವಿನಾಯಿತಿಯನ್ನು ಅನುಭವಿಸುತ್ತಿದ್ದಾರೆ. ಮತ್ತು ಭಿನ್ನಮತೀಯರನ್ನು ಹತ್ತಿಕ್ಕಿ ಅಧಿಕಾರದಲ್ಲಿ ಇರಲು ಹೊಸ ಅವಕಾಶಗಳನ್ನು ಆಕ್ರಮಿಸುತ್ತಿದ್ದಾರೆ ಎಂದು ವರದಿ ಹೇಳಿದೆ.