ಹಲೋ, ಕೊವಿಡ್-19 ಸೋಂಕಿತರೇ ಪ್ಲಾಸ್ಮಾ ಬೇಕಾದಲ್ಲಿ 7000 ರೂ. ಪಾವತಿಸಿ!
ಬೆಂಗಳೂರು, ಅಕ್ಟೋಬರ್.01: ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗಾಗಿ ಪ್ಲಾಸ್ಮಾ ಬ್ಯಾಂಕ್ ತೆರೆಯಲಾಗಿದ್ದು, ಒಂದು ಬಾರಿ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳಿಂದ ಪ್ಲಾಸ್ಮಾ ಸಂಗ್ರಹಿಸಲಾಗುತ್ತಿದೆ. ಹೀಗೆ ಪ್ಲಾಸ್ಮಾ ಸಂಗ್ರಹಿಸುವಲ್ಲೂ ವಂಚನೆ ನಡೆದಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಕೊವಿಡ್-19 ಸೋಂಕಿತರ ಕುಟುಂಬ ಸದಸ್ಯರನ್ನು ಕರೆಸಿಕೊಂಡು ತಮ್ಮ ಪ್ಲಾಸ್ಮಾ ದಾನ ಮಾಡುವುದಾಗಿ ನಂಬಿಸಿ ಹಲವು ದುಷ್ಕರ್ಮಿಗಳು ಹಣ ಪಡೆದುಕೊಳ್ಳುತ್ತಿದ್ದಾರೆ. ಹಣ ನೀಡಿದ ವಂಚಿತರು ಬಾಯಿ ಬಿಟ್ಟಿಕೊಂಡು ನಿಲ್ಲುವಂತಾ ಸ್ಥಿತಿ ನಿರ್ಮಾಣವಾಗಿದೆ ಎಂದು "ಬೆಂಗಳೂರು ಮಿರರ್" ವರದಿ ಮಾಡಿದೆ.
ಕೊವಿಡ್-19 ಚಿಕಿತ್ಸೆಗೆ ಪ್ಲಾಸ್ಮಾ ಬ್ಯಾಂಕ್ ತೆರೆದ ಮತ್ತೊಂದು ರಾಜ್ಯ
ಕೊರೊನಾವೈರಸ್ ಸೋಂಕಿತರ ಸಾವಿನ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯು ಪ್ಲಾಸ್ಮಾ ಥೆರಿಪಿ ಚಿಕಿತ್ಸೆ ಸೂಕ್ತ ಎಂದು ಹೇಳಿತ್ತು. ಈ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಕೊವಿಡ್-19 ಸೋಂಕಿತರ ಪ್ಲಾಸ್ಮಾ ಬ್ಯಾಂಕ್ ತೆರೆಯಲಾಗಿದ್ದು, ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ಪ್ಲಾಸ್ಮಾ ಚಿಕಿತ್ಸಾ ಘಟಕವನ್ನು ಸ್ಥಾಪಿಸಲಾಗಿತ್ತು.
ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಕೇಂದ್ರದ ಅನುಮತಿ
ಕಳೆದ ಜೂನ್.27ರಂದು ಕೇಂದ್ರ ಆರೋಗ್ಯ ಸಚಿವಾಲಯವು ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡುವುದಕ್ಕೆ ಅನುಮತಿ ನೀಡಿತ್ತು. ಕೊರೊನಾವೈರಸ್ ವೈದ್ಯಕೀಯ ನಿರ್ವಹಣಾ ಶಿಷ್ಟಾಚಾರದ ಅಡಿ ಪ್ರಾಯೋಗಿಕ ಹಂತದಲ್ಲಿ ಕೊವಿಡ್-19 ಸೋಂಕಿತರಿಗೆ ಈ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಆದರೆ ಭಾರತದಲ್ಲಿ ಈ ಪ್ಲಾಸ್ಮಾವನ್ನೇ ಕಪ್ಪು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವಂತಾ ರೂಢಿ ಬೆಳೆಸಿಕೊಳ್ಳಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ಲಾಸ್ಮಾ ಬೇಕಾದಲ್ಲಿ ಮುಂಗಡ ಹಣ ನೀಡಬೇಕು
ಕೊರೊನಾವೈರಸ್ ಸೋಂಕಿತರು ಮತ್ತು ಅವರ ಕುಟುಂಬ ಸದಸ್ಯರಲ್ಲಿನ ಆತಂಕದ ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಕೆಲಸ ನಡೆಯುತ್ತಿದೆ. ವಂಚಕರು ಪ್ಲಾಸ್ಮಾ ದಾನ ಮಾಡುವುದಾಗಿ ನಂಬಿಸಿ ಮುಂಚಿತವಾಗಿ ಹಣ ಪಡೆದುಕೊಳ್ಳುತ್ತಿದ್ದಾರೆ. ಮುಂಗಡ ಹಣವನ್ನು ಸಂಗ್ರಹಿಸಿಕೊಂಡು ನಂತರ ಕಣ್ಮರೆಯಾಗಿರುವ ಪ್ರಕರಣದ ಬಗ್ಗೆ ವರದಿ ಮಾಡಲಾಗಿದೆ.
ಮಹಿಳೆಯಿಂದ 7,000 ಪಡೆದವರ ಮೊಬೈಲ್ ಸ್ವಿಚ್ ಆಫ್
ಪ್ಲಾಸ್ಮಾ ದಾನದ ಹೆಸರಿನಲ್ಲಿ ಮಕ್ಮಲ್ ಟೋಪಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೋಲಾರ ಮೂಲದ ಸುಷ್ಮಾ ಎಂಬುವವರಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಟುಂಬ ಸದಸ್ಯರಲ್ಲಿ ಸುಷ್ಮಾ ಅವರ ತಂದೆಯ ಸ್ಥಿತಿ ಗಂಭೀರವಾಗಿತ್ತು. ತಂದೆಗೆ ಪ್ಲಾಸ್ಮಾ ಚಿಕಿತ್ಸೆ ಕೊಡಿಸುವುದಕ್ಕಾಗಿ ಆನ್ ಲೈನ್ ಮೂಲಕ ಮನವಿ ಸಲ್ಲಿಸಿದ್ದರು. ಈ ವೇಳೆ ಪ್ಲಾಸ್ಮಾ ದಾನ ಮಾಡುವುದಕ್ಕೆ ಮುಂದು ಬಂದ ವ್ಯಕ್ತಿಯೊಬ್ಬ ಮುಂಗಡವಾಗಿ 7,000 ರೂಪಾಯಿ ಪಾವತಿಸುವಂತೆ ಕೇಳಿದ್ದಾನೆ. ಹಣ ಪಡೆದ ವ್ಯಕ್ತಿಯ ಅನಂತರದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹೋಗಿರುವಂತಾ ಘಟನೆ ಬೆಳಕಿಗೆ ಬಂದಿದೆ. "ಈ ಘಟನೆ ಬೆನ್ನಲ್ಲೇ ಹಲವು ಮೊಬೈಲ್ ನಂಬರ್ ಗಳಿಂದ ಪ್ಲಾಸ್ಮಾ ದಾನ ಮಾಡುವುದಾಗಿ ಕರೆಗಳು ಬಂದವು. ತಮಗೆ ಆಗಿರುವ ವಂಚನೆ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದೇನೆ" ಎಂದು ಸುಷ್ಮಾ ತಿಳಿಸಿದ್ದಾರೆ.
ಗೂಗಲ್ ಪೇ ಮೂಲಕ 7,000 ರೂಪಾಯಿ ಟೋಪಿ
ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಮೊಹ್ಮದ್ ಇಸ್ಮಾಯಿಲ್ ಅವರಿಗೆ ಇದೇ ರೀತಿ ವಂಚಿಸಿರುವ ಪ್ರಕರಣದ ಬಗ್ಗೆ ಸ್ವತಃ ಅವರೇ ಹೇಳಿಕೆ ನೀಡಿದ್ದಾರೆ. "ಅಪರಿಚಿತ ವ್ಯಕ್ತಿಯೊಬ್ಬರು ತಮಗೆ ಪ್ಲಾಸ್ಮಾ ದಾನ ಮಾಡುವುದಾಗಿ ಕರೆ ಮಾಡಿದ್ದರು. ಪ್ಲಾಸ್ಮಾ ದಾನ ಮಾಡುವುದಕ್ಕಾಗಿ 7,000 ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು. ಗೂಗಲ್ ಪೇ ಮೂಲಕ ಹಣವನ್ನೂ ನಾನು ಪಾವತಿ ಮಾಡಿದೆ. ಬಳಿಕ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡಲು ಆತ ಬರುತ್ತಾನೆ ಎಂದು ಎದುರು ನೋಡುತ್ತಿದ್ದೆ. ಆದರೆ ಅಂತಿಮವಾಗಿ ಆತ ಮಾಡಿರುವ ವಂಚನೆ ಗೊತ್ತಾಯಿತು" ಎಂದು ಮೊಹ್ಮದ್ ಇಸ್ಮಾಯಿಲ್ ಹೇಳಿದ್ದಾರೆ.
ಪ್ಲಾಸ್ಮಾ ದಾನ ಮಾಡಿದರೆ ಸರ್ಕಾರದಿಂದ 5 ಸಾವಿರ
ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಪ್ಲಾಸ್ಮಾ ಬ್ಯಾಂಕ್ ಗಳನ್ನು ಸರ್ಕಾರವೇ ಆರಂಭಿಸಿದೆ. ಪ್ಲಾಸ್ಮಾ ದಾನಿಗಳಿದೆ ಸರ್ಕಾರದಿಂದಲೇ 5,000 ರೂಪಾಯಿ ಗೌರವ ಧನವನ್ನು ನೀಡಲಾಗುತ್ತದೆ. ಗಂಭೀರ ಸ್ಥಿತಿಯಲ್ಲಿರುವ ಕೊವಿಡ್-19 ಸೋಂಕಿತರಿಗೆ ಪ್ಲಾಸ್ಮಾ ಥೆರೆಪಿ ಚಿಕಿತ್ಸೆಗೆ ಪ್ಲಾಸ್ಮಾ ಬ್ಯಾಂಕ್ ನಲ್ಲಿ ಸಂಗ್ರಹಿಸಿದ ಪ್ಲಾಸ್ಮಾ ಬಳಕೆ ಮಾಡಿಕೊಳ್ಳಲಾಗುತ್ತದೆ. ಅದಕ್ಕಾಗಿ ಸೋಂಕಿತರು ನಿಗದಿತ ಕನಿಷ್ಠ ಮೊತ್ತವನ್ನು ಪಾವತಿಸಬೇಕು.
Recommended Video