ರೈಲ್ವೆ ಸುರಕ್ಷತೆಗೆ ಸಚಿವ ಗೋಯೆಲ್ ಸುದೀರ್ಘ ಸಭೆ, ಐದು ಸೂಚನೆಗಳು
ರೈಲ್ವೆ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಸುದೀರ್ಘ ಸಭೆ ನಡೆಸಿದ್ದಾರೆ. ರೈಲ್ವೆ ಮಂಡಳಿ ಹಾಗೂ ಸುರಕ್ಷತಾ ನಿರ್ದೇಶನಾಲಯದ ಎಲ್ಲ ಸದಸ್ಯರು ಇದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರೈಲ್ವೆ ಕಾರ್ಯವಟುವಟಿಕೆಯಲ್ಲಿನ ಸುರಕ್ಷತಾ ಕ್ರಮಗಳ ಸಮಗ್ರವಾಗಿ ಪರಿಶೀಲಿಸಲಾಯಿತು.
ಸುರಕ್ಷತಾ ಕ್ರಮಗಳ ಬಗ್ಗೆ ಸಂಪೂರ್ಣವಾದ ವಿವರ ನೀಡಲಾಯಿತು. ಇತ್ತೀಚೆಗೆ ಪದೇ ಪದೇ ಸಂಭವಿಸಿದ ರೈಲು ಅಪಘಾತಗಳಿಗೆ ಕಾರಣ ಏನು ಎಂಬ ಬಗ್ಗೆ ಸಮಗ್ರ ವಿಶ್ಲೇಷಣೆ ಮಾಡಲಾಯಿತು. "ಸುರಕ್ಷತೆ ಎಂಬುದು ನಮ್ಮ ಪ್ರಥಮ ಆದ್ಯತೆ. ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲೇ ಕೂಡದು" ಎಂದು ಸಚಿವ ಪಿಯೂಷ್ ಗೋಯಲ್ ಹೇಳಿದರು.
ರೈಲು ಅಪಘಾತಗಳು ಸಂಭವಿಸಲು ಮುಖ್ಯವಾದ ಎರಡು ಕಾರಣಗಳನ್ನು ಗುರುತಿಸಲಾಯಿತು:
1. 2016- 17ರಲ್ಲಿ ಕಾವಲುಗಾರರಿಲ್ಲದ ರೈಲ್ವೆ ಕ್ರಾಸಿಂಗ್ ಗಳಲ್ಲಿ ಶೇ 34ರಷ್ಟು ಅಪಘಾತಗಳು ಸಂಭವಿಸಿವೆ
2. ಹಳಿಗಳಲ್ಲಿನ ನ್ಯೂನ್ಯತೆ ಕಾರಣಕ್ಕೆ ರೈಲುಗಳು ಹಳಿ ತಪ್ಪುತ್ತಿವೆ
ಹಳ್ಳಿ ತಪ್ಪಿ ಸಂಭವಿಸುವ ರೈಲು ಅಪಘಾತಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕೂಡ ವಿಶೇಷವಾಗಿ ಗಮನ ಹರಿಸಲಾಯಿತು. ಅಪಘಾತಗಳು ಸಂಭವಿಸುವ ಪ್ರಮುಖ ಕಾರಣ ಇದು. ಆದ್ದರಿಂದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಕೆಲವು ಮುಖ್ಯ ಸೂಚನೆಗಳನ್ನು ನೀಡಿದರು.
1.ಭಾರತದಾದ್ಯಂತ ಇರುವ ಕಾವಲುಗಾರರಿಲ್ಲದ ರೈಲ್ವೆ ಕ್ರಾಸಿಂಗ್ ಅನ್ನು ಈಗಿನಿಂದ ಒಂದು ವರ್ಷದಲ್ಲಿ ಇಲ್ಲದಂತೆ ಮಾಡಬೇಕು. ಈ ಹಿಂದೆ ಅವಧಿಯನ್ನು ಮೂರು ವರ್ಷಕ್ಕೆ ಅಂತ ನಿಗದಿಪಡಿಸಲಾಗಿತ್ತು. ಆದರೆ ವೇಗವಾಗಿ, ಕೌಶಲದಿಂದ ಹಾಗೂ ನಿಗದಿತ ಅವಧಿಯಲ್ಲಿ ಅಂದರೆ ಒಂದು ವರ್ಷಕ್ಕಿಂತ ಮುಂಚೆ ಗುರಿ ತಲುಪಬೇಕು.
2.ಹಳಿಗಳ ಬದಲಾವಣೆ ಅಥವಾ ದುರಸ್ತಿಯನ್ನು ಆದ್ಯತೆ ಮೇಲೆ ಮಾಡಬೇಕು. ಎಲ್ಲೆಲ್ಲಿ ಅಪಘಾತಗಳು ಸಂಭವಿಸಲು ಕಾರಣವಾಗುತ್ತಿದೆಯೋ ಮತ್ತು ಎಲ್ಲಿ ಹಳಿ ಬದಲಾವಣೆ ಬಾಕಿ ಅಲ್ಲೆಲ್ಲ ತಕ್ಷಣವೇ ಹೊಸ ಹಳಿ ಹಾಕಬೇಕು.
3.ಹೊಸ ಹಳಿಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಬೇಕು ಆದ್ದರಿಂದ ಅಗತ್ಯ ವಸ್ತುಗಳ ಖರೀದಿ ಕಾರ್ಯ ದೊಡ್ಡ ಮಟ್ಟದಲ್ಲಿ ಆಗಬೇಕು3.
4.ಸಾಂಪ್ರದಾಯಿಕವಾದ ಐಸಿಎಫ್ ಮಾದರಿಯ ಕೋಚ್ ಗಳ ನಿರ್ಮಾಣ ಈಗಿನಿಂದಲೇ ನಿಲ್ಲಿಸಬೇಕು. ಮತ್ತು ಹೊಸ ಎಲ್ ಎಚ್ ಬಿ ಮಾದರಿಯ ಕೋಚ್ ಗಳನ್ನು ಮಾತ್ರ ನಿರ್ಮಿಸಬೇಕು
5.ಮಂಜು ನಿರೋಧಕ ಎಲ್ ಇಡಿ ದೀಪಗಳನ್ನು ಲೋಕೋಮೋಟಿವ್ಸ್ ನಲ್ಲಿ ಅಳವಡಿಸಬೇಕು. ಇಅದರಿಂದ ಮಂಜು ಮುಸುಕುವ ಋತುವಿನಲ್ಲಿ ಸುರಕ್ಷತೆ ಕಾರ್ಯಚಟುವಟಿಕೆ ನಡೆಸಲು ಸಾಧ್ಯ
ಈ ಎಲ್ಲ ಕಾರ್ಯಕ್ರಮಗಳ ಅನುಷ್ಠಾನ ಸರಿಯಾಗಿ ಆಗುತ್ತಿದೆಯೋ ಇಲ್ಲವೋ ಎಂಬ ಬಗ್ಗೆ ಕಾಲಕಾಲಕ್ಕೆ ನಿಗಾ ವಹಿಸಲು ರೈಲ್ವೆ ಮಂಡಳಿಗೆ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಸೂಚನೆ ನೀಡಿದರು.